ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಶ್ರಾವಣ ಮಾಸದ ಹಿನ್ನೆಲೆಯಲ್ಲಿ ಶ್ರೀಶೈಲ ಕ್ಷೇತ್ರದಲ್ಲಿ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಆರಂಭಗೊಂಡಿವೆ. ಕೈಲಾಸ ಪರ್ವತ ದರ್ಶನ ಪಡೆದು ಶ್ರೀಶೈಲಕ್ಕೆ ಆಗಮಿಸಿದ ಜಗದ್ಗುರುಗಳಿಗೆ ಭಕ್ತರು ಹಾಗೂ ಶ್ರೀಶೈಲ ಕ್ಷೇತ್ರದ ಗಣ್ಯರು ಅದ್ಧೂರಿಯಾಗಿ ಸ್ವಾಗತಿಸಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಶ್ರೀಶೈಲ ಕ್ಷೇತ್ರದಲ್ಲಿ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಆರಂಭಗೊಂಡಿವೆ. ಕೈಲಾಸ ಪರ್ವತ ದರ್ಶನ ಪಡೆದು ಶ್ರೀಶೈಲಕ್ಕೆ ಆಗಮಿಸಿದ ಜಗದ್ಗುರುಗಳಿಗೆ ಭಕ್ತರು ಹಾಗೂ ಶ್ರೀಶೈಲ ಕ್ಷೇತ್ರದ ಗಣ್ಯರು ಅದ್ಧೂರಿಯಾಗಿ ಸ್ವಾಗತಿಸಿದರು.

ಪ್ರಸಕ್ತ ಸಾಲಿನ ಶ್ರಾವಣ ಮಾಸದ ಧಾರ್ಮಿಕ ಕಾರ್ಯಕ್ರಮಗಳಿಗೆ ಸೋಮವಾರ ಚಾಲನೆ ದೊರೆತಿದ್ದು, 17ನೇ ವರ್ಷದ ಇಷ್ಟಲಿಂಗ ಮಹಾಪೂಜೆ ಹಾಗೂ ತಪೋನುಷ್ಠಾನ ಆರಂಭವಾಗಿದೆ. ಪ್ರತಿದಿನ ಬೆಳಗ್ಗೆ 7 ಗಂಟೆಯಿಂದ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ.

ಶ್ರಾವಣ ಮಾಸವು ಶಿವನ ಆರಾಧನೆಗೆ ಅತ್ಯಂತ ಪವಿತ್ರವಾದ ಅವಧಿಯಾಗಿದೆ. ಈ ಮಾಸದಲ್ಲಿ ಶಿವನ ಧ್ಯಾನ, ಪೂಜೆ ಹಾಗೂ ಆರಾಧನೆ ಮಾಡುವುದರಿಂದ ಜೀವನದ ಪಾಪಗಳು ಪರಿಹಾರವಾಗುತ್ತವೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ತಿಳಿಸಿದರು.

ದೇಶದಲ್ಲಿ ಶಾಂತಿ, ನೆಮ್ಮದಿ ನೆಲೆಸಬೇಕು. ಉತ್ತಮ ಮಳೆ-ಬೆಳೆ ಆಗಿ ರೈತರು ಸೇರಿದಂತೆ ಸರ್ವರ ಬದುಕು ಸುಖ, ಸಮೃದ್ಧಿ ಹಾಗೂ ಶಾಂತಿಯಿಂದ ಕೂಡಿರಲಿ ಎಂದು ಜಗದ್ಗುರುಗಳು ಆಶಿಸಿದರು.

ಭಕ್ತರ ಭಕ್ತಿ ಸಮರ್ಪಣೆ; ಶ್ರಾವಣ ಮಾಸದ ಮೊದಲ ದಿನದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ ಶ್ರೀಗಳು, ಮಠಾಧೀಶರು ಹಾಗೂ ಭಕ್ತರು ಪಾಲ್ಗೊಂಡು ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿದರು. ಮುತ್ತುಸ್ವಾಮಿ ಹಿರೇಮಠ ಸೇರಿದಂತೆ ವಿವಿಧ ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದು, ಜಗದ್ಗುರುಗಳ ಆಶೀರ್ವಾದ ಪಡೆದರು.

ಶ್ರೀಶೈಲ ಕ್ಷೇತ್ರದಲ್ಲಿ ಶ್ರಾವಣ ಮಾಸದ ಅಂಗವಾಗಿ ನಡೆಯಲಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತರಲ್ಲಿ ಭಕ್ತಿ ಮತ್ತು ಆಧ್ಯಾತ್ಮಿಕ ಉತ್ಸಾಹ ಮೂಡಿಸಿವೆ ಎಂದು ಶ್ರೀಶೈಲ ಪೀಠದ ವಾರ್ತಾಧಿಕಾರಿ ಬಸಯ್ಯ ವಸ್ತ್ರದ ತಿಳಿಸಿದರು.