ಪ್ರಗತಿ ಪಥದಲ್ಲಿ ಅಳಣಾವರ ಸೌಹಾರ್ದ ಸಹಕಾರಿ: ಎಂ.ಸಿ. ಹಿರೇಮಠ

| Published : Apr 09 2024, 12:46 AM IST

ಸಾರಾಂಶ

ಗ್ರಾಹಕರು, ಠೇವಣಿದಾರರು ಮತ್ತು ಸಾಲಗಾರರು ಸಂಘದ ಬೆಳವಣಿಗೆಯಲ್ಲಿ ಕೈಜೊಡಿಸಿದ್ದಾರೆ. ಪ್ರಸ್ತಕ ವರ್ಷ ₹೮೩.೫೨ ಲಕ್ಷ ನಿವ್ವಳ ಲಾಭ ಗಳಿಸಲಾಗಿದೆ ಎಂದು ಸಹಕಾರಿಯ ಅಧ್ಯಕ್ಷ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ಎಂ.ಸಿ. ಹಿರೇಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಅಳ್ನಾವರ

ಇಲ್ಲಿನ ಅಳಣಾವರ ಸೌಹಾರ್ದ ಸಹಕಾರಿ ಸಂಘ ಆರ್ಥಿಕ ವರ್ಷದಲ್ಲಿ ಉತ್ತಮ ವ್ಯವಹಾರ ಮಾಡಿ ಪ್ರಗತಿ ಪಥದತ್ತ ದಾಪುಗಾಲು ಹಾಕಿದೆ. ೧೧ ವರ್ಷದ ಅಲ್ಪಾವಧಿಯಲ್ಲಿ ಸಹಕಾರಿಯು ಆರೋಗ್ಯಕರ ಬೆಳವಣಿಗೆ ಕಂಡಿದೆ. ನಮ್ಮ ನಿರೀಕ್ಷೆ ಮಟ್ಟಕ್ಕಿಂತ ಹೆಚ್ಚು ಪರಿಣಾಮಕಾರಿ ವ್ಯವಹಾರ ನಡೆದಿದೆ ಎಂದು ಸಹಕಾರಿಯ ಅಧ್ಯಕ್ಷ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ಎಂ.ಸಿ. ಹಿರೇಮಠ ಹೇಳಿದರು.

ಶನಿವಾರ ಸಹಕಾರಿಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಹಕಾರಿಯ ಆರ್ಥಿಕ ಸದೃಢತೆಗೆ ಷೇರು ಬಂಡವಾಳ ಪ್ರಾಮುಖ್ಯತೆ ವಹಿಸುತ್ತದೆ. ಕಳೆದ ವರ್ಷ ಇದ್ದ ₹ ೧.೨೪ ಕೋಟಿ ಷೇರು ಬಂಡವಾಳ ಪ್ರಸ್ತಕ ವರ್ಷದಲ್ಲಿ ₹೧.೫೦ ಕೋಟಿಗೆ ಹೆಚ್ಚಿದೆ. ಇದು ನಮ್ಮ ಹಣಕಾಸಿನ ಭದ್ರತೆಗೆ ಸಾಕ್ಷಿಯಾಗಿದೆ. ಬಡ್ಡಿ ದರದ ನಿಯಂತ್ರಣ ಸಾಧಿಸಲು ಹಲವಾರು ಉಪಯುಕ್ತ ಕ್ರಮ ಜರುಗಿಸಲಾಗಿದೆ ಎಂದರು.

ಗ್ರಾಹಕರು, ಠೇವಣಿದಾರರು ಮತ್ತು ಸಾಲಗಾರರು ಸಂಘದ ಬೆಳವಣಿಗೆಯಲ್ಲಿ ಕೈಜೊಡಿಸಿದ್ದಾರೆ. ಪ್ರಸ್ತಕ ವರ್ಷ ₹೮೩.೫೨ ಲಕ್ಷ ನಿವ್ವಳ ಲಾಭ ಗಳಿಸಲಾಗಿದೆ. ಇದು ನಮ್ಮ ಶ್ರಮಕ್ಕೆ ತಕ್ಕ ಹೆಮ್ಮೆಯ ಸಂಗತಿ. ನಮ್ಮ ಸಹಕಾರಿಯಲ್ಲಿ ಆನೇಕ ಸಣ್ಣ ಮತ್ತು ಮಧ್ಯಮ ವರ್ಗದ ಜನರು ಆರ್ಥಿಕ ಸಹಾಯ ಪಡೆದು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿ ತಾವು ಆರ್ಥಿಕ ಸಬಲತೆ ಸಾಧಿಸಿ ,ಸಂಘದ ಪ್ರಗತಿಗೆ ಕೈಜೊಡಿಸಿದ್ದಾರೆ. ಆಧುನಿಕ ತಂತ್ರಜ್ಞಾನ ಬಳಸಿ ಗ್ರಾಹಕರಿಗೆ ತ್ವರಿತ ಸೇವೆ ನೀಡಲಾಗುತ್ತಿದೆ. ಬಿಗಿಯಾದ ಸಾಲ ವಸೂಲಿ ಕ್ರಮ ಜರುಗಿಸಲಾಗಿದೆ. ಬರಗಾಲದ ಕರಾಳ ಛಾಯೆಯ ಮಧ್ಯ ನಮ್ಮ ಸಹಕಾರಿಯ ಆರ್ಥಿಕ ಸ್ಥಿತಿಗತಿ ಅವಲೋಕಿಸಿದಾಗ ಸಮ್ಮ ಪರಿಶ್ರಮಕ್ಕೆ ಫಲ ದೊರೆತ ಸಂತೃಪ್ತಿ ನಮಗಿದೆ ಎಂದರು.

ಆಡಳಿತ ಮಂಡಳಿ ನಿರ್ದೇಶನದ ವೇಗಕ್ಕೆ ತಕ್ಕಂತೆ ಸಿಬ್ಬಂದಿ ವರ್ಗ ಕಾರ್ಯ ನಿಭಾಯಿಸಿದೆ. ಗುಣಾತ್ಮಕ ಬೆಳವಣಿಗೆಗೆ ಎಲ್ಲ ಸಹಕಾರಿಗಳು ಕೈಜೊಡಿಸಿದ್ದಾರೆ. ಪ್ರಸಕ್ತ ವರ್ಷದ ಆರಂಭದಲ್ಲಿ ಇದ್ದ ಒಟ್ಟು ₹೧೪.೬೯ ಕೋಟಿ ಸಾಲ ಈ ವರ್ಷ ₹೧೬.೩೯ ಕೋಟಿಗೂ ಮೀರಿದೆ. ಸರಿಯಾಗಿ ಪಿಗ್ಮಿ ತುಂಬಿದವರಿಗೆ ₹೧ ಲಕ್ಷ ವರೆಗೆ ಸಾಲ ನೀಡಲಾಗುತ್ತಿದೆ ಎಂದರು.

ಮಾರುಕಟ್ಟೆಯಲ್ಲಿ ಹಣಕಾಸಿನ ನಿಯಂತ್ರಣದ ಜೊತೆಗೆ ಠೇವಣಿ ಸಂಗ್ರಹ ಮತ್ತು ಸಾಲ ನೀಡಲು ವಿಶೇಷ ಆಸಕ್ತಿ ವಹಿಸಲಾಗಿದೆ. ಕಳೆದ ವರ್ಷ ₹೧೫.೦೪ ಕೋಟಿ ಇದ್ದ ಠೇವು ಈ ವರ್ಷಕ್ಕೆ ₹೧೫.೯೩ ಕೋಟಿಗೆ ಹೆಚ್ಚಿದೆ ಎಂದರು.

ಉಪಾಧ್ಯಕ್ಷ ಅಮೃತ ಪಟೇಲ, ನಿರ್ದೇಶಕರಾದ ವೀರೇಶ ಲಿಂಗನಮಠ, ಸುರೇಶ ಕೊಡಳ್ಳಿ, ಬಸಯ್ಯ ಹಿರೇಮಠ, ಇಷಾರ್ದ ಅಹ್ಮದ್ ದಾಸ್ತಿಕೊಪ್ಪ, ನಾರಾಯಣ ಮೋರೆ, ಆನಂದ ಪೇಡ್ನೇಕರ, ಡಾ. ದಿಲೀಪಕುಮಾರ ಮನೋಳಿ, ವಿನಾಯಕ ಹಿರೇಮಠ, ಚಂದುಲಾಲ ರಂಗಾನಿ, ಡಾ. ಅಶೋಕ ಟೆಂಕಪ್ಪನವರ, ಲಲಿತಾ ಪಾಟೀಲ, ರೋಹಿಣಿ ತೊರಗಲಮಠ ಹಾಗೂ ವ್ಯವಸ್ಥಾಪಕ ಅಶೋಕ ಬ್ಯಾಹಟ್ಟಿ ಇದ್ದರು.