ಕನ್ನಡಪ್ರಭ ವಾರ್ತೆ ಕುಣಿಗಲ್
ಬಸವಣ್ಣ ಅನುಭವ ಮಂಟಪ ಎಂಬ ವಿಶೇಷವಾದ ಪರಿಕಲ್ಪನೆಯನ್ನು ರಚಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಂದು ಜಾರಿಗೆ ತಂದಂತಹ ವಿಶ್ವದ ಮೊದಲ ಸಂವಿಧಾನ ಶಿಲ್ಪಿ ಎಂದು ಕುಣಿಗಲ್ ಶಾಸಕ ಡಾ. ರಂಗನಾಥ ತಿಳಿಸಿದ್ದಾರೆ. ಕುಣಿಗಲ್ ಪಟ್ಟಣದಲ್ಲಿ ಟೌನ್ ವೀರಶೈವ ಸಮಾಜದ ವತಿಯಿಂದ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಬಸವಣ್ಣನ ತತ್ವಗಳನ್ನು ಅವರ ವಚನಗಳ ಮುಖಾಂತರ ಸಂದೇಶ ವಿಶ್ವ ಶಾಂತಿ ಹಾಗೂ ಸಂವಿಧಾನವನ್ನು ನೀಡುವ ಕೆಲಸ ಮಾಡಿದ್ದಾರೆ. ಮನುಷ್ಯ ಧರ್ಮಕ್ಕೆ ಪ್ರತಿಪಾದನೆಯಾಗಿ ಮತ್ತೊಂದು ರೂಪವಾದ ಬಸವಣ್ಣ ಅವರ ಮಾರ್ಗ ಮತ್ತು ಅವರ ಶಾಂತಿ ಇತರ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದರು. ಇದಕ್ಕೂ ಮುನ್ನ ತಹಸಿಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತದ ವತಿಯಿಂದ ಬಸವಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಹುಲಿಯೂರುದುರ್ಗದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಬಸವಣ್ಣನ ಹುಟ್ಟು ಮತ್ತು ಸಾವು ವಿಚಿತ್ರ ಹಾಗೂ ವಿಶೇಷವಾದಂತಹ ಘಟನೆಗಳನ್ನು ಕಂಡುಬರುತ್ತದೆ ಅಂತಹ ಮಹಾಪುರುಷರಲ್ಲಿ ವಿಶೇಷವಾದ ಪುರುಷ ಬಸವಣ್ಣ ಆಗಿದ್ದಾರೆ ಎಂದರು.ಅಂಕನಹಳ್ಳಿ ಶಿವರುದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬಸವ ಜಯಂತಿ ಕೇವಲ ಒಂದು ದಿನಕ್ಕೆ ಮಾತ್ರ ಆಚರಣೆ ಆಗಬಾರದು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಬಸವನ ಗುಣ ಸ್ವಭಾವಗಳನ್ನು ಅಳವಡಿಸಿಕೊಂಡು ಸಾರ್ವಜನಿಕರ ಜೊತೆಯಲ್ಲಿ ಸಹಬಾಳ್ವೆ ಹಾಗೂ ಸಹಮತ ಮತ್ತು ಸಹೋದರತ್ವದಿಂದ ಬದುಕಿದಾಗ ಮಾತ್ರ ಬಸವ ಧರ್ಮ ಪರಿಪಾಲನೆ ಆಗಲು ಸಾಧ್ಯ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಮತಾಮಣಿ ಮಾತನಾಡಿ, ಹಲವಾರು ಶರಣರು ಸಾಧಕರು ಹಲವಾರು ಮಾರ್ಗಗಳನ್ನು ಅಳವಡಿಸಿಕೊಂಡು ಧರ್ಮ ಜಾಗೃತಿ ಮಾಡಿದರು ಬಸವಣ್ಣ ವಚನಗಳ ರಚಿಸುವ ಹಾಗೂ ಇತರರಿಗೆ ತಿಳಿಸುವ ಕೆಲಸವನ್ನು ಮಾಡುವ ಮುಖಾಂತರ ಬಸವಧರ್ಮವನ್ನು ಪ್ರತಿಷ್ಠಾಪನೆ ಮಾಡಿದರು ಮಹಿಳೆಯರಿಗೆ ಮೀಸಲಾತಿ ಕೊಟ್ಟ ಸಮಾನತೆಯ ಹರಿಕಾರ ಬಸವಣ್ಣ ಎಂದರು.
ಕುಣಿಗಲ್ ಟೌನ್ ಅಧ್ಯಕ್ಷ ವಸಂತಕುಮಾರ್ ಮಾತನಾಡಿ, ಸಮಾಜದಲ್ಲಿ ಮಹಿಳೆಯರಿಗೆ ಸಮಾನತೆ ಕೊಟ್ಟಂತಹ ಧರ್ಮ ಅದು ಲಿಂಗಾಯಿತ ಧರ್ಮ ಅಂತಹ ಧರ್ಮದ ಧರ್ಮ ಗುರುವಿನ ಹೆಸರಿನಲ್ಲಿ ಈ ದಿನ ಕಾರ್ಯಕ್ರಮವನ್ನು ಮಾಡುತ್ತಿರುವುದು ಪ್ರತಿಯೊಬ್ಬರಿಗೂ ಸಂತಸ ತಂದಿದೆ ಎಂದರು.ಈ ಸಂದರ್ಭದಲ್ಲಿ ಉಪ ತಹಸಿಲ್ದಾರ್ ರವೀಂದ್ರ, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಬಸವರಾಜಪ್ಪ, ಟೌನ್ ವೀರಶೈವ ಸಮಾಜದ ಅಧ್ಯಕ್ಷ ವಸಂತ್ ಕುಮಾರ್, ಮಹಾಸಭಾದ ಜಿಲ್ಲಾ ನಿರ್ದೇಶಕ ನಿತ್ಯಾನಂದ, ಟೌನ್ ವೀರಶೈವ ವಿವಿಧೋದ್ಧೇಶ ಸಹಕಾರ ಸಂಘದ ಅಧ್ಯಕ್ಷ ಚೇತನ್, ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವನಂಜಯ್ಯ ಸೇರಿದಂತೆ ಹಲವಾರು ಸಂಘ ಸಂಸ್ಥೆಯ ಪದಾಧಿಕಾರಿಗಳು ಇದ್ದರು.