ಕನ್ನಡಪ್ರಭ ವಾರ್ತೆ ಶಿರಾ ನಮಗೆ ಜನ್ಮ ಕೊಟ್ಟವಳು, ನಮ್ಮ ಒಡಹುಟ್ಟಿದವಳು, ನಮಗೆ ಜೀವನ ಸಂಗಾತಿಯಾದವಳು ಹೆಣ್ಣು, ನಾವು ನೆಲೆಸಿರುವ ನಮ್ಮ ಭಾರತ ಮಾತೇ ಸಹ ಹೆಣ್ಣು, ಪ್ರಮುಖವಾಗಿ ನಮ್ಮ ದೇಶದಲ್ಲಿ ಹೆಣ್ಣಿಗೆ ಮಹತ್ತರವಾದ ಸ್ಥಾನ ನೀಡಿದ್ದೇವೆ. ಇಂತಹ ಪೂಜನೀಯ ಹೆಣ್ಣನ್ನು ಯಾರು ಗೌರವಿಸುತ್ತಾರೋ ಅವರೇ ನಿಜವಾದ ಮನುಜ ಎಂದು ಧಾಶ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ್ ರೆಡ್ಡಿ ಹೇಳಿದರು. ಅವರು ಶಿರಾ ಕೈಗಾರಿಕಾ ವಸಹತು ಪ್ರದೇಶದ ಧಾಶ್ ಕಂಪನಿಯಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಖಾನೆ ಸ್ಥಾಪನೆ ಮಾಡುವುದು ಬರಿ ಲಾಭ ಮಾಡಿಕೊಳ್ಳುವುದ್ದಾಕ್ಕಾಗಿ ಅಲ್ಲ, ಬರುವ ಲಾಭದಲ್ಲಿ ಒಂದು ಭಾಗವನ್ನು ಸಮಾಜದ ಅಭಿವೃದ್ಧಿಗೆ ಮೀಸಲಿಡುವುದನ್ನು ಎಲ್ಲರೂ ರೂಡಿಸಿಕೊಳ್ಳಬೇಕು. ಸಮಾಜದಲ್ಲಿ ಮಹಿಳೆಯರು ಸಭಲರಾಗುವಂತೆ ಉತ್ತಮವಾದ ವೇದಿಕೆ ಕಲ್ಪಿಸಿಕೊಡುವುದರ ಜೊತೆಗೆ ಸರಿಸಾಮಾನವಾಗಿ ಕಾಣುವ ಉದಾರ ಮನಸ್ಸು ನಾವೆಲ್ಲ ಹೊಂದಬೇಕಿದೆ, ಶಿರಾ ನಗರದಲ್ಲೇ ನಮ್ಮ ಕಂಪನಿಯನ್ನು ಪ್ರಾರಂಭಿಸಲು ಪ್ರಭಲವಾದ ಕಾರಣವಿದೆ. ಶಿರಾ ನಗರ ಮುಂದಿನ ದಿನಗಳಲ್ಲಿ ಬಹುದೊಡ್ಡ ಎತ್ತರಕ್ಕೆ ಬೆಳೆಯುವ ಎಲ್ಲಾ ಲಕ್ಷಣಗಳಿವೆ. ಈ ಭಾಗದಲ್ಲಿ ಅತೀ ಹೆಚ್ಚು ಪ್ರತಿಭಾನ್ವಿತ ಯುವಕ ಯುವತಿಯರು ಇದ್ದು, ಉದ್ಯೋಗ ಅವಕಾಶ ಕಲ್ಪಿಸಿ ಬಹುಮುಖ್ಯವಾಗಿ ಶೇ. ೫೦ ರಷ್ಟು ಮಹಿಳೆಯರಿಗೆ ಉದ್ಯೋಗ ನೀಡುವ ಗುರಿ ಹೊಂದಿದ್ದೇನೆ ಎಂದರು.ಕಾರ್ಯಕ್ರದಲ್ಲಿ ತಾಲೂಕಿನ ಚಿಕಣಿ ಶಿಲ್ಪಗಾರ್ತಿ, ಅಂಕಣಗಾರ್ತಿ, ಪತ್ರಕರ್ತೆ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ ಜ್ಯೋತಿ ಹಾಗೂ ಗಣಿತ ಶಿಕ್ಷಕಿ ಹಾಗೂ ಉತ್ತಮ ಭಾಷಣಗಾರ್ತಿ ರಶ್ಮಿ ಹಾಗೂ ಪ್ರಮುಖ ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಯಿತು. ರಾಜ್ಯ ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಹಕ್ಕಿ ಪಿಕ್ಕಿ ಜನಾಂಗದ ಅಪುರೂಪದ ಪ್ರತಿಭೆ ಜನಪದ ಹಾಡುಗಾರ ಸಿದ್ದಪ್ಪ ಅವರನ್ನು ಸಹ ಗೌರವಿಸಿ ಸನ್ಮಾನಿಸಲಾಯಿತು, ಕಂಪನಿಯ ಸಹ ಸಂಸ್ಥಾಪಕಿ ಭಾರತಿ ರೆಡ್ಡಿ, ಕಂಪನಿಯ ಮಾನವ ಸಂಪನ್ಮೂಲ ವ್ಯಕ್ತಿ ಕಿರಣಕುಮಾರ್, ಸೌಮ್ಯಾ, ಶಿವು ಚಂಗಾವರ ಸೇರಿದಂತೆ ಕಂಪನಿಯ ಮ್ಯಾನೇಜರ್, ಸಿಬ್ಬಂದಿ ವರ್ಗದವರು, ಮಹಿಳಾ ಉದ್ಯೋಗಿಗಳು ಭಾಗವಹಿಸಿದ್ದರು.