ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಬಳೇಅತ್ತಿಗುಪ್ಪೆ ಗ್ರಾಮದ ಡೇರಿ ಕಾರ್ಯದರ್ಶಿ ಹಣಕಾಸಿನ ವ್ಯವಹಾರದಲ್ಲಿ ವ್ಯತ್ಯಾಸ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಹಾಲು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಿ ಡೇರಿ ಎದುರು ಟೀ ತಯಾರಿಸಿ ಕುಡಿದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಡೇರಿ ಹಾಲು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಿ ಕಾರ್ಯದರ್ಶಿ ವಿರುದ್ಧ ಆಕ್ರೋಶ ಹೊರಹಾಕಿದರು. ಸಂಘದಲ್ಲಿನ ಹಣಕಾಸಿನ ವ್ಯವಹಾರದಲ್ಲಿ ಉಂಟಾಗಿರುವ ವ್ಯತ್ಯಾಸವನ್ನು ಪ್ರಶ್ನಿಸಿದ್ದಕ್ಕೆ ಡೇರಿ ಕಾರ್ಯದರ್ಶಿ, ಆಡಳಿತ ಮಂಡಳಿ ಸೇರಿದಂತೆ ಗ್ರಾಮದ ಯುವಕರಾದ ರಾಕೇಶ್, ಯೋಗೇಶ್ (ರಘು), ಶಂಕರ್ ಅವರುಗಳ ಮೇಲೆ ಪೊಲೀಸರಿಗೆ ದೂರು ನೀಡಿದ್ದಾರೆ. ಜೊತೆಗೆ ಸಂಘದಲ್ಲಿ 2025-26ನೇ ಸಾಲಿನ ಖರ್ಚು-ವೆಚ್ಚಗಳನ್ನು ಆಡಿಟ್ ಮಾಡಿಸಿಲ್ಲ ಎಂದು ಆರೋಪಿಸಿದರು.
ಸಂಘದಲ್ಲಿನ ಹಣಕಾಸಿನ ವ್ಯವಹಾರ ಕುರಿತಂತೆ ಯಾವುದೇ ಲೆಕ್ಕ ನೀಡದೆ ಜೊತೆಗೆ ಆಡಳಿತ ಮಂಡಳಿ ಹಾಗೂ ಮೂವರು ಯುವಕರ ವಿರುದ್ಧ ದೂರು ನೀಡಿರುವ ಡೇರಿ ಕಾರ್ಯದರ್ಶಿ ಕ್ಷಮೆಯಾಚಿಸಬೇಕು. ಜತೆಗೆ ಲಿಖಿತವಾಗಿ ಬರೆದುಕೊಡಬೇಕು ಎಂದು ಪಟ್ಟು ಹಿಡಿದ ಗ್ರಾಮಸ್ಥರು ಡೇರಿಗೆ ಹಾಲು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಮುಂದುವರೆಸಿದರು.ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಉಮೇಶ್ ಗ್ರಾಮಸ್ಥರನ್ನು ಸಮಾಧಾನಪಡಿಸಿ ಠಾಣೆಯಲ್ಲಿ ಡೇರಿ ಕಾರ್ಯದರ್ಶಿ ನೀಡಿರುವ ದೂರಿನ ಕುರಿತಂತೆ ನಾಳೆ ಸಮಸ್ಯೆ ಬಗೆಹರಿಸಲಿದ್ದು, ಹಾಲು ಖರೀದಿಸುವಂತೆ ತಿಳಿ ಹೇಳಿ ಪರಿಸ್ಥಿತಿ ಸುಧಾರಿಸುವಲ್ಲಿ ಯಶಸ್ವಿಯಾದರು.
ಪ್ರತಿಭಟನೆಯಲ್ಲಿ ಡೇರಿ ಅಧ್ಯಕ್ಷೆ ತನುಜಾ, ಉಪಾಧ್ಯಕ್ಷೆ ಪುಷ್ಪಾ, ನಿರ್ದೇಶಕರಾದ ಜ್ಯೋತಿ, ನಾಗಮ್ಮ, ಮುಖಂಡರಾದ ರೇವಣ್ಣ, ರಘು, ಯೋಗೇಶ್, ರಾಕೇಶ್, ಮಹದೇವ, ಈಶ್ವರಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.