ಒಗ್ಗೂಡಿ ಆಚರಿಸುವ ಹಬ್ಬ-ಉತ್ಸವಗಳಿಗೆ ಸಹಕಾರ ನೀಡುವೆ

| Published : Sep 24 2025, 01:00 AM IST

ಸಾರಾಂಶ

ಸರ್ವ ಸಮುದಾಯದವರು ಒಗ್ಗೂಡಿ ಪ್ರೀತಿ ವಿಶ್ವಾಸದಿಂದ ಆಚರಿಸುವ ಹಬ್ಬ-ಉತ್ಸವಗಳಿಗೆ ಸದಾ ಸಹಕಾರ ನೀಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.

ಸೊರಬ: ಸರ್ವ ಸಮುದಾಯದವರು ಒಗ್ಗೂಡಿ ಪ್ರೀತಿ ವಿಶ್ವಾಸದಿಂದ ಆಚರಿಸುವ ಹಬ್ಬ-ಉತ್ಸವಗಳಿಗೆ ಸದಾ ಸಹಕಾರ ನೀಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು. ಸೋಮವಾರ ರಾತ್ರಿ ಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಾಲಯ ಆವರಣದ ಸುರಭಿ ಸಾಂಸ್ಕೃತಿಕ ವೇದಿಕೆಯಲ್ಲಿ ದಸರಾ ಉತ್ಸವ ಸಮಿತಿ, ತಾಲೂಕು ಆಡಳಿತ, ಪುರಸಭೆಯಿಂದ ಹಮ್ಮಿಕೊಂಡ ೧೭ನೇ ವರ್ಷದ ಸಾರ್ವಜನಿಕ ದಸರಾ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಬ್ಬ-ಹರಿದಿನಗಳು ಎಲ್ಲರೂ ಒಂದು ಗೂಡಿ ಮಾಡುವ ಸಂಭ್ರಮವಾಗಿದೆ. ಪಟ್ಟಣದಲ್ಲಿ ವರ್ಷದಿಂದ ವರ್ಷಕ್ಕೆ ಸಾರ್ವಜನಿಕ ದಸರಾ ಉತ್ಸವವು ಉತ್ತಮವಾಗಿ ಹಾಗೂ ಅದ್ಧೂರಿಯಾಗಿ ನಡೆಯುತ್ತಿರುವುದು ಸಂತಸದ ವಿಷಯವಾಗಿದೆ ಎಂದ ಅವರು, ಕ್ಷೇತ್ರದಲ್ಲಿ ಹೆಚ್ಚಿನ ಮಳೆಯಾಗಿದೆ. ರೈತರು ಸಂಕಷ್ಟಕ್ಕೆ ಒಳಗಾಗದೇ ಉತ್ತಮವಾದ ಬೆಳೆ ಲಭಿಸಲಿ ಎಂದು ಹಾರೈಸುತ್ತೇನೆ ಎಂದರು.ಅತಿಯಾದ ಮಳೆಯಿಂದಾಗಿ ಗ್ರಾಮೀಣ ಭಾಗದಲ್ಲಿ ರಸ್ತೆಗಳಿಗೆ ಹಾನಿಯಾಗಿದೆ. ಮಳೆನಿಂತ ತರುವಾಯ ರಸ್ತೆಗಳನ್ನು ದುರಸ್ತಿಗೊಳಿಸಲಾಗುವುದು ಎಂದು ತಿಳಿಸಿದರು.

ದಸರಾ ಎಂದೊಡನೆ ಪ್ರವಾಸಿಗರಿಗೆ ಸೂಕ್ತ ಸಮಯವಾಗಿದೆ. ಮೈಸೂರಿನ ದಸರಾ ವೀಕ್ಷಿಸಲು ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಬಂಗಾರಧಾಮವನ್ನು ಪ್ರವಾಸಿ ತಾಣವನ್ನಾಗಿ ಘೋಷಣೆ ಮಾಡಿರುವುದಕ್ಕೆ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದ ಅವರು, ೮೦೦ ಕೆಪಿಎಸ್ ಶಾಲೆಗಳ ನಿರ್ಮಾಣಕ್ಕೆ ೩೨೦೦ ಕೋಟಿ ರು. ಅನುಮೋದನೆ ದೊರೆತಿರುವುದಾಗಿ ತಿಳಿಸಿದರು. ಇದೇ ವೇಳೆ ಶ್ರೀ ದುರ್ಗಾದೇವಿಯ ವಿಗ್ರಹ ಶಿಲ್ಪಿ ಕೆ.ಎನ್.ರಾಘವೇಂದ್ರ, ಲಕ್ಷಣ ಸಾಗರ್ ನಡಹಳ್ಳಿ, ಪಾಂಡುರಂಗ ಹಾಗೂ ರಂಗನಾಥ್ ಅವರನ್ನು ಸನ್ಮಾನಿಸಲಾಯಿತು. ಜಡೆ ಸಂಸ್ಥಾನ ಮಠ ಹಾಗೂ ಸೊರಬ ಮುರುಘಾಮಠದ ಡಾ.ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ದಸರಾ ಉತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ್ ಮೇಸ್ತ್ರಿ, ಪ್ರಧಾನ ಕಾರ್ಯದರ್ಶಿ ಪರಶುರಾಮ ಸಣ್ಣಬೈಲ್, ಆರ್ಥಿಕ ಸಮಿತಿ ಅಧ್ಯಕ್ಷ ಎಚ್.ಗಣಪತಿ, ಪುರಸಭೆ ಸದಸ್ಯ ಎಂ.ಡಿ.ಉಮೇಶ್, ಎಂ.ಡಿ.ಶೇಖರ್, ಎನ್.ಷಣ್ಮುಖಾಚಾರ್, ತಬಲಿ ಬಂಗಾರಪ್ಪ, ಕೆ.ವಿ.ಗೌಡ, ಜಯಶೀಲಗೌಡ, ಬಂದಗಿ ಬಸವರಾಜ ಶೇಟ್, ಸುಜಾತ ಜೋತಾಡಿ, ಮಹೇಶ್ ಖಾರ್ವಿ, ಜಿ.ಕೆರಿಯಪ್ಪ, ಸುರೇಶ್ ಭಂಡಾರಿ, ಕೆ.ಎಚ್.ಮಾಲತೇಶ್, ಎಸ್.ಮಂಜುನಾಥ್, ಬಸವಂತಪ್ಪ ಗುರ್ಕಿ, ಕೆ.ಪಿ.ರಾಜೇಶ್, ಪ್ರಶಾಂತ್ ಹಿರೇಶಕುನ, ಎಸ್.ರಾಘವೇಂದ್ರ, ಕುಮಾರ್ ಹಿರೇಶಕುನ ಸೇರಿದಂತೆ ಇತರರಿದ್ದರು. ಪಟ್ಟಣದ ಪುರದೈವ ಶ್ರೀ ರಂಗನಾಥ ದೇವಸ್ಥಾನದ ರಥವು ಶಿಥಿಲಗೊಂಡಿದ್ದು, ನೂತನ ರಥ ನಿರ್ಮಾಣ ಕಾರ್ಯ ನಡೆಯುತ್ತಿದೆ. ಹಲವಾರು ದಾನಿಗಳು ಇದಕ್ಕೆ ಸಹಕಾರ ನೀಡಿದ್ದಾರೆ. ಮುಂದಿನ ರಥೋತ್ಸವದ ವೇಳೆಗೆ ನೂತನ ರಥ ನಿರ್ಮಾಣವಾಗಲಿದೆ. ಮುಖ್ಯರಸ್ತೆಯ ಆಂಜನೇಯ ದೇವಸ್ಥಾನದ ದುರಸ್ತಿಯನ್ನು ಶೀಘ್ರದಲ್ಲಿ ಕೈಗೆತ್ತಿಕೊಳ್ಳಲಾಗುವುದು.

- ಎಸ್. ಮಧುಬಂಗಾರಪ್ಪ, ಸಚಿವ