ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
2023-24ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಮೂಲಕ ರೈತರು ತಾವು ಬೆಳೆದ ಬೆಳೆಗಳನ್ನು ಅತ್ಯುತ್ತಮ ಬೆಲೆಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಿದಂತಾಗಿದೆ.ಗೋಧಿ ಸೇರಿ ಪ್ರಮುಖ ಆರು ಹಿಂಗಾರು ಬೆಳೆಗಳಿಗೆ ಕೇಂದ್ರ ಸರಕಾರ ಬೆಂಬಲ ಬೆಲೆ ಹೆಚ್ಚಳ ಮಾಡಿದೆ. ರೈತರ ಆದಾಯ ವೃದ್ಧಿಸುವ ಜತೆಗೆ ಉತ್ಪಾದನೆ ಹೆಚ್ಚಳಕ್ಕೆ ಪ್ರೋತ್ಸಾಹ ನೀಡಲು ಬೆಂಬಲ ಬೆಲೆ ಹೆಚ್ಚಿಸಲಾಗಿದೆ ಎಂದು ಸಚಿವ ಜೋಶಿ ತಿಳಿಸಿದ್ದು, ಸಚಿವ ಸಂಪುಟ ಸಭೆ ಅನುಮೋದನೆ ನೀಡಿರುವ ಪ್ರಕಾರ ಚನ್ನಂಗಿ ಬೇಳೆ ಪ್ರತಿ ಕ್ವಿಂಟಲ್ಗೆ ₹425 ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಿದ್ದು, ಒಟ್ಟು ಒಂದು ಕ್ವಿಂಟಲ್ಗೆ ₹6425 ನಿಗದಿ ಮಾಡಲಾಗಿದೆ. ಗೋಧಿಗೆ ₹150 ಹೆಚ್ಚಳ ಮಾಡುವುದರ ಮೂಲಕ ಒಟ್ಟು ಒಂದು ಕ್ವಿಂಟಲ್ಗೆ ₹2275 ನಿಗದಿ ಮಾಡಲಾಗಿದೆ. ಕಡಲೆ ₹105 ಹೆಚ್ಚಳ ಮಾಡುವುದರ ಮೂಲಕ ಒಟ್ಟು ಒಂದು ಕ್ವಿಂಟಲ್ಗೆ ₹5440 ನಿಗದಿ ಮಾಡಲಾಗಿದೆ. ಬಾರ್ಲಿಗೆ ₹115 ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಿದ್ದು, ಒಂದು ಕ್ವಿಂಟಲ್ಗೆ ₹1850 ನಿಗದಿ ಮಾಡಲಾಗಿದೆ. ಸಾಸಿವೆಗೆ ₹200 ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಿದ್ದು ಒಂದು ಕ್ವಿಂಟಲ್ಗೆ ₹5650 ನಿಗದಿ ಮಾಡಲಾಗಿದೆ. ಕುಸುಬೆಗೆ ₹150 ಹೆಚ್ಚಳ ಮಾಡುವುದರೊಂದಿಗೆ ಒಂದು ಕ್ವಿಂಟಲ್ಗೆ ₹5800 ನಿಗದಿ ಪಡಿಸಲಾಗಿದೆ.
2013-14ನೇ ಸಾಲಿನ ಬೆಂಬಲ ಬೆಲೆ ಗಮನಿಸಿದರೆ ಈ ಬಾರಿ ಶೇ. 50ರಷ್ಟು ಹೆಚ್ಚಳ ಮಾಡಿರುವುದು ಮೋದಿ ಸರಕಾರದ ವಿಶೇಷ ಎಂದು ಸಚಿವ ಜೋಶಿ ಹೇಳಿದ್ದಾರೆ. ಕೇಂದ್ರ ಸರಕಾರ ನಿಗದಿಪಡಿಸಿರುವ ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ರೈತರಿಂದ ಹಿಂಗಾರು ಬೆಳೆಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಎಂದು ಸಚಿವರು ತಿಳಿಸಿದ್ದಾರೆ.