ಕನ್ನಡಪ್ರಭ ವಾರ್ತೆ ಕುಮಟಾಕೆನರಾ ಹೆಲ್ತ್ ಕೇರ್ ಸೆಂಟರ್ ಕಳೆದ ೩ ದಶಕಗಳಿಂದ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುತ್ತಾ ಮೆಚ್ಚುಗೆ ಗಳಿಸಿದೆ. ಹಲವಾರು ಸೂಪರ್ ಸ್ಪೆಷಾಲಿಟಿ ತಜ್ಞರ ಸೇವೆಯನ್ನೂ ಒದಗಿಸಿದೆ. ಈಗ ತಾಯ್ತನದ ಕನಸು ನನಸಾಗಿಸುವ ಫರ್ಟಿಲಿಟಿ ಕ್ಲಿನಿಕ್‌ನ್ನೂ ತೆರೆದಿರುವುದರಿಂದ ಮಿನಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಅತ್ಯಂತ ಉಪಯುಕ್ತವಾದಂತಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಕೆನರಾ ಹೆಲ್ತ್ ಕೇರ್ ಸೆಂಟರ್‌ನಲ್ಲಿ ಭಾನುವಾರ ಬೆಂಗಳೂರಿನ ಇಚ್ಛಾ ಫರ್ಟಿಲಿಟಿ ಕ್ಲಿನಿಕ್ ಶಾಖೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಇಚ್ಚಾ ಫರ್ಟಿಲಿಟಿ ಸೆಂಟರ್‌ನ ಮುಖ್ಯಸ್ಥೆ ಡಾ. ಮೇಖಲಾ ದ್ವಾರಕನಾಥ್ ಮಾತನಾಡಿ, ತಾಯ್ತನ ಕೊಡಿಸುವುದು ದೇವರ ಸೇವೆಯಿದ್ದಂತೆ. ಏಕೆಂದರೆ ಪ್ರತಿಯೊಂದು ದಂಪತಿಗೂ ಆರೋಗ್ಯವಂತ ಸಂತಾನ ಪಡೆಯುವುದೇ ಪರಮ ಇಚ್ಛೆಯಾಗಿರುತ್ತದೆ. ಹೀಗಾಗಿ ಇಚ್ಛಾ ಫರ್ಟಿಲಿಟಿ ಸೆಂಟರ್ ಮೂಲಕ ಅತ್ಯಾಧುನಿಕ ಹಾಗೂ ಹೆಚ್ಚು ಖಚಿತ ಫಲಿತಾಂಶ ನೀಡಬಲ್ಲ ತಂತ್ರಜ್ಞಾನ ಬಳಸಿ ಸಮಸ್ಯೆಗೆ ತಕ್ಕ ಚಿಕಿತ್ಸೆ ನೀಡಲಾಗುತ್ತದೆ. ದೃಢ ವಿಶ್ವಾಸದಿಂದ ತಾಯ್ತನಕ್ಕೆ ಪ್ರಯತ್ನಿಸಿದರೆ ಸಫಲತೆ ಅಸಾಧ್ಯವಲ್ಲ. ನಮ್ಮಿಂದ ಮಹಿಳೆಯರಿಗೆ ತಾಯ್ತನದ ಭಾಗ್ಯ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಆಗಲಿದೆ ಎಂದರು.ಕೆನರಾ ಹೆಲ್ತ್ ಕೇರ್ ಸೆಂಟರ್ ಅಧ್ಯಕ್ಷ ಡಾ. ಜಿ.ಜಿ. ಹೆಗಡೆ ಮಾತನಾಡಿ, ನಮ್ಮ ಸೆಂಟರ್‌ನಲ್ಲಿ ಇತರೆಲ್ಲ್ರಾ ಆರೋಗ್ಯ ಸೇವೆ ಜತೆಗೆ ವಿಶೇಷವಾಗಿ ಎಂಡೋಕ್ರೆನೊಲೊಜಿಸ್ಟ್‌, ನ್ಯುರೋಲೋಜಿಸ್ಟ್‌ ತಜ್ಞರ ಸೇವೆ ಇದೆ. ಜಿಲ್ಲೆಯಲ್ಲಿ ಬಂಜೆತನ ನಿವಾರಣೆ ಕುರಿತ ಸರಿಯಾದ ಚಿಕಿತ್ಸೆಯ ಕೊರತೆ ಈಗ ನೀಗಿದೆ. ಇಲ್ಲಿ ಫರ್ಟಿಲಿಟಿ ಕ್ಲಿನಿಕ್ ಕೂಡಾ ಈಗ ಸೇರ್ಪಡೆಯಾಗಿದೆ. ಇದರಿಂದ ಬಂಜೆತನದ ಸಮಸ್ಯೆಯಿಂದ ಐವಿಎಫ್‌ನಂತಹ ವಿಶೇಷ ಚಿಕಿತ್ಸೆಗಳಿಗೆ ದೊಡ್ಡ ಶಹರಗಳಿಗೆ ಹೋಗಬೇಕಾದ, ತಿಂಗಳುಗಟ್ಟಲೆ ಅಲ್ಲಿಯೇ ಉಳಿಯಬೇಕಾದ ಅನಿವಾರ್ಯತೆ ದೂರವಾಗಲಿದೆ ಎಂದರು. ಇಚ್ಛಾ ಫರ್ಟಿಲಿಟಿ ಕ್ಲಿನಿಕ್‌ನಲ್ಲಿ ದಂಪತಿಗಳಿಗೆ ರಕ್ತ ಪರೀಕ್ಷೆ, ಅಂಡಾಣು-ವೀರ್ಯಾಣು ಕುರಿತ ಸುಧಾರಿತ ಡಯಾಗ್ನೋಸಿಸ್, ಹಾರ್ಮೋನ್ ಪರೀಕ್ಷೆಗಳು, ಸೋಂಕು ತಪಾಸಣೆ ಸಹಿತ ಎಲ್ಲ ತಪಾಸಣೆಗಳು ಲಭ್ಯವಿದ್ದು, ಸಂತಾನ ಪಡೆಯುವುದಕ್ಕೆ ಐಯುಐ ಹಾಗೂ ಐವಿಎಫ್ ಚಿಕಿತ್ಸೆಗಳು ಲಭ್ಯವಿರಲಿದೆ. ಸಂತಾನಾಕಾಂಕ್ಷಿಗಳಿಗೆ ಅತ್ಯಂತ ಉಪಯುಕ್ತವಾಗಲಿದೆ ಎಂದು ಸಂಯೋಜಕರು ವಿವರಿಸಿದರು. ಕಾರ್ಯಕ್ರಮದಲ್ಲಿ ಡಾ. ಸತೀಶ ಪ್ರಭು, ಡಾ. ಸಚಿನ್ ನಾಯಕ, ಡಾ. ಟಿ.ಎನ್. ಹೆಗಡೆ, ಡಾ. ಅಶೋಕ ಭಟ್ ಹಳಕಾರ, ಡಾ. ಸೀತಾಲಕ್ಷ್ಮೀ ಹೆಗಡೆ, ಡಾ. ಪ್ರಕಾಶ ಭಟ್, ಡಾ. ಸುಮಂತ ಬಳಗಂಡಿ, ಉದ್ಯಮಿ ಭುವನ ಭಾಗ್ವತ, ಇಚ್ಛಾ ಫರ್ಟಿಲಿಟಿಯ ಮೋಹನ್, ಜಯದೇವ ಬಳಗಂಡಿ, ಶಶಾಂಕ ಶಾಸ್ತ್ರಿ, ಎಂ.ಕೆ. ಹೆಗಡೆ, ರಾಜು ಇತರರಿದ್ದರು.