ಅಲ್ಪಸಂಖ್ಯಾತರ ಮೇಲಿನ ಕಾಂಗ್ರೆಸಿಗರ ರಾಜಕೀಯ ದಾಳಿ ಖಂಡಿಸುತ್ತೇವೆ ಎಂದು ಎದ್ದೇಳು ಕರ್ನಾಟಕ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಕೊಪ್ಪಳದಲ್ಲಿ ನಡೆದ ಸಭೆಯಲ್ಲಿ ಹೇಳಿದ್ದಾರೆ.

ಕೊಪ್ಪಳ: ಅಲ್ಪಸಂಖ್ಯಾತರ ಮೇಲಿನ ಕಾಂಗ್ರೆಸಿಗರ ರಾಜಕೀಯ ದಾಳಿ ಖಂಡಿಸುತ್ತೇವೆ ಎಂದು ಎದ್ದೇಳು ಕರ್ನಾಟಕ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಹೇಳಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ ಬಳಿಕ ವಿವಿಧ ಸಂಘಟನೆಗಳ ಮುಖಂಡರು, ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯಲ್ಲಿ ಮಾತನಾಡಿದ ನಾಯಕರು, ಕಾಂಗ್ರೆಸ್‌ ಹಿಡಿದಿರುವ ಅಧಃಪತನ ಹಾದಿಯ ಪ್ರತ್ಯಕ್ಷ ದರ್ಶನಕ್ಕೆ ಹಿಡಿದ ಕನ್ನಡಿಯಾಗಿದೆ. ಆತ್ಮಾವಲೋಕನಕ್ಕೆ ಸಿದ್ಧವಿಲ್ಲದ ಕಾಂಗ್ರೆಸಿನಿಂದ ಅಲ್ಪಸಂಖ್ಯಾತರ ಭಾವನೆಗಳ ಮೇಲೆ ರಾಜಕೀಯ ಹಲ್ಲೆ ನಡೆದಿದೆ. ಜಾತ್ಯತೀತ ಮೌಲ್ಯಗಳಿಗೆ ತಿಲಾಂಜಲಿ–ಜಾತಿ ಮತ್ತು ಕುಟುಂಬ ರಾಜಕಾರಣಕ್ಕೆ ರತ್ನಗಂಬಳಿಯ ಸ್ವಾಗತ ಮಾಡಲಾಗಿದೆ. ದಾವಣಗೆರೆ ಉಪ ಚುನಾವಣೆಗೆ ಟಿಕೆಟ್‌ ನೀಡುವ ವಿಚಾರದಲ್ಲಿ ಕಾಂಗ್ರೆಸ್‌ ನಡೆದುಕೊಂಡ ರೀತಿ ಜಿಗುಪ್ಸೆ ಮೂಡಿಸಿದರೆ, ಅದು ಈಗ ತನ್ನದೇ ಪಕ್ಷದ ಅಲ್ಪಸಂಖ್ಯಾತ ಮುಖಂಡರ ಮೇಲೆ ತೆಗೆದುಕೊಳ್ಳುತ್ತಿರುವ ಸೇಡಿನ ಕ್ರಮಗಳು ಆಕ್ರೋಶ ಹುಟ್ಟಿಸುತ್ತಿವೆ. ಕೆಪಿಸಿಸಿ ಹಾಗೂ ಎಐಸಿಸಿ ನಡವಳಿಕೆ ಸುಧಾರಿಸಿಕೊಳ್ಳಬೇಕು ಎಂದರು.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ಲಿಂಗಾಯತ ಸಮುದಾಯದ ಶಾಮನೂರು ಶಿವಶಂಕರಪ್ಪ ಅವರೇ 30 ವರ್ಷಗಳಿಂದ ಶಾಸಕರಾಗಿ ಮುಂದುವರಿಯುತ್ತಾ ಬಂದಿದ್ದಾರೆ. ಅವರ ನಿಧನದ ಆನಂತರ ಈ ಕ್ಷೇತ್ರವನ್ನು ಮುಸ್ಲಿಂ ಸಮುದಾಯಕ್ಕೆ ನೀಡಲಾಗುತ್ತದೆ ಎಂಬ ಭರವಸೆಯನ್ನು ಕಾಂಗ್ರೆಸ್‌ ನಾಯಕತ್ವ ನೀಡಿತ್ತು. ಕೇವಲ ಮುಸ್ಲಿಂ ಮಾತ್ರವಲ್ಲ, ಕುಟುಂಬ ರಾಜಕಾರಣವನ್ನು ವಿರೋಧಿಸುವ ಎಲ್ಲ ಜಾತ್ಯತೀತ ಶಕ್ತಿಗಳ ಬಯಕೆಯೂ ಆಗಿತ್ತು. ಆದರೆ ಕುಟುಂಬ, ಜಾತಿ ಹಾಗೂ ಹಣದ ಬಲದ ಮುಂದೆ ಕಾಂಗ್ರೆಸ್‌ ಹೈಕಮಾಂಡ್‌ ಹಾಗೂ ರಾಜ್ಯ ನಾಯಕತ್ವ ಮಂಡಿಯೂರಿದ ಬಗೆ ಎಲ್ಲರಿಗೂ ಜಿಗುಪ್ಸೆ ಮೂಡಿಸಿತ್ತು ಎಂದರು.

ಮುಂಬರುವ ದಿನಗಳಲ್ಲಾದರೂ ಕಾಂಗ್ರೆಸ್ ತನ್ನ ನಿಲುವುಗಳನ್ನು ಬದಲಾಯಿಸಿಕೊಂಡು ಪ್ರಗತಿಯತ್ತ ಆಲೋಚಿಸುವುದು ಒಳಿತು ಎಂದು ಎದ್ದೇಳು ಕರ್ನಾಟಕ ಹಾಗೂ ಕೊಪ್ಪಳದ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಬಸವರಾಜ್ ಶೀಲವಂತರ್, ಕರ್ನಾಟಕ ಮುಸ್ಲಿಂ ಜಮಾಅತ್ ಮಾಜಿ ಜಿಲ್ಲಾ ಸಂಚಾಲಕ ಮೌಲಾನಾ ಮೊಹಮ್ಮದ್ ಅಬುಲ್ ಹಸನ್ ಖಾಝಿ, ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ. ಗಫಾರ್, ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಅಪ್ಪಣವರ್, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಆದಿಲ್ ಪಟೇಲ್, ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಸಂಚಾಲಕ ತುಕಾರಾಮ್ ಪಾತ್ರೋಟಿ, ದಲಿತ ಸಂಘಟನೆಯ ಮುಖಂಡ ಗವಿಸಿದ್ದಪ್ಪ ಹಲಗಿ ಕುಣಿಕೆರಿ, ಪೇಂಟರ್ ಕಾರ್ಮಿಕರ ಸಂಘದ ಅಧ್ಯಕ್ಷ ರಜಾಕ್ ಪೇಂಟರ್‌, ಖಜಾಂಚಿ ಆಸಿಫ್ ಕಿಲ್ಲೆದಾರ್, ಇಂತ್ಯಾಝ್ ಎಂ. ಪಲ್ಟನ್, ಕೊಳಚೆ ನಿರ್ಮೂಲನಾ ವೇದಿಕೆ ಜಿಲ್ಲಾ ಸಂಚಾಲಕ ಮಖಬೂಲ್ ರಾಯಚೂರು, ಶಿವಪ್ಪ ಹಡಪದ್, ಭಾಗ್ಯನಗರದ ಕಟ್ಟಡ ಕಾರ್ಮಿಕರ ಸಂಘದ ಮಾಜಿ ಅಧ್ಯಕ್ಷ ದೇವಪ್ಪ ಎಸ್. ಕಟ್ಟಿಮನಿ ಉಪಸ್ಥಿತರಿದ್ದರು.