ಕಾಂಗ್ರೆಸ್‌ನಿಂದ ರಘು, ಸವಿತಾರ ಉಚ್ಚಾಟನೆಗೆ ಆಗ್ರಹ

| Published : Feb 02 2024, 01:07 AM IST

ಸಾರಾಂಶ

ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ರಘು ಮತ್ತು ಸವಿತಾರವರನ್ನು ಕಾಂಗ್ರೆಸ್‌ನಿಂದ ಉಚ್ಚಾಟನೆ ಮಾಡುವಂತೆ ಎನ್ಎಸ್‌ಯುಐನ ಮಾಜಿ ಅಧ್ಯಕ್ಷ ವಿನಯ ಗೋಡೆಮನೆ ಪಕ್ಷದ ವರಿಷ್ಟರನ್ನು ಆಗ್ರಹಿಸಿದ್ದಾರೆ.

ಚಿತ್ರದುರ್ಗ: ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ರಘು ಮತ್ತು ಸವಿತಾರವರನ್ನು ಕಾಂಗ್ರೆಸ್‌ನಿಂದ ಉಚ್ಚಾಟನೆ ಮಾಡುವಂತೆ ಎನ್ಎಸ್‌ಯುಐನ ಮಾಜಿ ಅಧ್ಯಕ್ಷ ವಿನಯ ಗೋಡೆಮನೆ ಪಕ್ಷದ ವರಿಷ್ಟರನ್ನು ಆಗ್ರಹಿಸಿದ್ದಾರೆ.

ಗುರುವಾರ ಇಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಬಾ ಚುನಾವಣೆಯಲ್ಲಿ ರಘು ಮತ್ತು ಸವಿತಾ ಯಾರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂಬುದನ್ನು ಹೊಳಲ್ಕೆರೆಯ ಜನತೆ ಹೇಳುತ್ತಿದ್ದಾರೆ. ಪಕ್ಷದಲ್ಲಿ ಇದ್ದುಕೊಂಡು ಬೇರೆ ಪಕ್ಷದರೊಂದಿಗೆ ಶಾಮಿಲಾಗಿ ಅವರ ಪರವಾಗಿ ಕೆಲಸವನ್ನು ಮಾಡುವುದರ ಮೂಲಕ ಕಾಂಗ್ರೆಸ್‌ಗೆ ದ್ರೋಹ ಮಾಡಿದ್ದಾರೆ. ಇಂತವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಪಕ್ಷದ ವರಿಷ್ಟರಿಗೆ ಮನವಿ ಮಾಡಿದ್ದೇವೆ ಎಂದರು.

ವಿಧಾನಸಭೆ ಚುನಾವಣೆ ವೇಳೆ ಇವರ ಪಕ್ಷ ದ್ರೋಹದ ಸಾಕ್ಷಿಗಳನ್ನು ನೀಡಲಾಗಿದೆ. ವರಿಷ್ಟರು ಇದುವರೆವಿಗೂ ಇವರ ಮೇಲೆ ಯಾವುದೇ ಕ್ರಮಕೈಗೊಂಡಿಲ್ಲ. ಜಿಪಂ ಸದಸ್ಯರಾಗಿದ್ದ ಸವಿತಾ ರಘು ಅವರು ಬಿಜೆಪಿಯ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದರು. ಹೊಳಲ್ಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡದೆ ಬಿಜೆಪಿಯ ಬೆಂಬಲಿಸಿ ಪಕ್ಷದ ಅಭ್ಯರ್ಥಿ ಸೋಲಿಗೆ ಕಾರಣರಾಗಿದ್ದಾರೆ. ಇಂತಹರನ್ನು ಪಕ್ಷದಿಂದ ಉಚ್ಚಾಟನೆ ಮಾಡುವುದರ ಮೂಲಕ ಪಕ್ಷದ ಗೌರವ ಘನತೆ ಕಾಪಾಡಬೇಕಿದೆ ಎಂದರು.

ಪಕ್ಷದ ವರಿಷ್ಠರು ಕಾರ್ಯಕರ್ತರನ್ನು ವಿವಿಧ ನಿಗಮಗಳಿಗೆ ನೇಮಕಾತಿಯನ್ನು ಮಾಡುತ್ತಿದ್ದಾರೆ. ಪಕ್ಷಕ್ಕೆ ನಿಷ್ಠೆಯಿಂದ ದುಡಿದವರಿಗೆ ನೇಮಕಾತಿ ಮಾಡಲಿ. ಇತ್ತೀಚೆಗೆ ಬಿಡುಗಡೆಯಾದ ಪಟ್ಟಿಯಲ್ಲಿ ಪಕ್ಷಕ್ಕೆ ದ್ರೋಹ ಮಾಡಿದ ರಘು ಸವಿತಾರವರ ಹೆಸರು ಇದೆ. ಈ ರೀತಿ ಏನಾದರೂ ಇದ್ದರೆ ಅವರ ವಿರುದ್ದ ಹೋರಾಟ ಮಾಡಲಾಗುವುದು. ಯಾವುದೇ ಕಾರಣಕ್ಕೂ ಅವರನ್ನು ನಿಗಮ ಮಂಡಳಿಗಳಿಗೆ ನೇಮಕವಾಗಲು ಬಿಡುವುದಿಲ್ಲ ಎಂದು ವಿನಯ ಹೇಳಿದರು.

ವಿವಿಧ ಘಟಕಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವಾಗ ಶಾಸಕರ, ಸಚಿವರ ಜಿಲ್ಲಾಧ್ಯಕ್ಷರ ಅಭಿಪ್ರಾಯವನ್ನು ಕೇಳಿ ಅದನ್ನು ಕೆಪಿಸಿಸಿಗೆ ಕಳುಹಿಸುತ್ತಾರೆ ಆದರೆ ಇಲ್ಲಿ ಯಾರ ಅಭಿಪ್ರಾಯ ಕೇಳದೇ, ಯಾರ ಮಾತನ್ನು ಪರಿಗಣಿಸದೇ ಎನ್ಎಸ್‌ಯುಐಗೆ ನನ್ನ ಸ್ಥಾನದಲ್ಲಿ ಬೇರೆಯವರನ್ನು ನೇಮಕ ಮಾಡಿದ್ದಾರೆ. ಇದರ ಬಗ್ಗೆಯೂ ಕೆಪಿಸಿಸಿಗೆ ದೂರನ್ನು ನೀಡಲಾಗಿದೆ ಎಂದು ವಿನಯ ಗೋಡೆ ಮನೆ ಹೇಳಿದರು. ಚೇತನ, ಕಾನೂನು ಸಲಹೆಗಾರರಾದ ಸಚ್ಚಿನ್ ಬಾಬು, ಪ್ರಧಾನ ಕಾರ್ಯದರ್ಶಿ ಕಿರಣ್ ಉಪಸ್ಥಿತರಿದ್ದರು.