ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಕಲ್ಲಬೆಟ್ಟಿನ ಎಕ್ಸಲೆಂಟ್ ವಿದ್ಯಾಸಂಸ್ಥೆ ವತಿಯಿಂದ ಮೂಡುಬಿದಿರೆ ಪರಿಸರವನ್ನು ಸ್ವಚ್ಛವಾಗಿ ಇಡಲು ಹಾಗೂ ರಸ್ತೆ ಸುರಕ್ಷತಾ ಅಭಿಯಾನ ಜಾಗೃತಿ ಕಾರ್ಯಕ್ರಮ ನಡೆಯಿತು.ಮೂಡುಬಿದಿರೆ ಜ್ಯೋತಿನಗರದ ಪೊಲೀಸ್ ಠಾಣೆ ಪ್ರದೇಶದಿಂದ ಪ್ರಾರಂಭಗೊಂಡ ನಾಗರಿಕ ಜಾಗೃತಿ ಜಾಥಾ ಕಾರ್ಯಕ್ರಮ ಕಲ್ಲಬೆಟ್ಟಿನ ಉರ್ಪೆಲ್ ಪಾದೆ ತನಕ ನಡೆಯಿತು. ವಿವಿಧ ಜಾಗೃತಿ ಫಲಕಗಳನ್ನು ಹಿಡಿದ ವಿದ್ಯಾರ್ಥಿಗಳು ನೇತಾರರೊಂದಿಗೆ ಘೋಷಣೆಗಳನ್ನು ಮೊಳಗಿಸುತ್ತಾ ಕಾಲ್ನಾಡಿಗೆಯಲ್ಲಿ ಸಾಗಿದರು.ಜಾಗೃತಿ ಜಾಥಾವನ್ನು ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಉದ್ಘಾಟಿಸಿ, ವಿದ್ಯಾರ್ಥಿಗಳ ಮೂಲಕ ನಾಗರಿಕರನ್ನು ಸ್ವಚ್ಛತೆಯ ಕಡೆಗೆ ಹಾಗೂ ಏಕೆ ಬಳಕೆ ಪ್ಲಾಸ್ಟಿಕ್ ನಿಲ್ಲಿಸುವ ಬಗೆಗೆ ಜಾಗೃತಿ ಮೂಡಿಸಲು ಒಂದು ಚಿಕ್ಕ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ಎಲ್ಲರೂ ಸಹಕರಿಸಿ ಮೂಡುಬಿದಿರೆಯನ್ನು ಸ್ವಚ್ಛ ಪ್ಲಾಸ್ಟಿಕ್ ಮುಕ್ತ ಮಾಡಲು ಕೈ ಜೋಡಿಸಬೇಕೆಂದು ಕೇಳಿಕೊಂಡರು.
ಪುರಸಭಾ ಉಪಾಧ್ಯಕ್ಷ ನಾಗರಾಜ ಪೂಜಾರಿ, ಎಎಸ್ಐ ರಾಜೇಶ್, ಪ್ರಶಾಂತ್, ಕಾರ್ಯದರ್ಶಿ ರಶ್ಮಿತಾ ಜೈನ್ ಶುಭಹಾರೈಸಿದರು.ಈ ಸಂದರ್ಭ ಪುರಸಭೆ ಸದಸ್ಯರಾದ ಕೊರಗಪ್ಪ, ಮಾಜಿ ಉಪಧ್ಯಾಕ್ಷರಾದ ಸುಜಾತಾ, ಸುರೇಶ್ ಕೋಟ್ಯಾನ್, ಕ್ಲಾರಿಯೋ ಡಿಸೋಜ, ಮೂಡುಬಿದಿರೆ ಪೊಲೀಸ್ ಸಿಬ್ಬಂದಿವರ್ಗ, ಮೂಡ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್, ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣರಾಜ್ ಹೆಗ್ಡೆ, ಸಿ.ಎಚ್. ಮೆಡಿಕಲ್ ಮಾಲಕ ಸಿ.ಎಚ್. ಗಫೂರ್, ಜೈನ್ ಮಿಲನ ವಲಯ ನಿರ್ದೇಶಕ ಜಯರಾಜ್ ಕಂಬಳಿ, ರಾಕೇಶ್, ಕೊಡಂಗಲ್ಲು ಫ್ರೆಂಡ್ಸ್ ಸದಸ್ಯ ಸಂಪತ್ ಕುಮಾರ್ ಜೈನ್, ಜಗದೀಶ್ ಭಟ್, ಸಂತೋಷ್ ಶೆಟ್ಟಿ, ಕೊಡಂಗಲ್ಲು ಹಾಗೂ ಇತರ ಮುಖಂಡರು ಹಾಜರಿದ್ದರು.
ಎಕ್ಸಲೆಂಟ್ ಸಂಸ್ಥೆಯ ಆಡಳಿತ ನಿರ್ದೇಶಕ ಸಂಪತ್ ಕುಮಾರ್ ಸ್ವಾಗತಿಸಿ, ವಂದಿಸಿದರು.