ಕನ್ನಡಪ್ರಭ ವಾರ್ತೆ ಕಾರವಾರ

ತಾಲೂಕಿನ ಕೆರವಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಆಕ್ಷೇಪಿಸಿದ ಕಡವಾಡ ಹಳೆಕೋಟ ಭಾಗದ ನಿವಾಸಿಗಳು, ಈ ಜ್ವಲಂತ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸುವಂತೆ ಆಗ್ರಹಿಸಿ ಸೋಮವಾರ ತಾಪಂ ಇಒಗೆ ಮನವಿ ಸಲ್ಲಿಸಿದರು.

ಕಳೆದ 2–3 ತಿಂಗಳುಗಳಿಂದ ಕೇವಲ 15ರಿಂದ 30 ದಿನಗಳಿಗೊಮ್ಮೆ ಮಾತ್ರ ಗ್ರಾಮಕ್ಕೆ ನೀರು ಬಿಡಲಾಗುತ್ತಿದೆ. ಕರಾವಳಿ ಭಾಗದಲ್ಲಿ ಈ ರೀತಿ ವ್ಯಾಪಕ ನೀರಿನ ವ್ಯತ್ಯಯ ಉಂಟಾಗಿರುವುದರಿಂದ ಸ್ಥಳೀಯ ಸುಮಾರು 250ಕ್ಕೂ ಅಧಿಕ ಕುಟುಂಬಗಳು ದೈನಂದಿನ ಅಗತ್ಯಗಳಿಗಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಕುರಿತು ಗ್ರಾಮಸ್ಥರು ಸಂಬಂಧಪಟ್ಟ ಪಂಚಾಯತಿ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಮುಖ್ಯ ಪೈಪ್‌ಲೈನ್ ಹಾಳಾಗಿದೆ ಎಂಬ ಹಳೆಯ ನೆಪವನ್ನು ಮುಂದಿಟ್ಟು ನಿರಂತರವಾಗಿ ಕಾಲಹರಣ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಪ್ರಸ್ತುತ ಮಳೆಗಾಲದ ಅವಧಿಯಲ್ಲೂ ಕಡವಾಡ ನಿವಾಸಿಗಳಿಗೆ ಕುಡಿಯುವ ನೀರಿಗಾಗಿ ಕಿಮೀಗಳಷ್ಟು ದೂರ ನಡೆದು ನೀರು ಹೊತ್ತು ತರಬೇಕಾದ ದಯನೀಯ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ಜನಪ್ರತಿನಿಧಿಗಳ ಅಧಿಕಾರ ಅವಧಿ ಮುಗಿದಿರುವುದರಿಂದ ಈ ಸಮಸ್ಯೆಯನ್ನು ಆಲಿಸುವವರೇ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಗ್ರಾಪಂ ಮಾಜಿ ಸದಸ್ಯ ಕಿಶೋರ ಕಡವಾಡಕರ, ಪ್ರಮುಖರಾದ ಆನಂದ ಹುಲಸ್ವಾರ, ದಿಗಂಬರ ನಾಯ್ಕ, ಆಶಿಸ್ ತುಳಸಕರ, ಸಂಜನಾ ನಾಯ್ಕ, ಕವಿತಾ, ಸರಸ್ವತಿ, ಬೀನಾ, ಶ್ರೀಕಾಂತ ನಾಗೇಕರ್ ಮತ್ತಿತರರಿದ್ದರು.