ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ಕಿರುಗಾವಲು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ನರೇಂದ್ರ ಕೆ.ಎಂ.ಪುಟ್ಟು ಅಧ್ಯಕ್ಷತೆಯಲ್ಲಿ ನಡೆಯಿತು.ಕಿರುಗಾವಲು ವ್ಯಾಪ್ತಿಯ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಿಸಿ ಅಧ್ಯಕ್ಷ ನರೇಂದ್ರ ಕೆ.ಎಂ.ಪುಟ್ಟು ಮಾತನಾಡಿ, ನಮ್ಮ ತಂದೆ ಮಾಜಿ ಶಾಸಕ ದಿ.ಕೆ.ಎಂ.ಪುಟ್ಟು ಅವರು ಕಟ್ಟಿ ಬೆಳೆಸಿದ ಸಹಕಾರ ಸಂಘವನ್ನು ಎಲ್ಲರೂ ವಿಶ್ವಾಸದೊಂದಿಗೆ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಕಾರ್ಯ ಮಾಡಲಾಗುತ್ತಿದೆ ಎಂದರು.
ರೈತರು ಹಾಗೂ ಸದಸ್ಯರು ಹಲವಾರು ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಜಿಲ್ಲೆಯಲ್ಲಿಯೇ ಮಾದರಿ ಸಂಸ್ಥೆಯಾಗಿ ರೂಪಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.ಸುಮಾರು 60 ಕೋಟಿ ರು.ವಾಹಿವಾಟಿನ ಮೂಲಕ ಕಳೆದ ಸಾಲಿನಲ್ಲಿ ತಾಲೂಕಿನಲ್ಲಿಯೇ ಪ್ರಥಮ ಸ್ಥಾನದೊಂದಿಗೆ 33 ಲಕ್ಷ ರು. ಲಾಭ ಗಳಿಸಿದೆ. ಅಲ್ಲದೇ, ಆ ಮೂಲಕ ಜಿಲ್ಲೆಯಲ್ಲಿಯೇ ಹೆಚ್ಚಿನ ಲಾಭಾಂಶ ಎರಡನೇ ಹಾಗೂ ತಾಲೂಕಿನ ಪ್ರಥಮ ಸಹಕಾರ ಸಂಘವಾಗಿದೆ. ಎಲ್ಲ ನಿರ್ದೇಶಕರ ಹಾಗೂ ಸದಸ್ಯರ ಸಲಹೆ ಸೂಚನೆಗಳೊಂದಿಗೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ಕಿರುಗಾವಲಿನಲ್ಲಿ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 1 ಕೋಟಿ ರು. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣದ ಗುರಿಯೊಂದಿಗೆ ಮುಂದಿನ ದಿನಗಳಲ್ಲಿ ಎಲೆಕ್ಟ್ರಾನಿಕ್ ಶೋ ರೂಂ ಆರಂಭಕ್ಕೆ ನಿರ್ಮಿಸಲಾಗಿದೆ. ನಮ್ಮ ತಂದೆ ಮಾಜಿ ಶಾಸಕ ದಿ.ಕೆ.ಎಂ.ಪುಟ್ಟು ಅವರ ಹಾದಿಯಲ್ಲಿ ಕೆಲಸ ಮಾಡಲಾಗುವುದು ಎಂದರು.ಉಪಾಧ್ಯಕ್ಷ ಎಂ.ಚಿಕ್ಕಯ್ಯ, ನಿರ್ದೇಶಕರಾದ ಎಂ.ಎಸ್.ನಿಂಗೇಗೌಡ, ಜಗದೀಶ್, ಮನೋಹರ್, ಆನಂದ್ ಕುಮಾರ್, ಯಶೋಧಮ್ಮ, ಅಲ್ತಾಫ್, ಅಜೀಜ್ ಖಾನ್, ಮಾಲಾಶ್ರೀ, ಜಯಶೀಲಾ, ಬಿ.ಸಿದ್ದರಾಜು, ಸಿಇಓ ಶಿವಲಿಂಗು ಪಾಲ್ಗೊಂಡಿದ್ದರು.
ನಗರಸಭೆ ಆಸ್ತಿಗಳಿಗೆ ಫೆನ್ಸಿಂಗ್ ಅಳವಡಿಕೆ: ರಹೀಂಖಾನ್ಮಂಡ್ಯ:
ಮಂಡ್ಯ ನಗರಸಭೆ ವ್ಯಾಪ್ತಿಯಲ್ಲಿ ನಗರಸಭೆಗೆ ಸೇರಿದ ಒಟ್ಟು 47 ನಿವೇಶನಗಳಿದ್ದು, ಅತಿಕ್ರಮ ತಪ್ಪಿಸಲು ಸರ್ವೆ ಕೈಗೊಂಡು ಫೆನ್ಸಿಂಗ್ ಹಾಕಿ ನಾಮಫಲಕ ಅಳವಡಿಸಲು ಕ್ರಮವಹಿಸಲಾಗುತ್ತಿದೆ ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ತಿಳಿಸಿದ್ದಾರೆ.ಕಾಂಗ್ರೆಸ್ ಶಾಸಕ ಮಧು ಜಿ.ಮಾದೇಗೌಡರ ಪ್ರಶ್ನೆಗೆ ವಿಧಾನ ಪರಿಷತ್ತಿನಲ್ಲಿ ಲಿಖಿತ ಉತ್ತರ ನೀಡಿರುವ ಸಚಿವರು, ನಗರಸಭೆಗೆ ಸೇರಿದ ಆಸ್ತಿಗಳ ರಕ್ಷಣೆ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರಿಸಿದ್ದಾರೆ.
ವಾರ್ಡ್ 12ರಲ್ಲಿ 5 ನಿವೇಶನಗಳು, ವಾರ್ಡ್ 15ರಲ್ಲಿ 7, ವಾರ್ಡ್ 22ರಲ್ಲಿ 6, ವಾರ್ಡ್ 23ರಲ್ಲಿ 22 ಹಾಗೂ ವಾರ್ಡ್ 27ರಲ್ಲಿ 7 ನಿವೇಶನಗಳು ಸೇರಿದಂತೆ ಒಟ್ಟು 47 ನಿವೇಶನಗಳಿವೆ. ಈ ಎಲ್ಲಾ ನಿವೇಶನಗಳ ಸರ್ವೆ ಕೈಗೊಂಡು ನಗರಸಭೆ ನಿಧಿಯಿಂದ ಫೆನ್ಸಿಂಗ್ ಹಾಕಿ ನಾಮಫಲಕ ಅಳವಡಿಸಲು ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.ಅಲ್ಲದೇ, ನಗರಸಭೆ ವ್ಯಾಪ್ತಿಯಲ್ಲಿ 19 ಸ್ಮಶಾನಗಳಿದ್ದು, ರಾಜ್ಯ ಹಣಕಾಸು ಅನುದಾನ, ಕೇಂದ್ರ ಹಣಕಾಸು ಅನುದಾನ, ಎಸ್.ಎಫ್.ಸಿ. ವಿಶೇಷ ಅನುದಾನ, ನಗರಸಭಾ ನಿಧಿ ಸೇರಿದಂತೆ ಇನ್ನಿತರೆ ಅನುದಾನದಲ್ಲಿ ಸ್ಮಶಾನಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಅಭಿವೃದ್ಧಿ ಕಾರ್ಯಗಳು ಚಾಲ್ತಿಯಲ್ಲಿರುತ್ತವೆ ಎಂದೂ ವಿವರಿಸಿದ್ದಾರೆ.