ಯಲಬುರ್ಗಾ: ಇಂದಿನ ಯುವಪೀಳಿಗೆ ಬಸವಾದಿ ಶರಣರ ವಚನಗಳ ಚಿಂತನೆ ಮಾಡುವ ಮೂಲಕ ಬದುಕು ಹಸನಾಗಿಸಿಕೊಳ್ಳಬೇಕು ಎಂದು ಶರಣ ಬಸವರಾಜಪ್ಪ ಇಂಗಳದಾಳ ಹೇಳಿದರು.
ತಾಲೂಕಿನ ಮರಕಟ್ ಗ್ರಾಮದಲ್ಲಿ ಲಿ. ಬಾಳನಗೌಡ ಪಾಟೀಲ್ ಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ಲಿಂಗಾಯತ ಧರ್ಮದ ನಿಜಾಚರಣೆಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ದೇವರು ಧರ್ಮದ ಹೆಸರಿನಲ್ಲಿ ನಡೆಯುವ ಭ್ರಷ್ಟಾಚಾರ ತಡೆಗಟ್ಟಲು ಬಸವಾದಿ ಶರಣರ ವಚನ ಚಿಂತನೆಯಿಂದ ಮಾತ್ರ ಸಾಧ್ಯ. ದೇಹವನ್ನು ದೇವಾಲಯವಾಗಿಸಲು ಶರಣರು ನೀಡಿದ ಸಲಹೆಯಂತೆ ನಡೆದು ನೆಮ್ಮದಿಯ ಬದುಕನ್ನು ಕಟ್ಟಿಕೂಳ್ಳಬೇಕು ಎಂದರು.
ಬಸವ ಕೇಂದ್ರದ ಅಧ್ಯಕ್ಷ ಅಮರೇಶಪ್ಪ ಬಳ್ಳಾರಿ ಮಾತನಾಡಿ, ಬಸವಾದಿ ಶರಣರ ವಚನ ಚಿಂತನೆಯಿಂದ ಸಂಪದ್ಭರಿತ ಹಾಗೂ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಹೀಗಾಗಿ ಯುವ ಪೀಳಿಗೆ ಶರಣರ ವಚನ ಚಿಂತನೆಯಿಂದ ವೈಯಕ್ತಿಕ ಹಾಗೂ ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದರು.ಮೌನೇಶ್ ಪತ್ತಾರ ಮಾತನಾಡಿ, ಯುವ ಪೀಳಿಗೆ ದುಶ್ಚಟಗಳಿಂದ ದೂರವಿದ್ದು, ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.
ಬಸವ ಕೇಂದ್ರದ ಗೌರವಾಧ್ಯಕ್ಷ ಹನುಮಗೌಡ ಬಳ್ಳಾರಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ರಾಷ್ಟ್ರೀಯ ಬಸವದಳ ಅಧ್ಯಕ್ಷ ರೇಣುಕಪ್ಪ ಮಂತ್ರಿ, ನಿರುಪಾದೆಪ್ಪ ಹುಣಿಸಿಹಾಳ, ದೇವಪ್ಪ ವನಜಭಾವಿ, ಮಲ್ಲೇಶಪ್ಪ ಮಾಟಲದಿನ್ನಿ, ಪಾಲಾಕ್ಷಪ್ಪ ಕಲ್ಲಭಾವಿ, ಶಿವಣ್ಣ ಕರುವಿನ, ಗುರುರಾಜ ಪಾಟೀಲ್, ಕೆ.ಸುರೇಶ, ಶಿವಶಂಕರ ಬಳ್ಳಾರಿ, ಬಾಳನಗೌಡ ಸೇರಿದಂತೆ ಮತ್ತಿತರರು ಇದ್ದರು.