ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ನಾನು ಶಾಸಕನಾದ ನಂತರ ಗಡಿ ಗ್ರಾಮಗಳ ಅಭಿವೃದ್ಧಿಗೂ ಆದ್ಯತೆ ನೀಡಿ ಗ್ರಾಮೀಣ ಪ್ರದೇಶಗಳಿಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮವಹಿಸಿದ್ದೇನೆ. ಸುಮಾರು 40 ವರ್ಷಗಳಿಂದ ರಸ್ತೆ ಕಾಣದ ಚಿನ್ನಯ್ಯನಪಾಳ್ಯ ಗ್ರಾಮಕ್ಕೆ ಶೀಘ್ರವೇ ರಸ್ತೆ ನಿರ್ಮಾಣವಾಗಲಿದೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

ಸೋಂಪುರ ಹೋಬಳಿಯ ಮರಳಕುಂಟೆ ಗ್ರಾಪಂ ವ್ಯಾಪ್ತಿ ರಂಗೋಲಿ ಸ್ಪರ್ಧೆ ಹಾಗೂ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಕ್ಷೇತ್ರದ ಜನತೆ ಮತ ಹಾಕಿ ಶಾಸಕನನ್ನಾಗಿ ಆಯ್ಕೆ ಮಾಡಿ ಅಧಿಕಾರ ನೀಡಿದ್ದಾರೆ. ಈ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳದೆ ಕ್ಷೇತ್ರದ ಮನೆಯ ಮಗನಾಗಿ ನಿಮ್ಮ ಸೇವೆ ಮಾಡುತ್ತೇನೆ. ಕಳೆದ ಮೂರು ವರ್ಷಗಳಲ್ಲಿ ಕ್ಷೇತ್ರಕ್ಕೆ ಶಾಶ್ವತ ಯೋಜನೆಗಳನ್ನು ತಂದಿರುವ ತೃಪ್ತಿಯಿದೆ. ಬರಗೂರು ಗ್ರಾಮದ ಜನತೆ ಹತ್ತಾರು ವರ್ಷಗಳಿಂದ ಸರಿಯಾದ ಸೇತುವೆ ಇಲ್ಲದೆ ಸಂಚರಿಸಲು ಬಹಳ ಸಮಸ್ಯೆಯಾಗುತ್ತಿತ್ತು. ಗ್ರಾಮದ ಜನತೆ ಮನವಿ ಮಾಡಿದ ತಕ್ಷಣ ಸೇತುವೆ ನಿರ್ಮಿಸಿಕೊಟ್ಟು ದಶಕಗಳ ಸಮಸ್ಯೆಗೆ ಮುಕ್ತಿ ನೀಡಿದ್ದೇನೆ. ಇನ್ನೂ ನಿಮ್ಮ ಹಲವಾರು ಸಮಸ್ಯೆಗಳಿಗೆ ಇನ್ನೆರಡು ವರ್ಷಗಳಲ್ಲಿ ಪರಿಹಾರ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.

ಪ್ರತಿಭೆ ಗುರುತಿಸುವ ಕೆಲಸ:


ನಮ್ಮ ಹಿಂದೂ ಧರ್ಮದಲ್ಲಿ ರಂಗೋಲಿಗೆ ವಿಶೇಷ ಸ್ಥಾನಮಾನವಿದೆ. ಈ ನಿಟ್ಟಿನಲ್ಲಿ ತಾಲೂಕಿನಾದ್ಯಂತ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಿ ಮಹಿಳೆಯರಲ್ಲಿರುವ ಪ್ರತಿಭೆ ಗುರುತಿಸುವ ಕೆಲಸ ಮಾಡುತ್ತಾ ಬರುತ್ತಿರುವುದಲ್ಲದೆ ಅವರನ್ನು ನೇರವಾಗಿ ಭೇಟಿ ಮಾಡಿ ಕಷ್ಟ - ಸುಖಗಳನ್ನು ಆಲಿಸಿ ಸಾಧ್ಯವಾದಷ್ಟು ಪರಿಹರಿಸುವ ಕೆಲಸವನ್ನು ಸಹ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುತ್ತೇನೆ ಎಂದರು.

ಅಭಿವೃದ್ದಿಗೆ ಆದ್ಯತೆ:

ಈಗಾಗಲೇ ಕುಂಟಬೊಮ್ಮನಹಳ್ಳಿಯಿಂದ ಮರಳಕುಂಟೆ ಗ್ರಾಮದವರೆಗೆ ರಸ್ತೆಗೆ ಡಾಂಬರೀಕರಣವಾಗಿದ್ದು, ನರಸೀಪುರದಿಂದ ಎಲೆಕ್ಯಾತನಹಳ್ಳಿ ಗ್ರಾಮದವರೆಗೆ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರವೇ ಮುಗಿಸುವಂತೆ ಗುತ್ತಿಗೆದಾರರಿಗೆ ತಿಳಿಸಿದ್ದೇನೆ. ಅದಲ್ಲದೆ ಅಗತ್ಯವಿರುವ ಗ್ರಾಮಗಳಲ್ಲಿ ಶಾಸಕರ ಅನುದಾನದಡಿ ಕುಡಿಯುವ ನೀರಿನ ಘಟಕ, ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗುತ್ತದೆ. ಚರಂಡಿ ಸ್ವಚ್ಛತೆ, ಕುಡಿಯುವ ನೀರು, ವಿದ್ಯುತ್ ದೀಪಗಳನ್ನು ಅಳವಡಿಸುವಂತೆ ಗ್ರಾಪಂ ಪಿಡಿಒ ಅವರಿಗೆ ತಿಳಿಸಿದ್ದು, ಏನಾದರೂ ಸಮಸ್ಯೆ ಉಂಟಾದಲ್ಲಿ ನನ್ನ ನಂಬರ್ ಗೆ ಕರೆ ಮಾಡಿ ತಿಳಿಸಿದರೆ ಬಗೆಹರಿಸುವುದಾಗಿ ಹೇಳಿದರು.

ಕಾಮಗಾರಿ ಪರಿಶೀಲನೆ ನಡೆಸಿ:

ಕುಂಟಬೊಮ್ಮನಹಳ್ಳಿ ಗ್ರಾಮದಲ್ಲಿ ₹45 ಲಕ್ಷ ವೆಚ್ಚದಲ್ಲಿ ಹಾಗೂ ಚಿನ್ನಯ್ಯನಪಾಳ್ಯ ಗ್ರಾಮದಲ್ಲಿ ಸುಮಾರು ₹50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ, ಗುಣಮಟ್ಟದಲ್ಲಿ ಕಾಮಗಾರಿ ನಡೆಸಬೇಕು. ಕಳಪೆ ಕಾಮಗಾರಿ ನಡೆಸಿದರೆ ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ. ಕಾಮಗಾರಿ ನಡೆಯುವಾಗ ಗ್ರಾಮಸ್ಥರು ಹಾಗೂ ನಮ್ಮ ಮುಖಂಡರು ಕಾಮಗಾರಿ ಪರಿಶೀಲನೆ ನಡೆಸಬೇಕು, ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡುತ್ತೇನೆ ಎಂದರು.

ತ್ಯಾಮಗೊಂಡ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತೇಗೌಡ, ಮಾಜಿ ಅಧ್ಯಕ್ಷ ಜಗದೀಶ್, ಎನ್‍ಪಿಎ ಮಾಜಿ ಸದಸ್ಯ ಪ್ರಕಾಶ್ ಬಾಬು, ಗ್ರಾಪಂ ಉಪಾಧ್ಯಕ್ಷ ವಾಸುದೇವ್, ಮಾಜಿ ಸದಸ್ಯೆ ಶೋಭಾ, ಮುಖಂಡರಾದ ಶ್ರೀನಿವಾಸ್, ರಘು, ಮಹೇಶ್, ಚರಣ್, ಮಾರುತಿ, ಶಿವರುದ್ರಪ್ಪ, ರವಿ ಮತ್ತಿತರರಿದ್ದರು.