ಕನ್ನಡಪ್ರಭ ವಾರ್ತೆ ತಿಪಟೂರು
ಆದಿಚುಂಚನಗಿರಿ ಮಹಾಸಂಸ್ಥಾನಮಠದಿಂದ ೫೦ ವರ್ಷಗಳಲ್ಲಿ ೫೦೦ಕ್ಕೂ ಹೆಚ್ಚು ವಿವಿಧ ರೀತಿಯ ಶಾಲಾ-ಕಾಲೇಜುಗಳನ್ನು ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಆರಂಭಿಸಿ ಲಕ್ಷಾಂತರ ಬಡ, ಮಧ್ಯಮ ವರ್ಗದ ಲಕ್ಷಾಂತರ ಮಕ್ಕಳು ವಿದ್ಯೆ ಕಲಿತು ಸ್ವಾವಲಂಬಿ ಜೀವನ ನಡೆಸುವ ಮೂಲಕ ಉತ್ತಮ ಬದುಕು ಸಾಗಿಸಲು ಕಾರಣವಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದರು.ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಶ್ರೀ ಆದಿಚುಂಚನಗಿರಿ ಸಂಸ್ಥಾನಮಠ ಮತ್ತು ಒಕ್ಕಲಿಗರ ಸಂಘ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಕೆಂಪೇಗೌಡ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಾ ಶಿಕ್ಷಣಸಂಸ್ಥೆ ಹೊಂದಿರುವುದು ಆದಿಚುಂಚನಗಿರಿ ಮಹಾಸಂಸ್ಥಾನ ಅನುಕೂಲತೆಗಳನ್ನು ಮಾಡಿದ್ದರೂ ಐಎಎಸ್, ಐಪಿಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳು, ಕೆಪಿಎಸ್ಸಿ ಪರೀಕ್ಷೆಗಳಲ್ಲಿ ಪಾಸಾಗುವವರ ಸಂಖ್ಯೆ ಬೆರಳೆಣಿಯಷ್ಟು ಮಾತ್ರ. ಅದಕ್ಕಾಗಿ ಸಂಸ್ಥೆಯ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ವಿಶೇಷ ತರಬೇತಿ ಪ್ರಾರಂಭಿಸಲಾಗಿದೆ. ಒಕ್ಕಲಿಗರ ಅಭಿವೃದ್ಧಿ ನಿಗಮದ ವತಿಯಿಂದ ಉನ್ನತ ವ್ಯಾಸಂಗ ಮತ್ತು ವಿದೇಶ ವ್ಯಾಸಂಗಕ್ಕೆ ೫ರಿಂದ ೧೫ಲಕ್ಷದವರೆಗೂ ಧನಸಹಾಯ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಇವೆಲ್ಲದರ ಸದುಪಯೋಗ ಪಡೆದುಕೊಂಡು ದೇಶಕ್ಕೆ, ಹೆತ್ತವರಿಗೆ, ಶ್ರೀಮಠಕ್ಕೆ ದೊಡ್ಡ ಆಸ್ತಿಯಾಗಬೇಕೆಂದು ತಿಳಿಸಿದರು.ಆದಿಚುಂಚನಗಿರಿ ಸಂಸ್ಥಾನಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ ಇತಿಹಾಸದಲ್ಲಿ ಚರಿತ್ರೆಯ ಬಹಳಷ್ಟು ಉತ್ತಮ ವಿಷಯಗಳನ್ನು ಸರಿಯಾಗಿ ನಮೂದಿಸಿಲ್ಲ. ಸರ್ಕಾರಗಳು ಮತ್ತು ಸಂಘಗಳು ಆ ಕೆಲಸಕ್ಕೆ ಮುಂದಾಗಬೇಕು. ತಿಪಟೂರು ತಾಲೂಕಿನಲ್ಲಿ ಆದಿಚುಂಚನಗಿರಿ ಸಂಸ್ಥಾನ ಮಠ ಹಾಗೂ ಒಕ್ಕಲಿಗರ ಸಂಘದ ವತಿಯಿಂದ ಶಾಲಾ ಕಾಲೇಜು ಪ್ರಾರಂಭಿಸುವ ಆಲೋಚನೆ ಇದ್ದು ಇದಕ್ಕೆ ತಾಲೂಕು ಒಕ್ಕಲಿಗರ ಸಂಘದ ಸಂಪೂರ್ಣ ಸರಕಾರ ಬಯಸುತ್ತೇವೆ. ತಿಪಟೂರು ತಾಲೂಕು ಒಕ್ಕಲಿಗರ ಸಂಘ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರಕ್ಕೆ ವಿದ್ಯಾನಿಧಿ ಯೋಜನೆಯಡಿ ಸುಮಾರು ೯೪ಲಕ್ಷ ರುಗಳ ಹಣ ಸಂಗ್ರಹಿಸಿದೆ. ಅದಕ್ಕೆ ಒಕ್ಕಲಿಗರ ಮಹಾಸಂಸ್ಥಾನ ೬ ಲಕ್ಷ ನೀಡುತ್ತದೆ. ಒಟ್ಟು ಒಂದು ಕೋಟಿ ಹಣವನ್ನು ಡಿಪಾಸಿಟ್ ಮಾಡಿ ಅದರಲ್ಲಿ ಬರುವ ಬಡ್ಡಿ ಹಣದಲ್ಲಿ ಪ್ರತಿವರ್ಷ ಪ್ರತಿಭಾ ಪುರಸ್ಕಾರ ನಡೆಸಲಿ ಎಂದು ತಿಳಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಮಣಿ ಮಾತನಾಡಿ ಜಿಲ್ಲೆಯಲ್ಲಿ ಕಳೆದವರ್ಷದ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ನಮ್ಮ ತಾಲೂಕು ಜಿಲ್ಲೆಯಲ್ಲಿಯೇ ಪ್ರಥಮಸ್ಥಾನ ಗಳಿಸಿದೆ. ಸುಮಾರು ೬೨ಮಕ್ಕಳು ೬೦೦ಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ. ಚೆನ್ನಾಗಿ ಓದುವ ಮಕ್ಕಳಿಗೆ ಎಲ್ಲ ಸಮುದಾಯದವರಿಗೂ ಪ್ರತಿಭಾ ಪುರಸ್ಕಾರ ಮಾಡುತ್ತಿರುವುದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕವಾಗಿದೆ. ಪೋಷಕರು ಮಕ್ಕಳಿಗೆ ಗೆಲ್ಲುವುದು ಜೊತೆಗೆ ಸೋಲು ಸ್ವೀಕರಿಸುವುದನ್ನೂ ಕಲಿಸಿ. ಅಂಕಗಳ ಹಿಂದೆ ಓಡಿಸಬೇಡಿ ಎಂದು ಕಿವಿಮಾತು ಹೇಳಿದರು.ಸಮಾರಂಭದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ದಾನಿಗಳನ್ನೂ ಸನ್ಮಾನಿಸಿ ಗೌರವಿಸಲಾಯಿತು. ಇತಿಹಾಸ ತಜ್ಞ ಡಾ.ತಲಕಾಡು ಚಿಕ್ಕರಂಗೇಗೌಡ ಉಪನ್ಯಾಸ ನೀಡಿದರು. ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಎನ್. ಚಿದಾನಂದ್ ಸ್ವಾಗತಿಸಿದರು. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಎಚ್.ಹನುಮಂತರಾಯಪ್ಪ ಹಾಗೂ ಬಿ.ಎನ್.ಲೋಕೇಶ್, ಮೈಸೂರಿನ ನೇಗಿಲ ಯೋಗಿ ಸಮಾಜಸೇವಾ ಟ್ರಸ್ಟ್ ಅಧ್ಯಕ್ಷ ಡಿ.ರವಿಕುಮಾರ್, ತಾಲೂಕು ಸಂಘದ ಪದಾಧಿಕಾರಿಗಳು, ಸದಸ್ಯರುಗಳು, ಮುಖಂಡರುಗಳು ಉಪಸ್ಥಿತರಿದ್ದರು.