ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಅಭಿವೃದ್ಧಿಗೆ ಬಿಎಂಐಸಿ ಯೋಜನೆಯಿಂದ ಉಂಟಾಗಿರುವ ತೊಂದರೆ ಕುರಿತು ಸದನದಲ್ಲಿ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಶನಿವಾರ ಹೇಳಿದರು.ತಾಲೂಕಿನ ಕೆ.ಕೋಡಿಹಳ್ಳಿ ಹಾಗೂ ಶಿವಪುರದ 23 ನೇ ವಾರ್ಡ್ ನಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮದ್ದೂರು ಪುರಸಭೆಯನ್ನು ನಗರಸಭೆಯನ್ನಾಗಿ ಮಾರ್ಪಡಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಆದರೆ, ಪಟ್ಟಣದ ಅಭಿವೃದ್ಧಿಗೆ ಬಿಎಂಐಸಿ ಯೋಜನೆ ಅಡ್ಡಲಾಗಿದೆ. ಈ ಯೋಜನೆ ತೆಗೆದು ಹಾಕುವಂತೆ ಈಗಾಗಲೇ ಸಂಬಂಧ ಪಟ್ಟ ಸಚಿವರು ಹಾಗೂ ಅಧಿಕಾರಿಗಳ ಜೊತೆ ಹಲವು ಬಾರಿ ಚರ್ಚೆ ನಡೆಸಲಾಗಿದೆ ಎಂದರು.
ಬಿಎಂಐಸಿ ಯೋಜನೆ ಬಗ್ಗೆ ಈಗಾಗಲೇ ಸುಪ್ರೀಂಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ನಡೆಯುತ್ತಿದೆ. ಸೋಮವಾರ ನಡೆಯುವ ವಿಧಾನಸಭಾ ಕಲಾಪದಲ್ಲಿಯೂ ಈ ವಿಚಾರ ಚರ್ಚೆಗೆ ಇಡಲಾಗಿದೆ ಎಂದು ಸ್ಪಷ್ಟಪಡಿಸಿದರು.ಶ್ರೀಕ್ಷೇತ್ರ ಧರ್ಮಸ್ಥಳ ವಿರುದ್ಧ ಅಪಪ್ರಚಾರ ಖಂಡಿಸಿ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ನಡೆಯುತ್ತಿರುವ ಧರ್ಮಸ್ಥಳ ಚಲೋ ಕೇವಲ ನಾಟಕೀಯವಾಗಿದೆ. ಶಾಸಕ ವಿಶ್ವನಾಥ್ ಸೇರಿ ಎಲ್ಲಾ ಬಿಜೆಪಿ ನಾಯಕರು ಅನುಕೂಲಸ್ಥರಾಗಿದ್ದಾರೆ. ಅವರ ಬಳಿ ಸಾಕಷ್ಟು ಕಾರುಗಳಿವೆ. ಹೀಗಾಗಿ ಧರ್ಮಸ್ಥಳ ಪರ ನಿಂತಿದ್ದೇವೆ ಎಂದು ತೋರಿಸಿಕೊಳ್ಳಲು 400 ಕಾರುಗಳೊಂದಿಗೆ ಚಲೋ ನಡೆಸಿ ಕ್ರೆಡಿಟ್ ತೆಗೆದುಕೊಳ್ಳುವ ಹುನ್ನಾರವಾಗಿದೆ ಎಂದು ಕಿಡಿಕಾರಿದರು.
ಸಚಿವ ಸ್ಥಾನದಿಂದ ಕೆಳಗಿಳಿಸಲು ದೆಹಲಿಯಲ್ಲಿ ಪಿತೂರಿ ಮಾಜಿ ಕೆ.ಎನ್.ರಾಜಣ್ಣ ಆರೋಪಕ್ಕೆ ಪ್ರತಿಕ್ರಿಯಿಸಿ, ಈ ವಿಚಾರ ನನಗಂತು ಗೊತ್ತಿಲ್ಲ. ರಾಜಣ್ಣರನ್ನೆ ಕೇಳಿ ಉತ್ತರ ಪಡೆದುಕೊಳ್ಳಿ ಎಂದು ಹಾರಿಕೆ ಉತ್ತರ ನೀಡಿದರು.ಕೆ.ಕೋಡಿಹಳ್ಳಿ ಪರಿಮಿತಿ ಮೂಲಕ ಎನ್.ಎಚ್. 275ಕ್ಕೆ ಸಂಪರ್ಕ ಕಲ್ಪಿಸುವ 1.50 ಕೋಟಿ ರು ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಈ ರಸ್ತೆ ಅಭಿವೃದ್ಧಿಯಿಂದ ಗ್ರಾಮಸ್ಥರಿಗೆ ಸುಗಮ ಸಂಚಾರದ ಜೊತೆಗೆ, ಮಳೆಗಾಲದಲ್ಲಿ ಎದುರಾಗುತ್ತಿದ್ದ ತೊಂದರೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ಕಾಮಗಾರಿ ಶೀಘ್ರ ಪೂರ್ಣಗೊಂಡು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ ಎಂದರು.
ಇದೇ ವೇಳೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ್, ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಯುವ ಘಟಕದ ಅಧ್ಯಕ್ಷ ಕೀರ್ತಿ ಪುರಸಭಾ ಸದಸ್ಯ ಮೋಹನ್, ಗ್ರಾಪಂ ಮಾಜಿ ಸದಸ್ಯ ಅಪ್ಪೇಗೌಡ ಮುಖಂಡರಾದ ಶಂಕರ್, ನೀಲಯ್ಯ, ರವಿಂದ್ರ ಕುಮಾರ್, ವೆಂಕಟೇಶ್, ಶಿವರಾಜ್, ಶ್ರೀನಿವಾಸ್, ಸತೀಶ್, ಪುಟ್ಟಪ್ಪ, ಸುರೇಶ್, ನಾಗರಾಜ್, ಮಹಾಲಿಂಗಯ್ಯ, ಧನಂಜಯ್, ರಾಜೇಂದ್ರ, ಸುರೇಶ್ ಸೇರಿದಂತೆ ಮತ್ತಿತರರು ಇದ್ದರು.