ಅಂಗನವಾಡಿ ಕಾರ್ಯಕರ್ತೆಯರು ಸಮಾಜದ ವೈದ್ಯರು:ಡಾ.ಧನಂಜಯ ಸರ್ಜಿ

| Published : Oct 26 2024, 12:50 AM IST / Updated: Oct 26 2024, 12:51 AM IST

ಸಾರಾಂಶ

ಶಿವಮೊಗ್ಗದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರಿಗೆ ಏರ್ಪಡಿಸಿದ್ದ ವರ್ಚುವಲ್ ತರಬೇತಿಯನ್ನು ವಿಧಾನ ಪರಿಷತ್‌ ಸದಸ್ಯ ಡಾ.ಧನಂಜಯ್‌ ಸರ್ಜಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಅಂಗನವಾಡಿ ಕಾರ್ಯಕರ್ತೆಯರು ಸಮಾಜದ ವೈದ್ಯರಾಗಿ, ಚಿಕ್ಕ ಮಕ್ಕಳ ತಾಯಂದಿರಾಗಿ ಸೇವೆ ಒದಗಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ, ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಸಹಯೋಗದಲ್ಲಿ ಶುಕ್ರವಾರ ಜಿಪಂ ಸಭಾಂಗಣದಲ್ಲಿ ಮಕ್ಕಳ ಆರೋಗ್ಯ, ದೈಹಿಕ, ಮಾನಸಿಕ ಬೆಳವಣಿಗೆ, ಪಾಲನೆ-ಪೋಷಣೆ ಹಾಗೂ ಮಹಿಳೆಯರ ಯೋಗಕ್ಷೇಮದಲ್ಲಿ ಆಯುರ್ವೇದದ ಪಾತ್ರ ಕುರಿತು ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರಿಗೆ ಏರ್ಪಡಿಸಿದ್ದ ವರ್ಚುವಲ್ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯರು ಜನರಿಗೆ ರೋಗ ಬಂದ ಮೇಲೆ ಚಿಕಿತ್ಸೆ ನೀಡುತ್ತಾರೆ. ಆದರೆ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ರೋಗ ಬರುವ ಮುನ್ನವೇ ಮಹಿಳೆಯರು-ಮಕ್ಕಳನ್ನು ಉಪಚರಿಸಿ ರೋಗ ಬಾರದಂತೆ ತಡೆಯುತ್ತಾರೆ. ಇವರು ನಿಜವಾದ ಸಮಾಜದ ವೈದ್ಯರು ಮತ್ತು ಸರ್ಕಾರ ಹಾಗೂ ಜನರ ನಡುವೆ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ವೈದ್ಯರಿಗೆ ಮಹಿಳೆಯರು-ಮಕ್ಕಳಿಗೆ ಅಗತ್ಯವಾದ ಪಾಲನೆ-ಪೋಷಣೆ, ಪೌಷ್ಟಿಕತೆ, ಆರೋಗ್ಯ ನಿರ್ವಹಣೆ ಬಗ್ಗೆ ತಿಳಿಯುವುದು ಅತಿ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಈ ತರಬೇತಿ ಆಯೋಜಿಸಲಾಗಿದೆ ಎಂದರು.

ಮಕ್ಕಳಲ್ಲಿ ನಾವು ಮುಖ್ಯವಾಗಿ ಆತ್ಮವಿಶ್ವಾಸವನ್ನು ಬೆಳೆಸಬೇಕು. ಎದ್ದು ನಿಂತು ಪ್ರಶ್ನಿಸುವುದನ್ನು ಉತ್ತೇಜಿಸಬೇಕು. ಯಾವುದೇ ಕಾರಣಕ್ಕೂ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಬಾರದು. ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಬೇಕು. ಧನಾತ್ಮಕ ಸಲಹೆಗಳನ್ನು ನೀಡತ್ತಾ ಹೋಗಬೇಕು. ಅತಿ ಮುದ್ದಿನಿಂದ ಕೇಳಿದ್ದಕ್ಕೆಲ್ಲ ಯೆಸ್ ಎನ್ನಬಾರದು. ಹಣ ಮತ್ತು ಹಸಿವಿನ ಮಹತ್ವ ತಿಳಿಸಬೇಕು. ಅವರು ಆಯ್ಕೆ ಮಾಡುವುದಕ್ಕೆ ಅವಕಾಶ ನೀಡಬೇಕು. ಸೇವಾ ಮನೋಭಾವ ಬೆಳೆಸಬೇಕು. ಟಿವಿ, ಮೊಬೈಲ್‌ನಿಂದ ಅವರು ಹೊರಬೇಕೆಂದರೆ ಮೊದಲು ಪೋಷಕರು ಅದರಿಂದ ದೂರವಿರಬೇಕು ಎಂದು ಅವರು ಹೇಳಿದರು.

ಆಯುಷ್ ಇಲಾಖೆಯ ಡಾ.ಜ್ಯೋತಿ ಲಕ್ಷ್ಮಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ದಿನ ನಿತ್ಯ ತಮ್ಮ ವೈಯಕ್ತಿಕ, ಸಾಂಸಾರಿಕ ಮತ್ತು ಅಂಗನವಾಡಿ ಕೆಲಸಗಳನ್ನು ನಿರ್ವಹಿಸಬೇಕಿದ್ದು ಮೂರು ದೋಣಿಗಳನ್ನು ನಡೆಸುವ ನಾವಿಕರಾಗಿರುತ್ತಾರೆ. ಹೆಣ್ಣುಮಕ್ಕಳ ಪೌಷ್ಟಿಕತೆ ನೋಡಿಕೊಳ್ಳುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಹೆಣ್ಣುಮಕ್ಕಳ ಯೋಗಕ್ಷೇಮದಲ್ಲಿ ಆಯುರ್ವೇದದ ಪಾತ್ರವನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಿ.ಎಚ್‌. ಕೃಷ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಪಂ ಸಿಇಓ ಮಾರ್ಗದರ್ಶನದಲ್ಲಿ ಇಂದು ಜಿಲ್ಲೆಯ ವಿಡಿಯೋ ಕಾನ್ಫರೆನ್ಸ್‌ ಅವಕಾಶವಿರುವ ಗ್ರಾ.ಪಂ, ತಾಲೂಕು ಕಚೇರಿ ಸೇರಿದಂತೆ 44 ಕೇಂದ್ರಗಳಿಂದ 2400 ಅಂಗನವಾಡಿ ಕಾರ್ಯಕರ್ತೆಯರು, 80 ಮೇಲ್ವಿಚಾರಕರಿಗೆ ವರ್ಚುವಲ್ ಮೂಲಕ ತರಬೇತಿ ನೀಡಲಾಗುತ್ತಿದೆ ಎಂದರು.

ವೇದಿಕೆಯಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ಲಿಂಗರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರೂಪಣಾಧಿಕಾರಿ ಡಾ. ಸಂತೋಷ್ ಕುಮಾರ್, ಸಿಡಿಪಿಒಗಳು, ಇತರೆ ಅಧಿಕಾರಿಗಳು, ಅಂಗನವಾಡಿ ಮೇಲ್ವಿಚಾರಕರು, ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.