ವಿಧಾನ ಪರಿಷತ್ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಅರ್ಜಿ ಮರುಪರಿಶೀಲನೆಗಾಗಿ ಸೇವಾ ಸಿಂಧು ಕೇಂದ್ರಗಳು ಹಾಗೂ ಮನೆ-ಮನೆ ಸಮೀಕ್ಷೆ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ವಿಧಾನ ಪರಿಷತ್ನ ಕಾಂಗ್ರೆಸ್ ಸದಸ್ಯ ದಿನೇಶ್ ಗೂಳಿಗೌಡ ಅವರ ಚುಕ್ಕೆಗುರುತಿಲ್ಲದ ಪ್ರಶ್ನೆಗೆ ಉತ್ತರ ನೀಡಿರುವ ಮುಖ್ಯಮಂತ್ರಿ ಅವರು, ಮರುಪರಿಶೀಲನೆ ಪ್ರಕ್ರಿಯೆಯಲ್ಲಿ ಫಲಾನುಭವಿಗಳ ಬಯೊಮೆಟ್ರಿಕ್/ಫೇಸ್ ಆಥೆಂಟಿಕೇಶನ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದೇ ಉದ್ದೇಶಕ್ಕಾಗಿ ಇ-ಡಿಸಿಎಸ್ ಮೂಲಕ ಮೊಬೈಲ್ ಆ್ಯಪ್ ಹಾಗೂ ವೆಬ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಾಗಿದ್ದು, ಅಂತಿಮ ಪರಿಶೀಲನಾ ಹಂತದಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈವರೆಗೂ 76,951ಕೋಟಿ ರು. ಪಾವತಿ
ಗೃಹಲಕ್ಷ್ಮಿ ಯೋಜನೆಯ ಒಟ್ಟು 1,24,48,938 ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಈವರೆಗೂ 76,951ಕೋಟಿ ರು. ಪಾವತಿಸಿದೆ. ಪ್ರತಿ ಮನೆಯ ಯಜಮಾನಿಗೆ ಈವರೆಗೂ 32 ಕಂತುಗಳಲ್ಲಿ ತಲಾ 2000 ರು. ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಯೋಜನೆ ಆರಂಭವಾದಾಗಿನಿಂದ ಜೂನ್-2026ರ ಅಂತ್ಯವರೆಗೆ ಒಟ್ಟು 3,13,297 ಫಲಾನುಭವಿಗಳು ಮರಣ ಹೊಂದಿದ್ದಾರೆ. ಈ ಪೈಕಿ 1,10,562 ಫಲಾನುಭವಿಗಳ ಖಾತೆಗೆ ಮರಣಾ ನಂತರವೂ 117.31 ಕೋಟಿ ರು. ಹಣ ಜಮೆಯಾಗಿದ್ದು, ಈ ಪೈಕಿ ಈವರೆಗೆ 40.07 ಕೋಟಿ ರು. ಮಾತ್ರ ಸರ್ಕಾರದ ಲೆಕ್ಕಶೀರ್ಷಿಕೆಗೆ ಮರುಜಮೆಯಾಗಿದೆ ಎಂದು ಹೇಳಿದ್ದಾರೆ.
ಮೃತರ ಖಾತೆಗೆ ಹಣ ಜಮೆ ವಾಪಸ್ಗೆ ಯತ್ನ:
ಗೃಹಲಕ್ಷ್ಮಿ ಯೋಜನೆಯ ದುರುಪಯೋಗ ತಡೆಯಲು ಫಲಾನುಭವಿಗಳ ಮರು ಪರಿಶೀಲನೆ ಅಗತ್ಯವಿದೆ. ಮೃತರ ಖಾತೆಗಳಿಗೆ ಜಮೆ ಆಗಿರುವ ಹಣ ವಾಪಸ್ ಪಡೆಯುವ ಪ್ರಕ್ರಿಯೆ ಆಯಾ ಜಿಲ್ಲಾವಾರು ನಡೆಯುತ್ತಿದೆ. ಜೊತೆಗೆ ಮರಣ ಹೊಂದಿದ ಫಲಾನುಭವಿ ಕುಟುಂಬದ ಇತರ ಸದಸ್ಯರನ್ನು ಪರ್ಯಾಯ ಫಲಾನುಭವಿಯಾಗಿ ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
- ಈವರೆಗೆ ಗೃಹಜ್ಯೋತಿ ಯೋಜನೆ ಫಲಾನುಭವಿಗಳ ಮನೆ-ಮನೆ ಸಮೀಕ್ಷೆ
- ಇತ್ತೀಚೆಗೆ ಕೆಲವು ಮೃತ ಗೃಹಲಕ್ಷ್ಮಿ ಫಲಾನುಭವಿಗಳ ಹೆಸರು ಡಿಲೀಟ್
- ಇದೀಗ ಗೃಹಲಕ್ಷ್ಮಿ ಫಲಾನುಭವಿಗಳ ಮನೆ-ಮನೆ ಸಮೀಕ್ಷೆಗೆ ಸರ್ಕಾರದ ಕ್ರಮ
- ಇದಕ್ಕಾಗಿ ಆ್ಯಪ್ ಅಭಿವೃದ್ಧಿ. ಪರಿಶೀಲನೆ ಪ್ರಕ್ರಿಯೆ ಅಂತಿಮ ಹಂತದಲ್ಲಿ
- ಮೇಲ್ಮನೆ ಸದಸ್ಯ ದಿನೇಶ್ ಗೂಳಿಗೌಡ ಪ್ರಶ್ನೆಗೆ ಸಿಎಂ ಡಿಕೆಶಿ ಲಿಖಿತ ಉತ್ತರ
