ಬಿಳಿಗಿರಿರಂಗನ ಬೆಟ್ಟದಲ್ಲಿ ಗಜರಾಜನ ದಾದಾಗಿರಿ

| Published : Jun 14 2024, 01:02 AM IST

ಸಾರಾಂಶ

ರಾಜ್ಯದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾದ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಬೆಳ್ಳಂಬೆಳಗ್ಗೆ ಆನೆ ಓಡಾಡಿ ಜನರನ್ನು ಆತಂಕಕ್ಕೆ ಈಡು ಮಾಡಿರುವ ಘಟನೆ ನಡೆದಿದೆ‌‌‌.

ಚಾಮರಾಜನಗರ: ರಾಜ್ಯದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾದ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಬೆಳ್ಳಂಬೆಳಗ್ಗೆ ಆನೆ ಓಡಾಡಿ ಜನರನ್ನು ಆತಂಕಕ್ಕೆ ಈಡು ಮಾಡಿರುವ ಘಟನೆ ನಡೆದಿದೆ‌‌‌. ಬಿಳಿಗಿರಿರಂಗನ ಬೆಟ್ಟದ ಮುಖ್ಯರಸ್ತೆ, ಬಂಗಲೆ ಪೋಡಿನ ನಡುವೆ ನೀಳದಂತದ ಕಾಡಾನೆಯೊಂದು ಓಡಾಡಿ ಅಲ್ಲಿನ ಜನರನ್ನು, ಭಕ್ತರನ್ನು ಪರದಾಡುವಂತೆ ಮಾಡಿದೆ. ಬೆಳ್ಳಂಬೆಳಗ್ಗೆಯೇ ಗಜರಾಜನ ದಾದಾಗಿರಿಗೆ ಜನರು ಅವಾಕ್ಕಾಗಿದ್ದು ಎದುರಿಗೆ ಬಂದ ಕೆಎಸ್ಆರ್‌ಟಿಸಿ ಬಸ್, ಟಾಟಾ ಏಸ್ ವಾಹನವನ್ನು ಹಿಮ್ಮೆಟ್ಟಿಸಿ ಓಡಿಸಿದೆ. ಕಳೆದ ಎರಡು ತಿಂಗಳಿನಿಂದಲೂ ಪೋಡುಗಳತ್ತ ಈ ಆನೆ ಧಾವಿಸುತ್ತಿದೆ ಎಂದು ತಿಳಿದುಬಂದಿದೆ‌. ಮಾವಿನ ಹಣ್ಣು‌ ಹಾಗೂ ಹಲಸಿನ ಹಣ್ಣಿಗಾಗಿ ಪೋಡುಗಳತ್ತ ಬರುತ್ತಿದೆ ಎನ್ನಲಾಗಿದೆ.

ಗಜರಾಜನ ಅಟ್ಟಹಾಸಕ್ಕೆ ರೈಲ್ವೆ ತಡೆಗೋಡೆ ಕಂಬಿ ಮುರಿತಹನೂರು: ಗಜರಾಜನ ಅಟ್ಟಹಾಸಕ್ಕೆ ರೈಲ್ವೆ ತಡೆಗೋಡೆ ಕಂಬಿ ಮುರಿದು ಬಿದ್ದಿರುವ ಘಟನೆ ಹನೂರು ವಲಯದ ಬೆಲದಕೆರೆ ಸಮೀಪ ಜರುಗಿದೆ. ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹನೂರು ಬಫರ್ ಜೋನ್ ವಲಯದ ಬೆಲದಕೆರೆ ಸಮೀಪ ಅರಣ್ಯ ಇಲಾಖೆ ನಿರ್ಮಾಣ ಮಾಡಿರುವ ರೈಲ್ವೆ ಕಂಬಿ ತಡೆಗೋಡೆ ಗಜರಾಜನ ಆಕ್ರೋಶಕ್ಕೆ ಕಂಬಿಗಳು ಮುರಿದು ಬಿದ್ದಿದೆ. ಇದರಿಂದಾಗಿ ಅರಣ್ಯ ಪ್ರದೇಶದಿಂದ ನೇರವಾಗಿ ರೈತರ ಜಮೀನುಗಳಿಗೆ ಬರಲು ಅನುಕೂಲದಾಯಕವಾಗಿದೆ. ಈ ಭಾಗದಲ್ಲಿಯೂ ಸಹ ಅರಣ್ಯದಂಚಿನಲ್ಲಿ ತೋಟದ ಮನೆಗಳಲ್ಲಿ ನೂರಾರು ಕುಟುಂಬಗಳು ವಾಸವಿದ್ದು ಕಾಡನೆಗಳ ಉಪಟಳ ತಪ್ಪಿಸಲು ಅರಣ್ಯ ಇಲಾಖೆ ರೈಲ್ವೆ ಕಂಬಿ ತಡೆಗೋಡೆಯನ್ನು ನಿರ್ಮಿಸಿದ್ದರೂ ಸಹ ಅದನ್ನೇ ಆನೆಗಳು ಮುರಿದು ಹಾಕಿವೆ.ರೈಲ್ವೆ ತಡೆಗೋಡೆಯನ್ನು ನಿರ್ಮಿಸಿದ್ದರೂ ಆನೆಗಳು ರೈಲ್ವೆ ಕಂಬಿಗಳನ್ನೇ ಮುರಿದು ಹಾಕಿ ರೈತರ ಜಮೀನುಗಳಿಗೆ ನುಗ್ಗಿ ಫಸಲನ್ನು ಹಾನಿ ಉಂಟು ಮಾಡುತ್ತಿದೆ. ಈ ಘಟನೆಯಿಂದ ಬೇಲದ ಕೆರೆ ವ್ಯಾಪ್ತಿಯ ರೈತರು ತುಂಬಾ ಆತಂಕಕ್ಕೆ ಒಳಗಾಗಿದ್ದು ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ಮುರಿದಿರುವ ರೈಲ್ವೆ ಕಂಬಿಯನ್ನು ಸರಿಪಡಿಸಿ ಆನೆಗಳು ಬರದಂತೆ ತಡೆಗಟ್ಟುವಂತೆ ಸ್ಥಳೀಯ ರೈತರು ಒತ್ತಾಯಿಸಿದ್ದಾರೆ.