ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಬಂಜಾರ ಸಮುದಾಯದ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೇ 9ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಬಂಜಾರ ಸಮುದಾಯದ ಬಂಧುಗಳು ಸ್ವ ಪ್ರೇರಣೆಯಿಂದ ಆಗಮಿಸಬೇಕು ಎಂದು ಬಂಜಾರ (ಲಂಬಾಣಿ) ಸಮಾಜದ ಜಿಲ್ಲಾ ಅಧ್ಯಕ್ಷ ಎಂ.ಸತೀಶ್ ಕುಮಾರ್ ಕರೆ ನೀಡಿದರು.ಚಿತ್ರದುರ್ಗದ ಬಂಜಾರ (ಲಂಬಾಣಿ) ಸಮಾಜದ ಕಚೇರಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದ ಪೂರ್ವಬಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಯಡಿಯೂರಪ್ಪರವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ರಾಜ್ಯದ ಬಂಜಾರರ ಅಭಿವೃದ್ಧಿಗಾಗಿ ತಾಂಡ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡುವುದರ ಮೂಲಕ ತಾಂಡಗಳ ಅಭಿವೃದ್ಧಿ ಮಾಡಿದ್ದಾರೆ. ಜಿಲ್ಲಾ ತಾಲೂಕು ಹೋಬಳಿಗಳಲ್ಲಿ ಸೇವಾಲಾಲ್ ಭವನಗಳನ್ನು ನಿರ್ಮಿಸಿದ್ದಾರೆ. ಇದಲ್ಲದೆ ಸಂತಶ್ರೀ ಸೇವಾಲಾಲ್ ಮಹಾರಾಜರ ಜನ್ಮಸ್ಥಳವಾದ ಸೂರಗೊಂಡನಕೊಪ್ಪದಲ್ಲಿ ವಿವಿಧ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ನಮ್ಮ ಸಮುದಾಯಕ್ಕೆ ಇಷ್ಟೊಂದು ಅಭಿವೃದ್ಧಿ ಕಾರ್ಯವನ್ನು ಮಾಡಿರುವ ವ್ಯಕ್ತಿಯ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವುದು ನಮ್ಮ ಕರ್ತವ್ಯ ಎಂದರು.ಅವರು ಜನಸೇವೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿ ಇಟ್ಟಿದ್ದಾರೆ. ದಲಿತರು, ಪರಿಶಿಷ್ಟ ಜಾತಿ ಮತ್ತು ಪಂಗಡ, ಮಹಿಳೆಯರಿಗೆ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಅಧಿಕಾರಕ್ಕಾಗಿ ಎಂದು ಸಹ ಹೋರಾಟವನ್ನು ಮಾಡಲಿಲ್ಲ. ಬಡವರ ಕಣ್ಣೀರನ್ನು ಒರೆಸುವ ಸಲುವಾಗಿ ಕೆಲಸ ಮಾಡಿದ್ದಾರೆ. 50 ವರ್ಷ ಬಡವರ ಪರವಾಗಿ ರಾಜಕೀಯ ಮಾಡಿದ್ದಾರೆ. ಬಿಎಸ್ವೈ ಎಂದರೆ ಹೋರಾಟ ಎಂಬ ಮನೋಭಾವ ಎಲ್ಲರಲ್ಲೂ ಸಹ ಮೂಡಿದೆ. ಛಲಕ್ಕೆ ಮತ್ತೊಂದು ಹೆಸರೇ ಯಡಿಯೂರಪ್ಪ ಎನ್ನಬಹುದಾಗಿದೆ. ಹಾಗಾಗಿ ಅವರ ಕಾರ್ಯಕ್ರಮ ಯಶಸ್ವಿಯಾಗಲು ನಾವೆಲ್ಲಾ ಸಹಕಾರ ನೀಡೋಣ ಎಂದರು.
ಈ ಸಂದರ್ಭದಲ್ಲಿ ಬಂಜಾರ ಸಮಾಜದ ಹೊಸದುರ್ಗ ತಾಲೂಕು ಅಧ್ಯಕ್ಷ ಪ್ರವೀಣ್ನಾಯ್ಕ, ಉಪಾಧ್ಯಕ್ಷ ತಿಪ್ಪೇಸ್ವಾಮಿ ನಾಯ್ಕ, ಹೊಳಲ್ಕೆರೆಯ ಸದಸ್ಯ ಕಾಳ್ಯ ನಾಯ್ಕ, ಈರಾನಾಯ್ಕ, ಶೋಭಾ, ಆನಂದಪ್ಪ, ಪರಶುರಾಮ್, ಮಂಜನಾಯ್ಕ ಮುಂತಾದವರು ಹಾಜರಿದ್ದರು.