ಸಾರಾಂಶ
ತಪಾಸಣಾ ಶಿಬಿರ । ನೇಚರ್ ಕನ್ಸರ್ವೇಷನ್ ಟ್ರಸ್ಟ್ ಅಧ್ಯಕ್ಷ ಸಲಹೆ । ಹಿರೇಗೌಜದಲ್ಲಿ ಉಚಿತ ನೇತ್ರ ಪರೀಕ್ಷೆ । ಕಣ್ಣಿನ ಆರೈಕೆ ಮಾಹಿತಿ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಹೃದ್ರೋಗಗಳು ಸಂಭವಿಸುವ ಮೊದಲೇ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಎಂದು ನೇಚರ್ ಕನ್ಸರ್ವೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಕೆ.ಸುಂದರಗೌಡ ಹೇಳಿದರು.
ತಾಲೂಕಿನ ಹಿರೇಗೌಜ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನೇಚರ್ ಕನ್ಸರ್ವೇಷನ್ ಟ್ರಸ್ಟ್, ವಿಜಯ ಡೆಂಟಲ್ ಇಂಟರ್ ನ್ಯಾಷನಲ್, ಪ್ರಸಾದ್ ನೇತ್ರಾಲಯ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ಧ ಉಚಿತ ನೇತ್ರ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಾನವನ ಶರೀರದಲ್ಲಿ ಕಣ್ಣು ಅತ್ಯಂತ ಅಮೂಲ್ಯವಾದ ಅಂಗ. ಸುರಕ್ಷತೆ, ಕಾಳಜಿಯಿಂದ ಕಾಪಾಡುವಲ್ಲಿ ನಿರ್ಲಕ್ಷ್ಯ ತೋರಿದರೆ ಅಂಧತ್ವ ಸಂಭವಿಸಬಹುದು ಎಂದ ಅವರು ಪೊರೆ ಅಥವಾ ದೃಷ್ಟಿ ದೋಷದ ಸಣ್ಣಪುಟ್ಟ ತೊಂದರೆಗೆ ಸಿಲುಕಿದರೆ ಶೀಘ್ರವೇ ಚಿಕಿತ್ಸೆ ಕೊಡಿಸುವುದು ಅನಿರ್ವಾಯ ಎಂದು ಸಲಹೆ ಮಾಡಿದರು.
ಇಂದಿನ ಆಹಾರ ಪದ್ಧತಿಯಿಂದ ಮನುಷ್ಯನ ಆರೋಗ್ಯ ಸ್ಥಿತಿ ಹಂತ ಹಂತವಾಗಿ ಹದಗೆಡುತ್ತಿದೆ. ಅಲ್ಪಾಯುಷ್ಯಕ್ಕೆ ಯುವ ಸಮೂಹ ಹೃದಯಘಾತದಂಥ ಮಾರಕ ಕಾಯಿಲೆಗೆ ತುರ್ತಾಗಿ ಅಕಾಲಿಕ ಸಾವು ಸಂಭವಿಸುತ್ತಿದೆ. ಹೀಗಾಗಿ ಆರೋಗ್ಯದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿದರೆ ಶೀಘ್ರ ವೈದ್ಯರನ್ನು ಸಂಪರ್ಕಿಸಬೇಕು ಎಂದು ಹೇಳಿದರು.ಮನುಷ್ಯನಲ್ಲಿ ಇತ್ತೀಚಿನ ದಿನಗಳಲ್ಲಿ ಮಾನವೀಯತೆ ಮೌಲ್ಯಗಳು ಕ್ಷೀಣಿಸುತ್ತಿವೆ. ಜಾತಿ, ಜಾತಿಗಳ ನಡುವೆ ಸಂಘರ್ಷ ನಡೆಯುತ್ತಿದೆ. ಅಲ್ಲದೇ ವಿಶ್ವಾದ್ಯಂತ ಯುದ್ಧೋಪಾದಿಯಲ್ಲಿ ಅಣುಬಾಂಬ್ಗಳ ಬೆದರಿಕೆವೊಡ್ಡುತ್ತಿರುವ ಪರಿಣಾಮ ಜೀವರಾಶಿಗಳ ಅಮೂಲ್ಯ ಭೂಮಂಡಲವನ್ನು ಕಳೆದುಕೊಳ್ಳಬಹುದಾದ ಆತಂಕ ಕಾಡುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರೇಗೌಜ ಗ್ರಾ.ಪಂ. ಅಧ್ಯಕ್ಷೆ ಮಂಜುಳಾ ಮಾತನಾಡಿ, ಪಟ್ಟಣಕ್ಕೆ ತೆರಳಿ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಇರುವವರಿಗೆ ಸಂಘ ಸಂಸ್ಥೆಗಳು ಮನೆಗಳ ಸಮೀಪವೇ ನೇತ್ರಾ ತಪಾಸಣಾ ಶಿಬಿರ ಆಯೋಜಿಸಿ ವೃದ್ದರು, ಮಹಿಳೆಯರಿಗೆ ಅನುಕೂಲ ಕಲ್ಪಿಸಿರುವುದು ಹೆಮ್ಮೆಯ ಸಂಗತಿ ಎಂದರು.ಹಿರೇಗೌಜ ಪ್ರೌಢಶಾಲೆ ಶಿಕ್ಷಕ ರಾಜೇಗೌಡ ಮಾತನಾಡಿ, ಇಡೀ ಶರೀರದಲ್ಲಿ ನೇತ್ರವು ಮುಖ್ಯ ಅಂಗ ಹಾಗೂ ಅತ್ಯಂತ ಸೂಕ್ಷ್ಮವಾದುದು, ವಯಸ್ಸು ಮೀರಿದಂತೆ ಕಾಲಕ್ರಮೇಣ ನೇತ್ರ ತಪಾಸಣೆ ನಡೆಸುವುದು ಅನಿವಾರ್ಯವಾಗಿದೆ. ಕೇವಲ ದುಡಿಮೆಯಲ್ಲೇ ಜೀವನ ಕಳೆಯದೇ ವೈಯಕ್ತಿಕ ಬದುಕಿಗೆ ಸಮಯ ವ್ಯಯಿಸಬೇಕು ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ವಿಜಯ್ಕುಮಾರ್, ಗ್ರಾಮಸ್ಥರಾದ ಹಾಲಪ್ಪಗೌಡ, ಓಂಕಾರೇಗೌಡ, ಪುಷ್ಪೇಗೌಡ, ಕಾಡಪ್ಪ, ಇತರ ಅಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.