ಹಗರಿಬೊಮ್ಮನಹಳ್ಳಿ: ಮಾದರಿ ಪ್ರಜಾಪ್ರಭುತ್ವವನ್ನು ರೂಪಿಸುವ ಮೂಲಕ ರಾಜಕೀಯ ಅಧಿಕಾರವನ್ನು ಅರ್ಥಪೂರ್ಣವಾಗಿ ಬಳಸುವ ಅಂಬೇಡ್ಕರ್ ಮಾದರಿಯನ್ನು ಸರಿಯಾಗಿ ಅರಿಯುವ ಪ್ರಯತ್ನ ನಡೆದಿಲ್ಲ ಎಂದು ಶಾಸಕ ನೇಮರಾಜ್‌ ನಾಯ್ಕ ಖೇದ ವ್ಯಕ್ತಪಡಿಸಿದರು.ಪಟ್ಟಣದ ಪೊಲೀಸ್ ಠಾಣೆಯ ಬಳಿ ₹೫೨ ಲಕ್ಷ ಅನುದಾನದ ಪುತ್ಥಳಿ ಸಹಿತ ಡಾ.ಅಂಬೇಡ್ಕರ್ ವೃತ್ತ ನಿರ್ಮಾಣದ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಬಳಿಕ ಕನ್ನಡಪ್ರಭದೊಂದಿಗೆ ಮಾತನಾಡಿದರು.

ಕಳೆದ ೧೦ ವರ್ಷಗಳಲ್ಲಿ ಅಂಬೇಡ್ಕರ್ ಹೆಸರನ್ನು ಜಪ ಮಾಡಿದವರು ಅಂಬೇಡ್ಕರ್ ವೃತ್ತ ನಿರ್ಮಾಣಕ್ಕೆ ಚಿಂತಿಸಲಿಲ್ಲ ಎಂದು ದೂರಿದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ₹೩೦ ಲಕ್ಷ ಅನುದಾನದ ಜೊತೆಗೆ ಮುಖ್ಯಮಂತ್ರಿ ವಿಶೇಷ ಅನುದಾನ ₹೧೭ ಲಕ್ಷ ಸೇರಿಸಿ ಒಟ್ಟು ₹೫೨ ಲಕ್ಷ ಅನುದಾನ ಒದಗಿಸಿ ಕಾಮಗಾರಿಗೆ ಭೂಮಿಪೂಜೆ ಮಾಡಲಾಗಿದೆ. ಮೊದಲ ಬಾರಿಗೆ ಶಾಸಕನಾಗಿದ್ದಾಗ ಅಂಬೇಡ್ಕರ್ ಭವನ ನಿರ್ಮಿಸಿದ್ದೇನೆ. ಈಗ ವೃತ್ತ ನಿರ್ಮಾಣದ ಭೂಮಿಪೂಜೆಯ ಸುಯೋಗ ಒದಗಿರುವುದು ನನ್ನ ರಾಜಕೀಯ ಬದುಕಿನ ಸೌಭಾಗ್ಯ ಎಂದು ಹರ್ಷ ವ್ಯಕ್ತಪಡಿಸಿದರು.

ಡಾ.ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಎಚ್.ದೊಡ್ಡಬಸಪ್ಪ ಮಾತನಾಡಿ, ದಲಿತರನ್ನು ಮತ ಬ್ಯಾಂಕ್‌ಗಳಾಗಿ ಮಾತ್ರ ಪರಿಗಣಿಸುವ ರಾಜಕಾರಣಿಗಳು ದಲಿತರ ಬೇಡಿಕೆಗಳ ಜಾರಿಗೆ ಮಾತ್ರ ಜಾಣ ಮೌನಕ್ಕೆ ಶರಣಾಗುತ್ತಾರೆ ಎಂದು ಕಿಡಿಕಾರಿದರು.

ದಲಿತರ ಹೋರಾಟಗಳನ್ನು ಪರಿಗಣಿಸಿ ಅಂಬೇಡ್ಕರ್ ವೃತ್ತ ನಿರ್ಮಾಣಕ್ಕೆ ಶ್ರಮಿಸಿ ಶಾಸಕ ನೇಮರಾಜ್ ನಾಯ್ಕ ಭೂಮಿಪೂಜೆ ನೆರವೇರಿಸಿರುವುದು ಶ್ಲಾಘನೀಯ. ಶಾಸಕರು ದಲಿತ ಪರ ಕಾಳಜಿಯ ಚಿಂತನೆಗಳಿಗೆ ಬದ್ಧತೆ ಪ್ರದರ್ಶಿದ್ದಾರೆ ಎಂದು ಬಣ್ಣಿಸಿದರು.


ಜೆಡಿಎಸ್ ಮುಖಂಡರಾದ ಕನ್ನಿಹಳ್ಳಿ ಚಂದ್ರಶೇಖರ್, ಸಿ.ಎಚ್.ಸಿದ್ಧರಾಜು, ಡಿಶ್ ಪಾಂಡುರಂಗ ನಾಯ್ಕ, ಮೇದಾರ್ ಕೊಟ್ರೇಶ್, ರುದ್ರಪ್ಪ, ಸಿದ್ಧಲಿಂಗಪ್ಪ, ದಲಿತ ಮುಖಂಡರಾದ ಎಚ್.ಮಾಯಪ್ಪ, ಕೊಟ್ರಪ್ಪ, ಕೆಚ್ಚಿನಬಂಡಿ ದುರುಗಪ್ಪ, ಯಡ್ರಾಮನಹಳ್ಳಿ ಮರಿಯಪ್ಪ, ಬ್ಯಾಲಾಳು ಮಂಜುನಾಥ್, ಸೊಬಟಿ ಬಸವರಾಜ್ ಇದ್ದರು.

ಹಗರಿಬೊಮ್ಮನಹಳ್ಳಿಯಲ್ಲಿ ಪುತ್ಥಳಿ ಸಹಿತ ಅಂಬೇಡ್ಕರ್ ವೃತ್ತ ನಿರ್ಮಾಣಕ್ಕೆ ಶಾಸಕ ನೇಮರಾಜ್ ನಾಯ್ಕ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.