ಉಡುಪಿ : ‘ರಾಜ್ಯದಲ್ಲಿ ಇನ್ನು ಮುಂದೆ 108 ಆ್ಯಂಬುಲೆನ್ಸ್‌ನ ಚಾಲಕರು ಕರೆ ಬಂದ ಬಳಿಕ 15 ನಿಮಿಷದಲ್ಲಿ ಆ ಸ್ಥಳಕ್ಕೆ ತಲುಪಬೇಕು. ಇಲ್ಲದಿದ್ದರೆ ಅವರಿಗೆ 5 ಸಾವಿರ ರು. ದಂಡ ವಿಧಿಸಲಾಗುತ್ತದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್ ಎಚ್ಚರಿಕೆ ನೀಡಿದ್ದಾರೆ.

 ರಾಷ್ಟ್ರೀಯ ಆ್ಯಂಬುಲೆನ್ಸ್ ಸೇವೆಗಳ ಮಾರ್ಗಸೂಚಿ

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ. ‘ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ರಾಷ್ಟ್ರೀಯ ಆ್ಯಂಬುಲೆನ್ಸ್ ಸೇವೆಗಳ ಮಾರ್ಗಸೂಚಿಗಳ ಪ್ರಕಾರ, ತುರ್ತು ಕರೆ ಬಂದ 20 ನಿಮಿಷಗಳ ಒಳಗೆ ಆ್ಯಂಬುಲೆನ್ಸ್ ಸ್ಥಳವನ್ನು ತಲುಪಬೇಕು. ಇದು ತುರ್ತು ವೈದ್ಯಕೀಯ ಚಿಕಿತ್ಸೆಯ ಪ್ರಮುಖ ಸಮಯವಾದ ''ಗೋಲ್ಡನ್ ಅವರ್'' ನ್ನು ಆಧರಿಸಿದೆ. ಆದರೆ, ನಮ್ಮ ರಾಜ್ಯದಲ್ಲಿ 15 ನಿಮಿಷದಲ್ಲಿ ತಲುಪುವ ನಿಯಮವನ್ನು ಜಾರಿಗೆ ತರುತ್ತೇವೆ. 15 ನಿಮಿಷದಲ್ಲಿ ಅವರು ಘಟನಾ ಸ್ಥಳಕ್ಕೆ ತಲುಪಿದರೆ ಶೇ.90ರಷ್ಟು ಸಮಸ್ಯೆ ಪರಿಹಾರವಾಗುತ್ತದೆ’ ಎಂದರು.

ರಾಜ್ಯದಲ್ಲಿ 700ರಿಂದ 800 ಆ್ಯಂಬುಲೆನ್ಸ್ ಗಳಿವೆ

‘ರಾಜ್ಯದಲ್ಲಿ 700ರಿಂದ 800 ಆ್ಯಂಬುಲೆನ್ಸ್ ಗಳಿವೆ. ಈ ಸೇವೆಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸಬೇಕಿದೆ. ಈ‌ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ, ಮಾರ್ಗಸೂಚಿ ಬಿಡುಗಡೆ ಮಾಡುತ್ತೇವೆ. ಮಾರ್ಗಸೂಚಿ ಬಿಡುಗಡೆಯಾಗಿ ಕಾರ್ಯಗತವಾಗಲು ಮೂರು ತಿಂಗಳು ಹಿಡಿಯುತ್ತದೆ’ ಎಂದರು.