ಧಾರ್ಮಿಕ ಮಂಟಪ ನಿರ್ಮಾಣಕ್ಕೆ ಭೂಮಿ ಪೂಜೆ

| Published : Sep 11 2025, 12:03 AM IST

ಸಾರಾಂಶ

ದಸರಾ ಉತ್ಸವ ಅಂಗವಾಗಿ ನಿರ್ಮಾಣ ಮಾಡಲಿರುವ ಬೃಹತ್ ಧಾರ್ಮಿಕ ಮಂಟಪ ನಿರ್ಮಾಣಕ್ಕೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್‌ ಅವರು ಬುಧವಾರ ಭೂಮಿ ಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುದಸರಾ ಉತ್ಸವ ಅಂಗವಾಗಿ ನಿರ್ಮಾಣ ಮಾಡಲಿರುವ ಬೃಹತ್ ಧಾರ್ಮಿಕ ಮಂಟಪ ನಿರ್ಮಾಣಕ್ಕೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್‌ ಅವರು ಬುಧವಾರ ಭೂಮಿ ಪೂಜೆ ನೆರವೇರಿಸಿದರು.ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಭೂಮಿಪೂಜೆ ನೆರವೇರಿಸಿದ ನಂತರ ಮಾತನಾಡಿದ ಸಚಿವರು ಸೆಪ್ಟೆಂಬರ್ 22 ರಿಂದ 11 ದಿನಗಳ ಕಾಲ ನಡೆಯಲಿರುವ ತುಮಕೂರು ಜಿಲ್ಲಾ ದಸರಾ ಉತ್ಸವದ ಅಂಗವಾಗಿ ನಾಡದೇವಿ ಚಾಮುಂಡೇಶ್ವರಿಯನ್ನು ಪೂಜಿಸಿ ಹೋಮ-ಹವನ, ಮತ್ತಿತರ ಪೂಜಾ ಕೈಂಕರ್ಯಗಳನ್ನು ನಡೆಸಲು ಭವ್ಯವಾದ ಧಾರ್ಮಿಕ ಮಂಟಪವನ್ನು ನಿರ್ಮಿಸಲಾಗುವುದು. ಮಂಟಪದಲ್ಲಿ ಕಳೆದ ಬಾರಿ 9 ದಿನಗಳ ಕಾಲ ತಾಯಿ ಚಾಮುಂಡೇಶ್ವರಿಯನ್ನು ಅಲಂಕರಿಸಿ ಪೂಜಿಸಿದಂತೆ ಈ ಬಾರಿಯೂ ದೇವಿಯೂ ಪ್ರತಿ ದಿನ ನವದುರ್ಗೆಯರ ವಿವಿಧ ರೂಪಗಳಲ್ಲಿ ಭಕ್ತರಿಗೆ ದರುಶನ ನೀಡಲಿದ್ದಾಳೆ ಎಂದು ತಿಳಿಸಿದರು. ದಸರಾ ಉತ್ಸವವು ನಿರ್ವಿಘ್ನವಾಗಿ ನಡೆಯಲೆಂದು ಸಂಕಷ್ಟಹರ ಗಣಪತಿ ಚತುರ್ಥಿ ವ್ರತ ಪೂಜೆಯ ದಿನದಂದೇ ಧಾರ್ಮಿಕ ಮಂಟಪ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿರುವುದು ಶುಭ ಸೂಚಕವಾಗಿದೆ. ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಜಿಲ್ಲೆಯ ಜನತೆ ಸಹಕರಿಸಿ ನಾಡದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು. ಜಿಲ್ಲಾ ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಗೆ ನೀಡಿದ ಆಹ್ವಾನಕ್ಕೆ ಸಕರಾತ್ಮಕವಾದ ಸ್ಪಂದನೆ ಸಿಕ್ಕಿದೆ. ಮುಖ್ಯಮಂತ್ರಿಗಳು ಕಳೆದ ವರ್ಷದಂತೆ ಈ ವರ್ಷವೂ ಸರ್ಕಾರದಿಂದ ದಸರಾ ಉತ್ಸವಕ್ಕೆ ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದರು.

ನಗರದ ಸುಮಾರು 20 ಕಿ.ಮೀ. ಉದ್ದದ ಪ್ರಮುಖ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುವುದು. ದೀಪಾಲಂಕಾರಕ್ಕೆ ಸೆಪ್ಟೆಂಬರ್ 22ರಂದು ಚಾಲನೆ ನೀಡಲಾಗುವುದು. ಸಂಗೀತ, ನಾಟಕ ಕ್ಷೇತ್ರ ಸೇರಿದಂತೆ ಜಿಲ್ಲೆಯ ಸಾವಿರಾರು ಕಲಾವಿದರು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ವೇದಿಕೆ ಅವಕಾಶ ಕಲ್ಪಿಸಲಾಗುವುದು. ಸ್ಥಳೀಯ ಕಲಾವಿದರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.ಉತ್ಸವದ ಕಡೆಯ ದಿನ ಜಂಬೂ ಸವಾರಿ ಮೆರವಣಿಗೆಯಲ್ಲಿ ಆನೆ-ಕುದುರೆಗಳು ಪಾಲ್ಗೊಳ್ಳಲಿವೆಯಲ್ಲದೆ ನಗರದ ಸುತ್ತಮುತ್ತಲಿನ ಸುಮಾರು 50 ಗ್ರಾಮ ದೇವತೆಗಳು ಸಾರೋಟಿನಲ್ಲಿ ಸಾಗಲಿವೆ. ಅಂಬಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಹೆಲಿಕಾಪ್ಟರ್‌ನಿಂದ ಹೂವಿನ ಮಳೆ ಸುರಿಸಲಾಗುವುದು. ಮತ್ತೊಂದು ವಿಶೇಷವೆಂದರೆ ಸೆಪ್ಟೆಂಬರ್ ೨೮ರಂದು ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳಿಂದ ಏರ್ಪಡಿಸಿರುವ ಪಂಜಿನ ಕವಾಯತು ಪ್ರದರ್ಶನ ಜನರನ್ನು ಆಕರ್ಷಿಸಲಿದೆ ಎಂದು ತಿಳಿಸಿದರು.ದಸರಾ ಉತ್ಸವದಲ್ಲಿ ಜಿಲ್ಲೆಯ ಜನತೆ ತನು-ಮನ-ಧನದಿಂದ ಪಾಲ್ಗೊಂಡು ಯಶಸ್ವಿಗೊಳಿಸಿ ಜಿಲ್ಲೆಗೆ ಕೀರ್ತಿ ತರಬೇಕು. ದಸರಾ ಉತ್ಸವದ ಖರ್ಚು-ವೆಚ್ಚಗಳಿಗೆ ಸಂಬಂಧಿಸಿದಂತೆ ತುಮಕೂರು ದಸರಾ ನಾಡಹಬ್ಬ ಎಂಬ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯಲಾಗಿದೆ. ಸಾರ್ವಜನಿಕರು ಈ ಖಾತೆಗೆ ದೇಣಿಗೆ ನೀಡಬಹುದಾಗಿದೆ. ದೇಣಿಗೆ ನೀಡಬಯಸುವವರು ಖಾತೆ ಸಂಖ್ಯೆ ೪೪೪೩೬೦೧೫೭೨೧(ತುಮಕೂರಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಧಾನ ಕಚೇರಿ, IಈSಅ – SಃIಓ೦೦೪೦೦೯೨)ಕ್ಕೆ ನೀಡಬಹುದಾಗಿದೆ ಎಂದು ತಿಳಿಸಿದರು.ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ ಕಳೆದ ವರ್ಷದಿಂದ ಜಿಲ್ಲಾಡಳಿತದಿಂದ ದಸರಾ ಉತ್ಸವವನ್ನು ಪಕ್ಷಾತೀತವಾಗಿ ಆಚರಿಸುತ್ತಿರುವುದು ಸ್ವಾಗತಾರ್ಹ. ಈ ವರ್ಷವೂ ಜಿಲ್ಲೆಯ ಜನತೆ ದಸರಾ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಹೇಳಿದರು. ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ನಿರ್ವಹಣಾಧಿಕಾರಿ ಜಿ. ಪ್ರಭು, ನಗರ ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.