ಹೊಸಕೋಟೆ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಅವಿಮುಕ್ತೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಹಾಗೂ ಶ್ರೀ ದ್ರೌಪದಾಂಬಾ ದೇವಿ ಕರಗ ಮಹೋತ್ಸವ ಮೇ 1ರಂದು ನಡೆಯಲಿದ್ದು ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.
ದಕ್ಷಿಣ ಪಿನಾಕಿನಿ ನದಿ ತಟದಲ್ಲಿರುವ ಹೊಸಕೋಟೆ ಶ್ರೀ ಅವಿಮುಕ್ತೇಶ್ವರ ಸ್ವಾಮಿ ರಥೋತ್ಸವ ಶತಮಾನದ ಇತಿಹಾಸವನ್ನು ಹೊಂದಿದೆ. ಸುಮಾರು 14 ದಿನಗಳ ಕಾಲ ರಥೋತ್ಸವದ ಪೂಜಾ ಕಾರ್ಯಗಳು ನಡೆಯಲಿದ್ದು, ನಗರದ ಪೇಟೆಗಳ ಗೌಡರು, ಯಜಮಾನರು, ಗಣಾಚಾರಿಗಳು ಹಾಗೂ ಎಲ್ಲಾ ಬಡಾವಣೆಗಳ ಮುಖಂಡರು ಶ್ರದ್ಧಾ- ಭಕ್ತಿಯಿಂದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಏಪ್ರಿಲ್ 27 ರಿಂದ ಪೂಜಾ ಕಾರ್ಯಕ್ರಮಗಳು ಪ್ರಾರಂಭಗೊಂಡಿದ್ದು, ಅಂಕುರಾರ್ಪಣೆ, ನಂದಿ ವಾಹನೋತ್ಸವ, ಶೇಷ ವಾಹನೋತ್ಸವ ಸಾಂಗವಾಗಿ ನಡೆದಿವೆ. ಏ 30ರಂದು ಕಾಶಿಯಾತ್ರೆ, ಗಿರಿಜಾ ಕಲ್ಯಾಣೋತ್ಸವ ನಡೆಯಲಿದ್ದು, ಮೇ 1ರಂದು ಹೊಸಕೋಟೆ ತಾಲೂಕು ಬ್ರಾಹ್ಮಣ ಜಾಗೃತ ವೇದಿಕೆ ಮತ್ತು ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಮಡಿ ಉತ್ಸವ ಸೇವೆ ನೆರವೇರಲಿದೆ.
ಮೇ 1ರ ಶುಕ್ರವಾರ ಮಧ್ಯಾಹ್ನ 12:20 ರಿಂದ ಶ್ರೀ ಅವಿಮುಕ್ತೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಹಾಗೂ ರಾತ್ರಿ 12 ಗಂಟೆಗೆ ಶ್ರೀ ಧರ್ಮರಾಯಸ್ವಾಮಿ, ಶ್ರೀ ದ್ರೌಪದಮ್ಮ ದೇವಿ ಹೂವಿನ ಕರಗ ಮಹೋತ್ಸವ ನಡೆಯಲಿವೆ.ಈ ಬಾರಿ ಹೊಸ ರಥದೊಂದಿಗೆ ಉತ್ಸವ:
ಬೆಂಡಿಗಾನಹಳ್ಳಿ ಬಿ.ಎನ್.ಬಚ್ಚೇಗೌಡರ ಕುಟುಂಬ ಕಳೆದ ವರ್ಷ ಕೊಟ್ಟ ಮಾತಿನಂತೆ ಸುಮಾರು ₹2.5ಕೋಟಿ ವೆಚ್ಚದಲ್ಲಿ ನೂತನ ರಥವನ್ನು ಸಮರ್ಪಣೆ ಮಾಡಿದ್ದು, ಈಗಾಗಲೇ ರಥಕ್ಕೆ ಪೂಜೆ ಸಲ್ಲಿಸಿ ಪ್ರತಿಷ್ಠಾಪನೆ ಮಾಡಲಾಗಿದೆ. ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ನಾಮದೇವ, ಶಾಸಕ ಶರತ್ ಬಚ್ಚೇಗೌಡ, ತಹಸೀಲ್ದಾರ್ ಸೋಮಶೇಖರ್, ಪೌರಾಯುಕ್ತ ನೀಲಲೋಚನ ಪ್ರಭು, ಪ್ರಧಾನ ಅರ್ಚಕ ರವಿಕುಮಾರ್ ರಥಕ್ಕೆ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.