ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಶಕ್ತಿ ದೇವತೆ ಶ್ರೀಮದ್ದೂರಮ್ಮನವರ ಅಗ್ನಿಕೊಂಡ ಮಹೋತ್ಸವ ಬುಧವಾರ ಮುಂಜಾನೆ ಸಾವಿರಾರು ಭಕ್ತರ ಉದ್ಗೋಷಗಳ ನಡುವೆ ವಿಜೃಂಭಣೆಯಿಂದ ನೆರವೇರಿತು.ದೇಗುಲದ ಪ್ರಧಾನ ಅರ್ಚಕ ಪೂಜಾರಿ ಶಿವಣ್ಣ ಶ್ರೀಮದ್ದೂರಮ್ಮನವರ ಪಟವನ್ನು ಹೊತ್ತು ಅಗ್ನಿಕೊಂಡ ಹಾಯ್ದರು. ಶ್ರೀಅಗ್ನಿಕೊಂಡ ಮಹೋತ್ಸವದ ಪೂರ್ವಭಾವಿಯಾಗಿ ಮಂಗಳವಾರ ದೇವಿಗೆ ಮೂಲ ದೇಗುಲದಲ್ಲಿ ಹೋಮ ಅವನಾದಿಗಳೊಂದಿಗೆ ವಿಶೇಷ ಪೂಜಾ ಕಾರ್ಯಗಳು ಜರುಗಿದವು.
ನಂತರ ಎಲ್ಲಮ್ಮ ದೇವಿಗೆ ಚಂದ್ರ ಬಂಡಾರ ಸೇವೆ ಬಳಿಕ ಸಂಜೆ 5 ಗಂಟೆಗೆ ಸುಮಾರಿಗೆ ಗ್ರಾಮಸ್ಥರಿಂದ ಕೊಂಡಾ ಬಂಡಿ ಉತ್ಸವ ನೆರವೇರಿತು. ಸಂಜೆ ಅಮ್ಮನವರ ಮೂಲ ದೇಗುಲದಲ್ಲಿ ಅಭಿಷೇಕದೊಂದಿಗೆ ವಿಶೇಷ ಪೂಜೆ ಮಹಾಮಂಗಳಾರತಿ ನಡೆಯಿತು. ಮಂಗಳವಾರ ಮಧ್ಯರಾತ್ರಿ ವೇಳೆಗೆ ಬೆಂಗಳೂರು, ಮೈಸೂರು ಹೆದ್ದಾರಿಯ ಪಕ್ಕದ ಶ್ರೀಮದ್ದೂರಮ್ಮದೇವರ ಮುಂದೆ ನಿರ್ಮಿಸಲಾಗಿದ್ದ ಕೊಂಡಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು. ಮುಂಜಾನೆ ಗಂಟೆ ಸುಮಾರಿಗೆ ಅಸಂಖ್ಯಾತಭಕ್ತರ ಸಮ್ಮುಖದಲ್ಲಿ ಅಗ್ನಿಕೊಂಡ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.ಕೊಂಡ ಮಹೋತ್ಸವದ ಪೂರ್ವಭಾವಿಯಾಗಿ ಮೂಲ ದೇವಸ್ಥಾನದಿಂದ ಸೋಮೇಗೌಡರ ಬೀದಿ, ದೊಡ್ಡಿ ಬೀದಿ ಮೂಲಕ ಅಮ್ಮನವರ ಪುಷ್ಪಾಲಂಕೃತ ಪಟದ ಮೆರವಣಿಗೆ ನಡೆಯಿತು. ಮಾರ್ಗ ಮಧ್ಯೆ ಭಕ್ತರು ತಮ್ಮ ಮನೆಗಳ ಮುಂದೆ ಕುರಿ, ಕೋಳಿಗಳನ್ನು ಬಲಿಕೊಟ್ಟು ಪೂಜೆ ಸಲ್ಲಿಸಿದರು.
ಇಂದು ಬ್ರಹ್ಮ ರಥೋತ್ಸವ:
ಮದ್ದೂರಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ಪಟ್ಟಣದ ಪುರಾಣ ಪ್ರಸಿದ್ಧ ಶ್ರೀನರಸಿಂಹ ಸ್ವಾಮಿ ದೇವರ ಬ್ರಹ್ಮ ರಥೋತ್ಸವ ಮೇ 7ರಂದು ನಡೆಯಲಿದೆ. ಬ್ರಹ್ಮ ರಥೋತ್ಸವದ ನಿಮಿತ್ತ ನರಸಿಂಹಸ್ವಾಮಿ ದೇಗುಲದಲ್ಲಿ ಏಪ್ರಿಲ್ 30 ರಿಂದಲೇ ಸೇವಾ ಕರ್ತರಿಂದ ವಿಶೇಷ ಪೂಜಾ ಕಾರ್ಯಗಳು ಈಗಾಗಲೇ ನಡೆಯುತ್ತಿದೆ. ಮೇ 7 ರಂದು ಬೆಳಗ್ಗೆ 11 .15 ಗಂಟೆಯಿಂದ 12 15ರ ಗಂಟೆಯೊಳಗೆ ಸಲ್ಲುವ ಕರ್ಕಾಟಕ ಲಗ್ನದಲ್ಲಿ ಬ್ರಹ್ಮರಥೋತ್ಸವ ನಡೆಯಲಿದೆ. ರಥೋತ್ಸವಕ್ಕೆ ಬರುವ ಭಕ್ತಾದಿಗಳಿಗೆ ಶ್ರೀ ನರಸಿಂಹಸ್ವಾಮಿ ಸೇವಾ ಸಂಘದ ವತಿಯಿಂದ ಪಾನಕ ಮಜ್ಜಿಗೆ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.