ಹಬ್ಬಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಜಾತ್ಯತೀತವಾಗಿ ಆಚರಿಸಬೇಕು ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ನಮ್ಮ ಗ್ರಾಮಗಳ ಜನರು ಶಾಂತಿ, ನೆಮ್ಮದಿ ಹಾಗೂ ಯಾವುದೇ ರೋಗಗಳು ದೂರವಾಗಬೇಕಾದರೆ ದೇವತಾ ಕಾರ್ಯಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು. ಇಂತಹ ಹಬ್ಬಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಜಾತ್ಯತೀತವಾಗಿ ಆಚರಿಸಬೇಕು ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ತಿಳಿಸಿದರು. ತಾಲೂಕಿನ ಹೊಳವನಹಳ್ಳಿ ಹೋಬಳಿ ಮಾವತ್ತೂರು ಗ್ರಾ.ಪಂ ವ್ಯಾಪ್ತಿಯ ಲಿಂಗಾಪುರದಲ್ಲಿ ಶ್ರೀಮಾರಮ್ಮ ದೇವಿ ಸೇವಾ ಸಮಿತಿಯಿಂದ ಹಮ್ಮಿಕೊಂಡಿದ್ದ ಗ್ರಾಮದೇವತೆ ಶ್ರೀಮಾರಮ್ಮ ದೇವಿಯ ಉತ್ಸವ ಮೂರ್ತಿ ಪ್ರತಿಷ್ಠಾಪನಾ ಧಾರ್ಮಿಕ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.ಕಳೆದ ಎರಡು ದಿನಗಳಿಂದ ಶಾಸ್ತ್ರೋಕ್ತವಾಗಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದು, ದೇವತಾ ಕಾರ್ಯದಲ್ಲಿ ಹೋಮ, ಹವನ, ವಿಶೇಷ ಪೂಜೆಯ ಮೂಲಕ ಮಾರಮ್ಮ ದೇವಿಗೆ ಶಕ್ತಿ ನೀಡಿದ್ದಾರೆ, ಪ್ರತಿಯೊಬ್ಬರು ಸ್ವಾರ್ಥಿಗಳಾಗಿ ಬದುಕದೇ ಈಶ ಸೇವೆ ದೇಶ ಸೇವೆ ಎಂಬಂತೆ ಭಾವನೆ ಇಟ್ಟುಕೊಂಡು ಸೇವಾ ಪುರಸ್ಕಾರಗಳು ಆಗಬೇಕು. ನಾವು ಹುಟ್ಟಿದ ಗ್ರಾಮ, ಬೆಳೆದಂತಹ ಸ್ಥಳ ಸ್ವರ್ಗಕ್ಕಿಂತಲೂ ಶ್ರೇಷ್ಠವಾದದ್ದು ಎಂದು ಹೇಳಿದರು.ಕರವೇ (ಪ್ರವೀಣ್ ಶೆಟ್ಟಿ ಬಣ) ಅಧ್ಯಕ್ಷ ನರಸಿಂಹರಾಜು ಮಾತನಾಡಿ, ಮಾಜಿ ಜಿಪಂ ಸದಸ್ಯ ಪಿ.ಎನ್ ಕೃಷ್ಣಮೂರ್ತಿ ಅಣ್ಣನವರ ಸಹಕಾರದಿಂದ ಮಾರಮ್ಮ ದೇವಿಯ ಉತ್ಸವ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವ ಯಶಸ್ವಿ ಕಂಡಿದ್ದು, ೪೧ ದಿನದ ಮಂಡಲದ ಪೂಜೆಯನ್ನು ಊರಿನ ಗ್ರಾಮಸ್ಥರು ಹಬ್ಬದ ರೀತಿಯಲ್ಲಿ ಆಚರಿಸಬೇಕಿದೆ. ದಿನನಿತ್ಯ ಪೂಜೆ ಸಲ್ಲಿಸುವಂತೆ ಕೋರಿದರು. ದೇವರಾಯನದುರ್ಗ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನ ಪ್ರಧಾನ ಅರ್ಚಕ ಮೋಹನ್ ಭಟ್ಟರ್ ಮಾತನಾಡಿ, ಮಾರಮ್ಮ ದೇವಿಯ ಉತ್ಸವ ಮೂರ್ತಿಯನ್ನು ಗಂಗಾಪೂಜೆ, ಹೋಮ, ಅಭಿಷೇಕ, ಆರಾಧನೆ ಹಲವು ಧಾರ್ಮಿಕ ಕಾರ್ಯಕ್ರಮದ ವಿಧಿ ವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಗಿದೆ, ಮಾರಮ್ಮ ದೇವಿಯ ಅನುಗ್ರಹ ಲಿಂಗಾಪುರ ಗ್ರಾಮಸ್ಥರ ಮೇಲೆ ಸದಾ ಇರಲಿ ಎಂದು ತಿಳಿಸಿದರು.ಮಾರಮ್ಮ ದೇವಿಯ ಉತ್ಸವ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಗಂಗಾ ಪೂಜೆ, ಗಣಪತಿ ಪೂಜೆ, ಮಹಾಕುಂಭರಾಧನೆ, ಸುಕೃತ್ ಪೂರ್ಣಾಹುತಿ, ಪ್ರಾಣ ಪ್ರತಿಷ್ಠೆ ಹೋಮ, ನೇತ್ರೋನ್ಮಿಲನ ಹೋಮ, ದುರ್ಗಾ ಹೋಮ, ಮಹಾ ಪೂರ್ಣಾಹುತಿ ಕಳಶ ಉದ್ವಾಸನೆ, ಮೀನ ಲಗ್ನದಲ್ಲಿ ಪ್ರಾಣ ಪ್ರತಿಷ್ಠೆ, ಅಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ಕಾರ್ಯಕ್ರಮವು ಯಶಸ್ವಿ ಕಂಡಿದ್ದು, ಗ್ರಾಮದ ಹೆಣ್ಣು ಮಕ್ಕಳು ಪಾರಂಪರಿಕ ಉಡುಗೆ ತೊಟ್ಟು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.ಈ ವೇಳೆ ಅರ್ಚಕರಾದ ರಂಗನಾಥ್ ಭಟ್ಟರ್, ಗೋಕುಲ್ ಭಟ್ಟರ್, ಆನಂದ್ ಭಟ್ಟರ್, ಮಾರಮ್ಮ ದೇವಸ್ಥಾನದ ಅರ್ಚಕ ಆನಂದ್, ಮಾವತ್ತೂರು ಗ್ರಾ.ಪಂ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ(ಮೈಸೂರಪ್ಪ), ವಿಎಸ್‌ಎಸ್‌ಎನ್ ಸದಸ್ಯ ಓಬಳಯ್ಯ, ರಾಜಣ್ಣ (ಸಣ್ಣಪ್ಪ), ಸುನೀಲ್, ಹನುಮಂತರಾಯಪ್ಪ(ಕೆಂಗಣ್ಣ), ಗಂಟಿಗಾನಹಳ್ಳಿ ಹನುಮಂತರಾಯಪ್ಪ, ರಾಮಯ್ಯ ಹನುಮಂತಪ್ಪ, ಕಾಂತರಾಜು ಭೀಮಯ್ಯ, ಲಕ್ಷ್ಮಯ್ಯ, ತೊಳಸಮ್ಮ, ಕಾಂತರಾಜು, ನಾಗೇಶ್ ಊರಿನ ಗ್ರಾಮಸ್ಥರು ಹಾಜರಿದ್ದರು.