ಹುಬ್ಬಳ್ಳಿ:

ಇಲ್ಲಿನ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ಬುಧವಾರ ನಡೆದ ಮಹಾರಾಜ ಟ್ರೋಫಿ ಟಿ-20 ಕ್ರಿಕೆಟ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡವು ಆತಿಥೇಯ ಹುಬ್ಬಳ್ಳಿ ಟೈಗರ್ಸ್ ವಿರುದ್ಧ 2 ರನ್‌ಗಳ ರೋಚಕ ಜಯ ದಾಖಲಿಸಿತು. ಈ ಮೂಲಕ ಪ್ಲೇಆಪ್‌ ಪ್ರವೇಶದತ್ತ ಮತ್ತೊಂದು ಭದ್ರ ಹೆಜ್ಜೆಯನ್ನಿಟ್ಟಿತು.

ಟಾಸ್ ಗೆದ್ದ ಹುಬ್ಬಳ್ಳಿ ಟೈಗರ್ಸ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಲ್ಲೇ ಬೌಲಿಂಗ್‌ನಲ್ಲಿ ಮಿಂಚಿದ ವೈಭವ ಶರ್ಮಾ ತಂಡದ ಮೊತ್ತ 11 ರನ್ ಆಗಿದ್ದಾಗ ಸತತ 2 ವಿಕೆಟ್ ಉರುಳಿಸಿ ಬೆಂಗಳೂರು ಬ್ಲಾಸ್ಟರ್ಸ್‌ಗೆ ಆರಂಭಿಕ ಆಘಾತ ನೀಡಿದರು.

ಬೆಂಗಳೂರು ಬ್ಲಾಸ್ಟರ್ಸ್ ಪರ ಭುವನ್ ರಾಜು 10, ಶ್ರೀಜಿತ್ ಶೂನ್ಯ, ಸಮಿತ್ ದ್ರಾವಿಡ್ 32 ಹಾಗೂ ಫೈಜಾನ್ ಖಾನ್ 6 ರನ್ ಗಳಿಸಿ ನಿರ್ಗಮಿಸಿದರು. ರೋಹನ್ ಪಾಟೀಲ 64 ರನ್ ಗಳಿಸಿ ಹಾರ್ದಿಕ್ ರಾಜ್ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿ ಔಟಾದರು. ನಂತರ ಪ್ರವೀಣ ದುಬೆ 51 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರೆ, ಶಿವರಾಜ್ ಅಜೇಯ 23 ಹಾಗೂ ರೋಹನ್ ನವೀನ್ ಅಜೇಯ 2 ರನ್ ಗಳಿಸಿದರು. ನಿಗದಿತ 20 ಓವರ್‌ಗಳಲ್ಲಿ ಬೆಂಗಳೂರು ಬ್ಲಾಸ್ಟರ್ಸ್ 7 ವಿಕೆಟ್ ನಷ್ಟಕ್ಕೆ 203 ರನ್ ಪೇರಿಸಿತು. ಹುಬ್ಬಳ್ಳಿ ಪರ ವೈಭವ ಶರ್ಮಾ 38 ರನ್ ನೀಡಿ 3 ವಿಕೆಟ್ ಹಾಗೂ ಅಭಿಷೇಕ್ 39 ರನ್ ನೀಡಿ 2 ವಿಕೆಟ್ ಪಡೆದರು.

204 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಹುಬ್ಬಳ್ಳಿ ಟೈಗರ್ಸ್‌ಗೆ ಆರಂಭಿಕ ಬ್ಯಾಟರ್‌ಗಳ ವೈಫಲ್ಯದಿಂದ ಹಿನ್ನಡೆಯಾಯಿತು. ಆದರೆ, ಕೆಳಕ್ರಮಾಂಕದಲ್ಲಿ ಅನೀಶ್ವರ್ ಗೌತಮ್ 34, ರಕ್ಷಿತ್ 41 ಹಾಗೂ ಮನ್ವಂತ್ ಕುಮಾರ್ 60 ರನ್‌ಗಳ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಗೆಲುವಿನ ಆಸೆ ಮೂಡಿಸಿದರು. ಕೊನೆಯ ಹಂತದಲ್ಲಿ ತೀವ್ರ ಹೋರಾಟ ನೀಡಿದರೂ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಲಷ್ಟೇ ಶಕ್ತವಾಗಿ, 2 ರನ್‌ಗಳ ಅಂತರದಲ್ಲಿ ಸೋಲೊಪ್ಪಿಕೊಂಡಿತು.


ಬೆಂಗಳೂರು ಬ್ಲಾಸ್ಟರ್ಸ್ ಪರ ನಿಶ್ಚಿತ್ ರಾವ್ 27 ರನ್ ನೀಡಿ 3 ವಿಕೆಟ್ ಹಾಗೂ ವಿದ್ವತ್ ಕಾವೇರಪ್ಪ 55 ರನ್ ನೀಡಿ 2 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಬಾಕ್ಸ್...

ನಾಯಕ ಮಯಾಂಕ್‌ಗೆ ಗಾಯ

ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್‌ ಹಾಗೂ ಹುಬ್ಬಳ್ಳಿ ಟೈಗರ್ಸ್‌ ಮಧ್ಯ ಬುಧವಾರ ನಡೆದ ಪಂದ್ಯದಲ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಹುಬ್ಬಳ್ಳಿ ಟೈಗರ್ಸ್‌ ನಾಯಕ ಮಯಾಂಕ ಅಗರವಾಲ್ ಕೊನೆಯ ಓವರ್‌ನ 2ನೇ ಎಸೆತೆದಲ್ಲಿ ಬೌಂಡರಿಗೆ ಹೋಗುತ್ತಿದ್ದ ಬಾಲನ್ನು ತಡೆಯಲು ಹೋಗಿ ಡೈ ಹೊಡೆದಾಗ ಬಲ ಕೈ ಬುಜಕ್ಕೆ ತೀವ್ರವಾದ ಪೆಟ್ಟು ಬಿದ್ದಿದ್ದು, ಮೂಳೆ ಮುರಿತವಾಗಿರುವ ಸಾಧ್ಯತೆಯಿಂದ ಅವರನ್ನು ಎಂಆರ್‌ಐ ಸ್ಕ್ಯಾನ್‌ಗೆ ಕಳುಹಿಸಿ ಕೊಡಲಾಗಿದೆ ಎಂದು ತಿಳಿದು ಬಂದಿದೆ.

ಸಂಕ್ಷಿಪ್ತ ಸ್ಕೋರ್:

ಬೆಂಗಳೂರು ಬ್ಲಾಸ್ಟರ್ಸ್: 20 ಓವರ್‌ಗಳಲ್ಲಿ 203/7

(ರೋಹನ್ 64, ಸಮಿತ್ 32, ಪ್ರವೀಣ್ ದುಬೆ 51, ಎಸ್. ಶಿವರಾಜ್ 23; ವೈಭವ್ ಶರ್ಮಾ 3/38, ಅಭಿಷೇಕ್ 2/39)

ಹುಬ್ಬಳ್ಳಿ ಟೈಗರ್ಸ್:

20 ಓವರ್‌ಗಳಲ್ಲಿ 201/7

(ಹಾರ್ದಿಕ್ ರಾಜ್ 25, ಅನೇಷ್ವರ್ ಗೌತಮ್ 34, ಶಿವಕುಮಾರ್ 41, ಮನ್ವಂತ್ ಕುಮಾರ್ 60; ನಿಶ್ಚಿತ್ ರಾವ್ 3/27, ವಿದ್ವತ್ ಕಾವೇರಪ್ಪ 2/55)