ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಅಕ್ಕಮಹಾದೇವಿಯ ಜೀವನ, ಸಾಧನೆ ಹಾಗೂ ಆಧ್ಯಾತ್ಮಿಕ ಸಂದೇಶಗಳನ್ನು ಇಂದಿನ ಯುವ ಸಮುದಾಯ ಅಳವಡಿಸಿಕೊಂಡು ಉತ್ತಮ ಬದುಕು ಸಾಗಿಸಬೇಕು ಎಂದು ಶ್ರೀಶೈಲ ಜಗದ್ಗುರು ಡಾ.1008 ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.ಶ್ರೀಶೈಲ ಕ್ಷೇತ್ರದಲ್ಲಿ ನಡೆಯುತ್ತಿರುವ 17ನೇ ಇಷ್ಟಲಿಂಗ ಮಹಾಪೂಜೆಯ ಅಂಗವಾಗಿ ಭಾನುವಾರ ಸಂಜೆ ಅಕ್ಕಮಹಾದೇವಿ ಕುರಿತು ವಿಶೇಷ ಪ್ರವಚನ ಕಾರ್ಯಕ್ರಮಕ್ಕೆ ಜಗದ್ಗುರುಗಳು ಚಾಲನೆ ನೀಡಿ ಮಾತನಾಡಿದರು. ಬಳಿಕ ಜೈನಾಪುರದ ರೇಣುಕ ಶಿವಾಚಾರ್ಯರು ಅಕ್ಕಮಹಾದೇವಿಯ ಜೀವನ ಚರಿತ್ರೆ ಹಾಗೂ ಆಧ್ಯಾತ್ಮಿಕ ಸಾಧನೆ ಕುರಿತು ಪ್ರವಚನ ನೀಡಿದರು.
ತಿಂಗಳ ಕಾಲ ಪ್ರವಚನ; ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳ ಕಾಲ ಪ್ರತಿದಿನ ಸಂಜೆ 6 ಗಂಟೆಗೆ ಪ್ರವಚನ ಕಾರ್ಯಕ್ರಮ ನಡೆಯಲಿದೆ. ಅಕ್ಕಮಹಾದೇವಿಯ ಜೀವನ, ವಚನ ಸಾಹಿತ್ಯ, ಶಿವಭಕ್ತಿ ಹಾಗೂ ಆಧ್ಯಾತ್ಮಿಕ ಚಿಂತನೆಗಳ ಕುರಿತು ಪ್ರವಚನಕಾರರು ಭಕ್ತರಿಗೆ ತಿಳಿಸಿಕೊಡಲಿದ್ದಾರೆ.ಕಾರ್ಯಕ್ರಮದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ ಶ್ರೀಗಳು, ಮಠಾಧೀಶರು ಹಾಗೂ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ನೂರಾರು ಮಹಿಳೆಯರು ಸಹ ಭಾಗವಹಿಸಿ ಅಕ್ಕಮಹಾದೇವಿಯ ಜೀವನಾದರ್ಶಗಳನ್ನು ಆಲಿಸಿದರು. ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಶ್ರೀಶೈಲಂ ಕ್ಷೇತ್ರದಲ್ಲಿ ನಡೆಯುತ್ತಿರುವ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ಭಕ್ತರಲ್ಲಿ ವಿಶೇಷ ಉತ್ಸಾಹ ಮೂಡಿಸಿವೆ ಎಂದರು.