ಸರ್ಕಾರಿ ಶಾಲೆಗಳಲ್ಲಿ ಧನ್ವಂತರಿ ತೋಟ ನಿರ್ಮಾಣ

| Published : Nov 17 2025, 12:15 AM IST

ಸಾರಾಂಶ

ಕೋಲಾರ ಜಿಲ್ಲೆಯಲ್ಲಿ ಪೌಷ್ಟಿಕ ತೋಟ ಕಾರ್ಯಕ್ರಮ ಅನುಷ್ಠಾನಗೊಳಿಸಲು ಸುಮಾರು ೧೫೦ ಶಾಲೆಗಳು ೪೫ ವಸತಿ ನಿಲಯಗಳನ್ನು ಆಯ್ಕೆ ಮಾಡಿದ್ದು ಸ್ಥಳವಕಾಶ ಇರುವ ಭಾಗಗಳಲ್ಲಿ ೨೦ ಗುಂಟೆಯಿಂದ ಅರ್ಧ ಎಕರೆಯಷ್ಟು ಪ್ರದೇಶದಲ್ಲಿ ವಿವಿಧ ಬಗೆಯ ಆಯುರ್ವೇದ ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಶತಮಾನದಿಂದ ಈ ಪದ್ಧತಿಯ ಮಹತ್ವ ಕಳೆದುಕೊಂಡಿದೆ. ಇದನ್ನು ಮನಗಂಡ ಈ ಪದ್ಧತಿ ಆರಂಭಿಸಲು ಚಾಲನೆ.

ಕನ್ನಡಪ್ರಭ ವಾರ್ತೆ ಕೋಲಾರಆರೋಗ್ಯಪೂರ್ಣ ಜೀವನಶೈಲಿ ಮತ್ತು ಪ್ರಾಚೀನ ವೈದ್ಯಕೀಯ ಪದ್ಧತಿಯ ಪುನರುಜ್ಜೀವನದ ಮಹತ್ವ ಮನಗಂಡು ಶಾಲೆಗಳಲ್ಲಿ ಧನ್ವಂತರಿ ತೋಟ ನರ್ಮಾಣ ಮಾಡುವ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ೧೫೦ ಸರ್ಕಾರಿ ಶಾಲೆ ಮತ್ತು ವಸತಿ ನಿಲಯಗಳಲ್ಲಿ ಧನ್ವಂತರಿ ವನ ನಿರ್ಮಿಸುವ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಜಿಲ್ಲೆಯ ಆಭಿವೃದ್ಧಿಗಾಗಿ ಯೋಜನೆ

ಇಡೀ ನಮ್ಮ ಕೋಲಾರ ಜಿಲ್ಲೆಯ ಸರ್ವೋತೋಮುಖ ಆಭಿವೃದ್ದಿಗಾಗಿ ಆನೇಕ ಯೋಜನೆಗಳನ್ನು ರೂಪಿಸುತ್ತಿದ್ದು ಅದರ ಜೋತೆಗೆ "ಧನ್ವಂತರಿ ವನ " ಮಹತ್ತರ ಕಾರ್ಯಕ್ರಮ ಜಿಲ್ಲಾಡಳಿತ, ಜಿಪಂ ಸೇರಿದಂತೆ ಕೇಲವು ಅನುಷ್ಠಾನ ಇಲಾಖೆಗಳನ್ನು ಒಳಗೊಂಡಂತೆ ಚಾಲನೆ ನೀಡುತ್ತಿದ್ದೇವೆ. ನಾವು ಜಿಲ್ಲೆಯಲ್ಲಿ ಪೌಷ್ಟಿಕ ತೋಟ ಕಾರ್ಯಕ್ರಮ ಅನುಷ್ಠಾನಗೊಳಿಸಲು ಸುಮಾರು ೧೫೦ ಶಾಲೆಗಳು ೪೫ ವಸತಿ ನಿಲಯಗಳನ್ನು ಆಯ್ಕೆ ಮಾಡಿದ್ದು ಸ್ಥಳವಕಾಶ ಇರುವ ಭಾಗಗಳಲ್ಲಿ ೨೦ ಗುಂಟೆಯಿಂದ ಅರ್ಧ ಎಕರೆಯಷ್ಟು ಪ್ರದೇಶದಲ್ಲಿ ವಿವಿಧ ಬಗೆಯ ಆಯುರ್ವೇದ ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ ಎಂದರು.

ಗಿಡದ ಮುಂದೆ ನಾಮಫಲಕಗಳನ್ನು ಆಳವಡಿಸಿ ಅವುಗಳ ವಿಶೇಷತೆ ತಿಳಿಸಲಾಗುತ್ತದೆ, ಅದೇರೀತಿ ನರೇಗಾ ಯೋಜನೆ ಮತ್ತು ಮಕ್ಕಳನ್ನು ಬಳಸಿಕೋಂಡು ನಿರಂತರವಾಗಿ ಗಿಡಗಳನ್ನು ಪೋಷಿಸುವ ಕೆಲಸ ಮಾಡಬೇಕು. ಈಗಾಗಲೇ ತಮ್ಮ ಶಾಲೆಗಳಲ್ಲಿ ರಚಿಸಿರುವ ಪರಿಸರ ಕ್ಲಬ್ ಮತ್ತು ಮಾದಕ ದ್ರವ್ಯಗಳ ನಿಯಂತ್ರಣ ಘಟಕಗಳ ಸಹಯೋಗದೊಂದಿಗೆ ಇದನ್ನು ಅನುಷ್ಠಾನ ಮಾಡಿ ಜಿಲ್ಲೆಗೆ ಕೀರ್ತಿ ತರಬೇಕು ಎಂದರು.

ಕ್ರಿಯಾಶೀಲ ಜನತೆಗೆ ವೈದ್ಯಕೀಯ

ಪ್ರಾಚೀನ ಕಾಲದಿಂದಲೂ ನಮ್ಮ ಪೂರ್ವಜರು ಗಿಡಮೂಲಿಕೆಗಳನ್ನು ಬಳಸಿ ಕಾಯಿಲೆಗಳನ್ನು ಗುಣಪಡಿಸುತ್ತಿದ್ದರು. ಆದರೆ, ಕಳೆದ ಶತಮಾನದಿಂದ ಈ ಪದ್ಧತಿಯ ಮಹತ್ವ ಕಳೆದುಕೊಂಡಿದೆ. ಇದನ್ನು ಮನಗಂಡ ಜಿಲ್ಲಾಡಳಿತವು, ಜಿಲ್ಲೆಯ ವಿದ್ಯಾವಂತ ಹಾಗೂ ಕ್ರಿಯಾಶೀಲ ಜನರಿಗಾಗಿ ವೈದ್ಯಕೀಯ ಪದ್ಧತಿಯಲ್ಲಿ ಹೊಸ ಆಯಾಮ ನೀಡಲು ಈ ನಿರ್ಧಾರ ಕೈಗೊಂಡಿದೆ. ಜಿಪಂ ಸಿಇಓ ಪ್ರವೀಣ್ ಪಿ.ಬಾಗೇವಾಡಿ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಇದು ಒಂದು ವಿನೂತನ ಕಾರ್ಯಕ್ರಮ. ನಮ್ಮ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನರೇಗಾ ಯೋಜನೆಯಡಿ ಅನುಮೋದನೆ ಪಡೆದು ಮಾಡುತ್ತಿದ್ದೇವೆ. ಮೊದಲ ಹಂತದಲ್ಲಿ, ಜಿಲ್ಲೆಯ ಸುಮಾರು ೧೫೦ ಸರ್ಕಾರಿ ಶಾಲೆಗಳು ಮತ್ತು ೪೫ ವಸತಿ ನಿಲಯಗಳಲ್ಲಿ ಆಯುರ್ವೇದಿಕ ಗಿಡಗಳನ್ನು ನೆಡುವ ಮೂಲಕ ಪೌಷ್ಟಿಕ ತೋಟಗಳನ್ನು ನಿರ್ಮಿಸುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.

ಉತ್ತಮ ಫಲ ನೀಡಲಿದೆ

ಜಿಲ್ಲಾ ರಕ್ಷಣಾಧಿಕಾರಿ ಡಾ.ಬಿ.ನಿಖಿಲ್ ಮಾತನಾಡಿ, ನಮ್ಮ ಹಿಂದಿನ ಪೀಳಿಗೆಯವರು ಶಕ್ತಿಯುತವಾಗಿ ಮತ್ತು ಆರೋಗ್ಯಕರವಾಗಿ ಬಾಳಲು ಕಾರಣ ಅವರು ಸುತ್ತಮುತ್ತಲಿನ ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದರು, ಹಳ್ಳಿಯ ಮಕ್ಕಳು ದಾರಿಯಲ್ಲಿ ಸಿಗುವ ಹಣ್ಣುಗಳನ್ನು ಕಿತ್ತು ತಿನ್ನುತ್ತಾ ಶಕ್ತಿಯುತವಾಗುತ್ತಿದ್ದರು. ಜಿಲ್ಲಾಡಳಿತವು ರೂಪಿಸಿರುವ ಈ ಕಾರ್ಯಕ್ರಮವು ತಕ್ಷಣಕ್ಕೆ ಫಲ ನೀಡದಿದ್ದರೂ, ಮುಂದಿನ ಪೀಳಿಗೆಗೆ ಉತ್ತಮ ಫಲ ನೀಡುತ್ತದೆ ಎಂದು ಹೇಳಿದರು.

ಕೋಲಾರ ಜಿಲ್ಲೆಯಲ್ಲಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ನಿಯಮ ಜಾರಿಗೆ ತರಲಾಗಿದೆ. ಜಿಲ್ಲೆಯಲ್ಲಿ ಅನೇಕ ಪ್ರಾಣಾಪಾಯಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸಬೇಕು. ಈ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಿ ಈ ಜವಾಬ್ದಾರಿಯುತ ಕಾರ್ಯಕ್ಕೆ ಕೈ ಜೋಡಿಸುವಂತೆ ಅವರು ಜನತೆಯಲ್ಲಿ ಮನವಿ ಮಾಡಿದರು.ಸಭೆಯಲ್ಲಿ ಎಡಿಸಿ ಎಸ್.ಎಂ.ಮಂಗಳ, ಉಪ ಕಾರ್ಯದರ್ಶಿ ಟಿ.ಕೆ.ರಮೇಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಹೆಚ್.ಎ.ಆನಂದ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕುಮಾರಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್, ಡಿಡಿಪಿಐ ಅಲ್ಮಾಸ್ ಪರ್ವಿನ್ ತಾಜ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಆಧಿಕಾರಿ ಗೀತಮ್ಮ, ಜಿಲ್ಲಾ ಆಯುಷ್ ಆಧಿಕಾರಿ ಡಾ.ರಾಘವೇಂದ್ರ ಶೆಟ್ಟಗಾರ್ ಇದ್ದರು.