ಚಿಕ್ಕಬಳ್ಳಾಪುರದಲ್ಲಿ ತ್ಯಾಗದ ಹಬ್ಬದ ಸಡಗರ । ಹೊಸ ಬಟ್ಟೆ ಧರಿಸಿ ಪರಸ್ಪರ ಶುಭಾಶಯ ವಿನಿಮಯ । ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ

ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:

ಬಕ್ರೀದ್ ಅಥವಾ ಈದ್ ಉಲ್ ಅಧಾ ತ್ಯಾಗದ ಹಬ್ಬವಾಗಿದ್ದು ಇದು ಇಸ್ಲಾಮಿಕ್ ಸಮುದಾಯವು ಆಚರಿಸುವ ಎರಡನೇ ಪ್ರಮುಖ ಹಬ್ಬವಾಗಿದೆ. ಗುರುವಾರ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿ ಮತ್ತು ಸಡಗರದಿಂದ ನಗರದಲ್ಲಿ ಆಚರಿಸಿದರು.

ಮುಸ್ಲಿಂ ಬಾಂಧವರ ತ್ಯಾಗದ ಹಬ್ಬವಾದ ಬಕ್ರೀದ್ ಪ್ರಯುಕ್ತ ಮುಸ್ಲಿಂ ಬಾಂಧವರು ನಗರದ ಬಿಬಿ ರಸ್ತೆ ಯಲ್ಲಿರುವ ಮಜೀದೆ ಕುರ್ದ್ ಮಸೀದಿ ಬಳಿ ಸಮಾವೇಶಗೊಂಡು ಅಲ್ಲಿಂದ ಸಾಮೂಹಿಕವಾಗಿ ಮೆರವಣಿಗೆಯಲ್ಲಿ ಬಿಬಿ ರಸ್ತೆ, ಸರ್.ಎಂ.ವಿ.ರಸ್ತೆ, ಗಂಗಮ್ಮನ ಗುಡಿ ರಸ್ತೆ ಮೂಲಕ ಎಂ.ಜಿ. ರಸ್ತೆ ತಲುಪಿ ಅಲ್ಲಿಂದ ಪ್ರಶಾಂತ ನಗರದಲ್ಲಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಪವಿತ್ರ ಹಬ್ಬದ ಪ್ರಯುಕ್ತ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ವೃದ್ಧರು ಮತ್ತು ಮಕ್ಕಳು ಪಾಲ್ಗೊಂಡರು. ನಂತರ ಅಲ್ಲಿಯೆ ಈದ್ಗಾ ಮೈದಾನದ ಎದುರಲ್ಲಿನ ಸಮಾಧಿ ಸ್ಥಳಗಳಿಗೆ ತೆರಳಿ ಸಮಾಧಿಗಳಿಗೆ ಪುಷ್ಪಗಳನ್ನು ಮತ್ತು ದೂಪ ಹಾಕಿ ಪ್ರಾರ್ಥನೆ ಮಾಡಿದರು. ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಮುಸ್ಲಿಂ ಬಾಂಧವರು ಪರಸ್ಪರ ಆಲಿಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು. ಈದ್ಗಾ ಮೈದಾನ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ಆಗದವರು ನಗರದ ಆರಕ್ಕೂ ಹೆಚ್ಚು ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.


ಕುರಿ ಬಲಿ ಆಚರಣೆ: ಬಕ್ರೀದ್ ಹಬ್ಬದ ದಿನವನ್ನು ಪ್ರವಾದಿ ಇಬ್ರಾಹಿಂ ಅವರು ತಮ್ಮ ಮಗನ ತ್ಯಾಗವನ್ನು ಸ್ಮರಿಸುವ ಸಲುವಾಗಿ ಪ್ರತಿವರ್ಷ ಈದ್ ಉಲ್ ಅಧಾವನ್ನು ಆಚರಿಸಲಾಗುತ್ತದೆ. ಪ್ರವಾದಿಯವರು ತಮ್ಮ ಮಗನ ತಲೆಯನ್ನು ಅಲ್ಲಾಹುನಿಗೆ ಅರ್ಪಿಸಿದಾಗ, ಅಲ್ಲಾ ಅವರ ಭಕ್ತಿಗೆ ಮೆಚ್ಚಿ ಅದರ ಪ್ರತಿಫಲವಾಗಿ ಆ ಮಗುವಿನ ತಲೆಯ ಬದಲು ಕುರಿಮರಿಯ ತಲೆಯನ್ನಾಗಿ ಪರಿವರ್ತಿಸಿದರು. ಅದಕ್ಕಾಗಿಯೇ ಬಕ್ರೀದ್ ಹಬ್ಬದಂದು ಮುಸ್ಲಿಂ ಕುಟುಂಬಗಳು ಗಂಡು ಕುರಿ ಅಥವಾ ಮೇಕೆಯನ್ನು ದೇವರಿಗೆ ಬಲಿ ನೀಡುವ ಮೂಲಕ ಆಚರಣೆ ಮಾಡಲಾಗುತ್ತದೆ ಎಂದು ಮುಸ್ಲಿಂ ಮುಖಂಡ ಸಾದಿಕ್‌ಪಾಶ ತಿಳಿಸಿದರು.ಈ ಹಬ್ಬವನ್ನು ಆಚರಿಸುವ ಜನರು ಹೊಸ ಬಟ್ಟೆಗಳನ್ನು ಧರಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಇದು ಹಬ್ಬದ ಮತ್ತು ಪ್ರಾರ್ಥನೆಯ ಸಮಯವಾಗಿದೆ. ಮುಸ್ಲಿಮರು ಮಸೀದಿಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಈದ್ ಪ್ರಾರ್ಥನೆಗಳನ್ನು ಮಾಡುತ್ತಾರೆ. ಧರ್ಮೋಪದೇಶಗಳನ್ನು ಕೇಳುತ್ತಾರೆ ಮತ್ತು ಕುಟುಂಬ ಮತ್ತು ಸ್ನೇಹಿತರೊಂದಿಗೆ ಶುಭಾಶಯಗಳು ಮತ್ತು ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಈದ್ ಅಲ್-ಅಧಾ ಆಧ್ಯಾತ್ಮಿಕ ಪ್ರತಿಬಿಂಬ, ನಿಸ್ವಾರ್ಥತೆ ಮತ್ತು ಸಮುದಾಯದ ಸಮಯ. ಇದು ಇಸ್ಲಾಮಿಕ್ ಕ್ಯಾಲೆಂಡರ್‌ನಲ್ಲಿ ಮಹತ್ವದ ಘಟನೆಯಾಗಿದೆ ಮತ್ತು ಸ್ಥಳೀಯ ಸಂಪ್ರದಾಯಗಳನ್ನು ಅವಲಂಬಿಸಿ ಅದರ ಆಚರಣೆಯು ಬದಲಾಗುತ್ತದೆ. ಹಬ್ಬದ ಸಮಯದಲ್ಲಿ, ಪ್ರವಾದಿ ಇಬ್ರಾಹಿಂ ಅವರ ವಿಧೇಯತೆ ಮತ್ತು ಅಲ್ಲಾಗೆ ಭಕ್ತಿಯ ಸಂಕೇತವಾಗಿ ಒಂದು ಪ್ರಾಣಿ, ಸಾಮಾನ್ಯವಾಗಿ ಮೇಕೆ ಅಥವಾ ಕುರಿಯನ್ನು ತ್ಯಾಗ ಮಾಡಲಾಗುತ್ತದೆ. ನಂತರ ಮಾಂಸವನ್ನು ಕುಟುಂಬ, ಸ್ನೇಹಿತರು ಮತ್ತು ನಿರ್ಗತಿಕರಿಗೆ ಹಂಚಲಾಗುತ್ತದೆ. ಕುರ್ಬಾನಿ (ತ್ಯಾಗ) ಕ್ರಿಯೆಯನ್ನು ಈದ್ ಪ್ರಾರ್ಥನೆಯ ನಂತರ ನಡೆಸಲಾಗುತ್ತದೆ. ಇದನ್ನು ಈದ್‌ನ ಬೆಳಿಗ್ಗೆ ಹತ್ತಿರದ ಮಸೀದಿ ಅಥವಾ ಈಧ್ಗಾ ಮೈದಾನದಲ್ಲಿ ಸಭೆಯಲ್ಲಿ ನಡೆಸಲಾಗುತ್ತದೆ ಎಂದು ಹೇಳಿದರು.

ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಜಮಾತೆ ಐಲೇ ಇಸ್ಲಾಂನ ಆಡಳಿತಾಧಿಕಾರಿ ಹೈದರ್‌ಆಲಿ, ಬಾಬಾಜಾನ್, ಮಹಮದ್ ದಾವೂದ್, ಸೈಯದ್ ಅಜರ್, ಎಸ್.ಎಂ.ರಫೀಕ್.ಜಿಲಾನಿ, ಸಲಾವುದ್ದೀನ್ ಸೇರಿ ಸಹಸ್ರಾರು ಮುಸ್ಲಿಮರು ಭಾಗವಹಿಸಿದ್ದರು.

ಸಿಕೆಬಿ-2 ..

ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು.