ಕನ್ನಡಪ್ರಭ ವಾರ್ತೆ ಬೆಂಗಳೂರು
ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ವಿಚಾರದಲ್ಲಿ ದೊಡ್ಡಮಟ್ಟದ ಷಡ್ಯಂತ್ರ ಆಗಿದೆ. ಇಂಥ ಕ್ರಿಮಿನಲ್ ಚಟುವಟಿಕೆ ಮಾಡುತ್ತಾರೆಂದು ಯಾರೂ ಊಹಿಸಲು ಸಾಧ್ಯವಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಕಾನೂನು ಹೋರಾಟ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.ಮಾಜಿ ಶಾಸಕ ಜೀವರಾಜ್ ಅವರು ತಮ್ಮೊಂದಿಗೆ ಕೆಲಸ ಮಾಡುತ್ತಿದ್ದ ಅಧಿಕಾರಿಗಳನ್ನು ಬಳಸಿಕೊಂಡಿದ್ದಾರೆ. ಇದು ದೊಡ್ಡ ಷಡ್ಯಂತ್ರ, ವ್ಯವಸ್ಥಿತ ಅಪರಾಧದ ಕೃತ್ಯ. ಈ ಘಟನೆ ದೇಶ, ಪ್ರಜಾಪ್ರಭುತ್ವಕ್ಕೆ ಕಳಂಕ ಎಂದು ಕಿಡಿ ಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಈ ರೀತಿಯೂ ಮಾಡುತ್ತಾರೆ ಎಂದು ಊಹೆ ಮಾಡಿರಲಿಲ್ಲ. ಮಾಜಿ ಶಾಸಕರಾದ ಜೀವರಾಜ್ ಅವರು ಅಧಿಕಾರಿಗಳ ದುರ್ಬಳಕೆ ಮಾಡಿಕೊಂಡು ಅಂಚೆ ಮತಗಳಲ್ಲಿ ಅಕ್ರಮ ಮಾಡಿದ್ದಾರೆ. ಇದರ ಬಗ್ಗೆ ವರದಿ ಬಂದಿದ್ದು, ಅಧ್ಯಯನ ಮಾಡುತ್ತಿದ್ದೇನೆ. ನ್ಯಾಯಾಲಯಕ್ಕೆ ಹೋಗಿ ಕೇವಲ ಅಂಚೆ ಮತಗಳನ್ನು ಮಾತ್ರ ಮರು ಎಣಿಕೆ ಮಾಡಲು ಕೇಳಿದ್ದಾರೆ. ಚುನಾವಣೆ ಮತ ಎಣಿಕೆ ದಿನ ಅವರ ಏಜೆಂಟರು ಹಾಗೂ ಅಧಿಕಾರಿಗಳು ಸಹಿಯೂ ಹಾಕಿದ್ದಾರೆ. ಇದಾದ ಬಳಿಕ ಇಷ್ಟೆಲ್ಲಾ ನಡೆಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕಾನೂನು ಹೋರಾಟ ಮಾಡುತ್ತೇವೆ:
ಎಲ್ಲಾ ರಾಜಕೀಯ ಪಕ್ಷಗಳು ಈ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ನಮ್ಮ ಅಭ್ಯರ್ಥಿಗೆ ಬಂದ ಅಂಚೆ ಮತಗಳನ್ನು ತಿದ್ದಿ ಅವುಗಳನ್ನು ಅಸಿಂಧುಗೊಳಿಸಲು ಷಡ್ಯಂತ್ರ ಮಾಡಲಾಗಿತ್ತು. ಈ ವಿಚಾರವಾಗಿ ದೊಡ್ಡ ತನಿಖೆ ಆಗಬೇಕು. ಕಾನೂನು ಹಾಗೂ ನ್ಯಾಯಾಲಯದಲ್ಲಿ ಇರುವ ಅವಕಾಶದಲ್ಲಿ ಹೋರಾಟ ಮಾಡುತ್ತೇವೆ. ಜಯನಗರ ಕ್ಷೇತ್ರದಲ್ಲೂ ಇದೇ ರೀತಿ ಅನ್ಯಾಯ ಮಾಡಲಾಗಿದೆ. ಹೀಗಾಗಿ ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ಶಿವಕುಮಾರ್ ಹೇಳಿದರು.