- ಹೋರಾಟಗಾರರ ನೆಲೆಯಾಗಿದ್ದ ಡಿಸಿಎಂ ಜಾಗ । ಕಾಮ್ರೆಡ್ ಪಂಪಾಪತಿ ಸ್ಮರಿಸಿದ ಸಚಿವ - - -

ಕನ್ನಡಪ್ರಭ ವಾರ್ತೆ, ದಾವಣಗೆರೆ, ಮಾ.8

ಕಾಟನ್ ಮಿಲ್‌ ಪ್ರದೇಶ ಒಂದು ಕಾಲದಲ್ಲಿ ಹೋರಾಟಗಾರರ ಸ್ಥಳವಾಗಿತ್ತು. ಕಾಮ್ರೆಡ್ ಪಂಪಾಪತಿ ಅವರಿದ್ದಾಗ ಇಲ್ಲಿಂದಲೇ ಹೋರಾಟ ಶುರುವಾಗುತ್ತಿದ್ದ ತಾಣವಿದು. ಈಗ ಡಿಸಿಎಂ ಲೇಔಟ್‌ ಆಗಿ ಜನವಸತಿ ಪ್ರದೇಶವಾಗಿದೆ. ಇಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಬದ್ಧರಿದ್ದೇವೆ ಎಂದು ಗಣಿ-ಭೂ ವಿಜ್ಞಾನ, ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಭರವಸೆ ನೀಡಿದರು.

ನಗರದಲ್ಲಿ ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಡಿ ದಕ್ಷಿಣ ಕ್ಷೇತ್ರ ವ್ಯಾಪ್ತಿಯ 25ನೇ ವಾರ್ಡ್ ಡಿಸಿಎಂ ಟೌನ್‌ಶಿಪ್‌ನಲ್ಲಿ ಅನಿಲ್‌ ಕುಂಬ್ಳೆ ಮೈದಾನ ಆವರಣದಲ್ಲಿ ಒಳಾಂಗಣ ಕ್ರೀಡಾಂಗಣ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಈ ಹಿಂದೆ ಡಿಸಿಎಂ ಲೇಔಟ್‌ನಲ್ಲಿ ಒಳಚರಂಡಿ ಸಮಸ್ಯೆ ಹೆಚ್ಚಾಗಿತ್ತು. ಈಗ ಸರಿಪಡಿಸಲಾಗಿದೆ. ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಮಳೆನೀರು ಸರಾಗವಾಗಿ ಹರಿಯುವಂತ ವ್ಯವಸ್ಥೆ ಮಾಡಿದ್ದರಿಂದ ಡಿಸಿಎಂ ಲೇಔಟ್‌ನ ಡ್ರೈನೇಜ್ ಸಮಸ್ಯೆ ಪರಿಹಾರ ಕಂಡಿದೆ ಎಂದರು.

ಆವರಗೆರೆ ಬಳಿ ಅಂಡರ್ ಪಾಸ್ ನಿರ್ಮಾಣ ಮಾಡಿದರೆ ಡಿಸಿಎಂ ಟೌನ್ ಶಿಪ್ ಬಳಿಯ ಟ್ರಾಫಿಕ್ ಸಮಸ್ಯೆ ನಿವಾರಿಸಿದಂತೆ ಆಗುತ್ತದೆ. ಈ ಬಗ್ಗೆಯೂ ಚಿಂತನೆ ನಡೆಸಿದ್ದೇವೆ. ಜಿಲ್ಲಾ ಕೇಂದ್ರದ ಪಾರ್ಕ್‌ಗಳ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ₹10 ಕೋಟಿಗಳನ್ನು ಪಾರ್ಕ್‌ಗಳಿಗೆ ಕಾಯಕಲ್ಪ ನೀಡಲು ಮೀಸಲಿಡಲಾಗಿದೆ. ಡಿಸಿಎಂ ಟೌನ್ ಶಿಪ್‌ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ನೂತನ ಅಂಗನವಾಡಿ ಕೇಂದ್ರ ಹಾಗೂ ರಸ್ತೆಗಳ ನಿರ್ಮಾಣಕ್ಕೆ ಸ್ಥಳೀಯರು ಮನವಿ ಮಾಡಿದ್ದಾರೆ. ನಿವಾಸಿಗಳ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು.


ನೂತನ ಒಳಾಂಗಣ ಕ್ರೀಡಾಂಗಣ ಉದ್ಘಾಟಿಸಿದ್ದು, ಸ್ಮಾರ್ಟ್ ಸಿಟಿ ಹಾಗೂ ಪಾಲಿಕೆಯಿಂದ ಹಲವಾರು ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಲಾಗಿದೆ. ಡಿಸಿಎಂ ಟೌನ್ ಶಿಪ್‌ನಲ್ಲಿ ಒಳಾಂಗಣ ಕ್ರೀಡಾಂಗಣದ ಅವಶ್ಯಕತೆ ಇತ್ತು. ಅನುದಾನದ ಕೊರತೆಯಿಂದ ಕ್ರೀಡಾಂಗಣ ನಿರ್ಮಾಣ ಸಾಧ್ಯವಾಗಿರಲಿಲ್ಲ. ಒಳಾಂಗಣ ಕ್ರೀಡಾಂಗಣದ ಗ್ಯಾಲರಿ, ಕಬಡ್ಡಿ, ಕೇರಂ ಹಾಗೂ ಇತರೆ ಸ್ಪರ್ಧೆಗಳ ಆಯೋಜಿಸಲು ಅತ್ಯುತ್ತಮವಾಗಿವೆ ಎಂದು ಸಚಿವರು ಶ್ಲಾಘಿಸಿದರು.

ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಪಾಲಿಕೆ ಆಯುಕ್ತ ಮಹಾಂತೇಶ್, ಅರಸೀಕೆರೆ ಕೊಟ್ರೇಶ, ವಾರ್ಡ್ ಅಧ್ಯಕ್ಷ ರಾಕೇಶ್, ಕೆ.ಜಿ. ಶಿವಕುಮಾರ, ಎ.ನಾಗರಾಜ, ಬೂದಾಳ್ ಬಾಬು, ಹರೀಶ್ ಗೌಡ, ರಾಜಶೇಖರ ಇತರು ಇದ್ದರು.

- - -

-8ಕೆಡಿವಿಜಿ4, 7:

ದಾವಣಗೆರೆ ಡಿಸಿಎಂ ಲೇಔಟ್‌ನಲ್ಲಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಒಳಾಂಗಣದ ಕ್ರೀಡಾಂಗಣವನ್ನು ಉದ್ಘಾಟಿಸಿ, ಬಾಸ್ಕೆಟ್‌ ಬಾಲ್‌ ಆಟವಾಡಿ ಗಮನ ಸೆಳೆದರು.