ಕನ್ನಡಪ್ರಭ ವಾರ್ತೆ ಹೊಸದುರ್ಗ

ರೋಗಿಗಳಿಗೆ ಚಿಕಿತ್ಸೆ ನೀಡಿದ, ರಕ್ತ ಪರೀಕ್ಷೆಯ ವಿವರ ಬೇಡ ಸರ್ಕಾರಿ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಎಷ್ಟು ರೋಗಿಗಳನ್ನು ಕಳಿಸಿದ್ದೀರಾ?

ಅವರಿಗೆ ನಮ್ಮ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಏಕೆ ಆಗಲ್ಲ ಹಾಗಾದರೆ ಸರ್ಕಾರಿ ಅಸ್ಪತ್ರೆಯ ವೈದ್ಯರುಗಳು ಅಸಮರ್ಥರಾ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ತಾಲೂಕು ಆರೋಗ್ಯಾಧಿಕಾರಿ ರಾಘವೇಂದ್ರ ಪ್ರಸಾದ್‌ ಹಾಗೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ರಾಕೇಶ್‌ ಅವರನ್ನು ಪ್ರಶ್ನಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಶಾಸಕ ಬಿ.ಜಿ.ಗೋವಿಂದಪ್ಪ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆ ಮೇಲಿನ ಚರ್ಚೆಯಲ್ಲಿ ವೈದ್ಯಾಧಿಕಾರಿಗಳು ತಮ್ಮ ಇಲಾಕೆಯಲ್ಲಿನ ಪ್ರಗತಿಯ ವರದಿ ನೀಡುವಾಗ ನಾನು ನಿಮ್ಮ ವರದಿ ಕೇಳಲು ಬಂದಿಲ್ಲ ವರದಿ ಪೇಪರ್‌ನಲ್ಲಿರುತ್ತದೆ ಆದರೆ ನಿಮ್ಮ ನಡವಳಿಕೆ ಸರಿಪಡಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ ಇದನ್ನೆಲ್ಲಾ ನೋಡಿದರೆ ನಾನೇ ಅಸಮರ್ಥನಾ ಎನ್ನುವ ಭಾವನೆ ಮೂಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕಳಿಸುವುದಾದರೆ ಕೊಟ್ಯಂತರ ರು. ಖರ್ಚು ಮಾಡಿ ಆಸ್ಪತ್ರೆ ಏಕೆ ಕಟ್ಟಬೇಕು ಆಸ್ಪತ್ರೆಗಳಲ್ಲಿ ಮೆಡಿಸಿನ್‌ ಇಲ್ಲವಾ ಕೆಲವು ವೈದ್ಯರು ರೋಗಿಗಳನ್ನೇ ಮುಟ್ಟುವುದಿಲ್ಲ ಈ ಬಾಳಿಗೆ ಸರ್ಕಾರಿ ಆಸ್ಪತ್ರೆಗೆ ಏಕೆ ಕೆಲಸಕ್ಕೆ ಬರುತ್ತೀರಾ ನೀವಾಗೇ ನೀವು ಬಿಟ್ಟು ಹೋಗಿ ನಿಮಗೆ ಬರೀ ಬಾಯಿ ಮಾತನಲ್ಲಿ ಹೇಳಿದರೆ ಸಾಲದು. ಶೀಘ್ರದಲ್ಲಿಯೇ ತಾಲೂಕಿಗೆ ಆರೋಗ್ಯ ಇಲಾಕೆ ಸಚಿವರನ್ನು ಕರೆತಂದು ಇರುವ ವಸ್ತು ಸ್ಥಿತಿ ಹೇಳುತ್ತೇನೆ .ಖಾಸಗಿ ಆಸ್ಪತ್ರೆಗೆ ರೋಗಿಗಳನ್ನು ಕಳಿಸುವ ವೈದ್ಯರ ತಲೆದಂಡವಾದಾಗಲಾದರೂ ಪರಿಸ್ಥಿರಿ ಸುಧಾರಿಸಬಹುದು ಎಂದರು.


*ಏಪ್ರಿಲ್‌ 23ರವರೆಗೆ ರಾಗಿ ಹಣ: ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲಾಗಿರುವ ರಾಗಿ ಹಣವನ್ನು ಏಪ್ರಿಲ್‌ 23 ರವರೆಗೆ ಮಾರಾಟ ಮಾಡಿದ ರೈತರಿಗೆ ನೀಡಲಾಗಿದೆ ಇನ್ನು ಒಂದು ತಿಂಗಳ ಅವಧಿಯಲ್ಲಿ ಮಾರಾಟ ಮಾಡಲಾದ ರೈತರಿಗೆ ನೀಡಬೇಕಿದೆ ಎಂದು ಆಹಾರ ಇಲಾಕೆ ಶಿರಸ್ಥೇದಾರ್‌ ಸಭೆಗೆ ಮಾಹಿತಿ ನೀಡಿದಾಗ ಪಡಿತರ ವ್ಯವಸ್ಥೆಯಲ್ಲಿ ನೀಡಲಾದ ರಾಗಿ ರೈತರ ಹೆಸರಿನಲ್ಲಿ ವ್ಯಾಪಾರಸ್ಥರ ಮೂಲಕ ಪುನಃ ನಾಫೆಡ್‌ಗೆ ಬರುತ್ತಿವೆ ಇದನ್ನು ಹಿಡಿಯಲು ಏಕೆ ನಿಮ್ಮಿಂದ ಆಗುತ್ತಿಲ್ಲ ಅಲ್ಲದೆ ಪಡಿತರ ಅಕ್ಕಿಯನ್ನು ಅಕ್ಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರೂ ಏಕೆ ಹಿಡಿಯುತ್ತಿಲ್ಲ ಎಂದು ಪ್ರಶ್ನಿಸಿದರು. ಮುಂದಿನ ಬಾರಿ ಇದೆ ವ್ಯವಸ್ಥೆ ಮುಂದುವರೆದರೆ ನಿಮ್ಮ ಮೇಲೆ ಕ್ರಮ ಜರುಗಿಸುತ್ತೇನೆ ಎಂದು ಎಚ್ಚರಿಸಿದರು.

*ಉಚಿತ ಕರೆಂಟ್‌ ಅಲ್ಲ: ಗೃಹಜ್ಯೋತಿಯಲ್ಲಿ ಫಲಾನುಭವಿಗಳಿಗೆ ನೀಡಲಾಗುತ್ತಿರುವ ವಿದ್ಯುತ್‌ ಉಚಿತ ಅಲ್ಲ ಫಲಾನುಭವಿಗಳ ಹಣವನ್ನು ಸರ್ಕಾರ ತುಂಬುತ್ತಿದೆ ಎಂದು ಜನರಿಗೆ ಮನವರಿಕೆ ಮಾಡಿಕೊಡಿ ಎಂದು ಬೆಸ್ಕಾಂ ಎಇಇಗಳಿಗೆ ಹೇಳಿದ ಶಾಸಕರು ಕುಡಿಯುವ ನೀರಿನ ಯೋಜನೆಗಳಿಗೆ ವಿದ್ಯುತ್‌ ಸಂಪರ್ಕ ಶೀಘ್ರವಾಗಿ ಆಗಬೇಕು ಅಲ್ಲದೆ ಪ್ರತಿ ಗ್ರಾಮಕ್ಕೆ ಹೆಚ್ಚುವರಿ ಕಂಬ ಹಾಗೂ ಟಿಸಿಗಳನ್ನು ಅಳವಡಿಸಿ ಎಂದರು.

ಸಭೆಯಲ್ಲಿ ತಾಪಂ ಇಒ ಸುನಿಲ್‌ಕುಮಾರ್‌, ತಹಸೀಲ್ದಾರ್‌ ತಿರುಪತಿ ಪಾಟೀಲ್‌, ಗ್ಯಾರಂಟಿ ಯೋಜನೆಯ ಅಧ್ಯಕ್ಷ ಇಸ್ಮಾಯಿಲ್‌, ಕೆಡಿಪಿ ಸದಸ್ಯರುಗಳಯ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

2400 ಚದರ ಅಡಿಯಲ್ಲಿ ನಿರ್ಮಿಸಲಾದ ಕಟ್ಟಡಗಳಿಗೆ ವಿದ್ಯುತ್‌ ಸಂಪರ್ಕಕ್ಕಾಗಿ ಸ್ಥಳಿಯ ಆಡಳಿತದಿಂದ ಓಸಿ ಪಡೆಯುವುದನ್ನು ಆ.15ರವೆರೆಗೆ ವಿನಾಯಿತಿ ನೀಡಲಾಗಿದೆ. ಸಾರ್ವಜನಿಕರು ಇದರ ಸೌಲಭ್ಯ ಪಡೆದುಕೊಳ್ಳಿ

-ಬಿ.ಜಿ.ಗೋವಿಂದಪ್ಪ, ಶಾಸಕ