ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಯುವ ಪೀಳಿಗೆಯನ್ನು ಬಲಿ ತೆಗೆದುಕೊಳ್ಳುತ್ತಿರುವ ಮಾದಕ ವಸ್ತುಗಳ ದುಷ್ಟ ಜಾಲದ ವಿರುದ್ಧ ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆ ಸಮರ ಸಾರಿದೆ.ಮಾದಕ ವಸ್ತುಗಳ ಬಳಕೆ ಸಂಪೂರ್ಣವಾಗಿ ತಡೆಗಟ್ಟುವ ಉದ್ದೇಶದಿಂದ ‘ಆಪರೇಷನ್ ರೈಸ್’ ಮತ್ತು ‘ಬೇಡ ಬ್ರೋ’ ಎಂಬ ವಿನೂತನ ಘೋಷಣೆಗಳೊಂದಿಗೆ ಶುಕ್ರವಾರ ಚಿತ್ರದುರ್ಗದಲ್ಲಿ ನಡೆದ ಬೃಹತ್ ಮಾದಕ ವಸ್ತು ವಿರೋಧಿ ಜಾಥಾದಲ್ಲಿ ವಿದ್ಯಾರ್ಥಿಗಳು ಹಾಗೂ ಪೊಲೀಸ್ ಪಡೆಗಳು ಪಾಲ್ಗೊಂಡಿದ್ದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ರಂಜಿತ್ ಕುಮಾರ್ ಬಂಡಾರು ಅವರು, ಮದಕರಿ ನಾಯಕ ವೃತ್ತದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಜಾಥಾವು ನಗರದ ಬಿ.ಡಿ.ರಸ್ತೆಯಲ್ಲಿನ ಅಂಬೇಡ್ಕರ್, ಮಹಾವೀರ, ಕಿತ್ತೂರು ಚನ್ನಮ್ಮ ವೃತ್ತಗಳ ಮೂಲಕ ಗಾಂಧಿ ವೃತ್ತವನ್ನು ತಲುಪಿತು.ಗಾಂಧಿ ಸರ್ಕಲ್ನಲ್ಲಿ ನೆರೆದಿದ್ದ ನೂರಾರು ವಿದ್ಯಾರ್ಥಿಗಳು, ನಶಾ ಮುಕ್ತ ಕರ್ನಾಟಕ, ನಶಾ ಮುಕ್ತ ಚಿತ್ರದುರ್ಗ ಜಿಲ್ಲೆ ನಿರ್ಮಾಣ ಮಾಡುವ ಕುರಿತು ಘೋಷಣೆಗಳನ್ನು ಕೂಗಿದರು. ಜಿಲ್ಲಾ ಪೊಲೀಸ್ ಅಧೀಕ್ಷಕ ರಂಜಿತ್ ರಂಜಿತ್ ಕುಮಾರ್ ಬಂಡಾರು ಅವರ ಧ್ವನಿಗೆ, ವಿದ್ಯಾರ್ಥಿಗಳು ಡ್ರಗ್ಸ್ ಬೇಡ ಎಂದು ಧ್ವನಿಗೂಡಿಸಿದರು. ಈ ವೇಳೆ ಮಾದಕ ವಸ್ತುಗಳನ್ನು ಕಟ್ಟುನಿಟ್ಟಾಗಿ ವಿರೋಧಿಸುವ ಮತ್ತು ಅವುಗಳಿಂದ ದೂರ ಉಳಿಯುವ ಕುರಿತು, ಸ್ನೇಹಿತರು, ನೆರೆ ಹೊರೆಯವರನ್ನು ತಪ್ಪು ದಾರಿಗೆ ಹೋಗದಂತೆ ಎಚ್ಚರಿಸುವ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಪೊಲೀಸ್ ಉಪಾಧೀಕ್ಷಕರುಗಳಾದ ಅರುಣ್ ನಾಗೇಗೌಡ, ಶ್ರೀನಿವಾಸ್, ಸತ್ಯನಾರಾಯಣ್ ಸೇರಿದಂತೆ ಪೊಲೀಸ್ ವೃತ್ತ ನಿರೀಕ್ಷರು, ಕಾಲೇಜು ಉಪನ್ಯಾಸಕರು, ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರು ಹಾಗೂ ಇತರೆ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.