ಪ್ರಸ್ತುತ ಎಐ ಹೇಳಿದಂತೆ ಜಗತ್ತು ನಡೆಯುವಂತಾಗಿದೆ. ಈಗಾಗಲೇ ಹಲವಾರು ಮಂದಿಯ ಉದ್ಯೋಗ ಎಐಗೆ ಬಲಿಯಾಗಿದೆ. ಮಕ್ಕಳಲ್ಲಿರಬೇಕಾದ ಸಹಜ ಸೃಷ್ಟಿಶೀಲ ಮನಸ್ಸನ್ನೂ ಈ ಎಐ ನಾಶ ಮಾಡುತ್ತಿದೆ. ಸಂಸ್ಕೃತಿ, ಸಂಸ್ಕಾರಕ್ಕೆ ಎಐಯಿಂದ ಬಹು ದೊಡ್ಡ ನಷ್ಟವಾಗಲಿದೆ ಎಂದು ಖ್ಯಾತ ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಮ್ ಆತಂಕ ವ್ಯಕ್ತಪಡಿಸಿದ್ದಾರೆ.
ಉಡುಪಿ: ಪ್ರಸ್ತುತ ಎಐ ಹೇಳಿದಂತೆ ಜಗತ್ತು ನಡೆಯುವಂತಾಗಿದೆ. ಈಗಾಗಲೇ ಹಲವಾರು ಮಂದಿಯ ಉದ್ಯೋಗ ಎಐಗೆ ಬಲಿಯಾಗಿದೆ. ಮಕ್ಕಳಲ್ಲಿರಬೇಕಾದ ಸಹಜ ಸೃಷ್ಟಿಶೀಲ ಮನಸ್ಸನ್ನೂ ಈ ಎಐ ನಾಶ ಮಾಡುತ್ತಿದೆ. ಸಂಸ್ಕೃತಿ, ಸಂಸ್ಕಾರಕ್ಕೆ ಎಐಯಿಂದ ಬಹು ದೊಡ್ಡ ನಷ್ಟವಾಗಲಿದೆ ಎಂದು ಖ್ಯಾತ ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಮ್ ಆತಂಕ ವ್ಯಕ್ತಪಡಿಸಿದ್ದಾರೆ.ಅವರು ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ವತಿಯಿಂದ ನಡೆಯುತ್ತಿರುವ ಸಂಸ್ಕೃತಿ ಉತ್ಸವದ 2ನೇ ದಿನ ಭಾನುವಾರ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ, ಪಂಚಮಿ ಟ್ರಸ್ಟ್ ಕೊಡಮಾಡುವ ಪಂಚಮಿ ಪುರಸ್ಕಾರವನ್ನು ಸ್ವೀಕರಿಸಿ ಮಾತನಾಡಿದರು.ಪ್ರಪಂಚದಾದ್ಯಂತ ಪ್ರತಿ ನಿಮಿಷ ನಿಮಿಷಕ್ಕೂ ಆಮ್ಲಜನಕ ಕಡಿಮೆಯಾಗುತ್ತಿದೆ. ನಮ್ಮ ಸ್ವಾರ್ಥಕ್ಕೆ ಹಸಿರು ಸಾಯುತ್ತಿದೆ. ಪಶ್ಚಿಮ ಘಟ್ಟಗಳಿಗೂ ಈಗಾಗಲೇ ಅಪಾಯ ಎದುರಾಗಿದ್ದು, ಇನ್ನಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಘೋರ ಬೆಲೆ ತರೆಬೇಕಾಗುತ್ತದೆ ಎಂದ ಅವರು, ಇನ್ನೊಂದು ಅಪಾಯವನ್ನು ಬೆಟ್ಟು ಮಾಡಿದರು.ಉಡುಪಿ ಪರಿಸರದ ಮಹತ್ವದ ಸಾಹಿತಿಗಳಾದ ಗೋಪಾಲಕೃಷ್ಣ ಅಡಿಗ, ಶಿವರಾಮ ಕಾರಂತರು ನನ್ನ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಸೀತಾರಾಮ್ ಸ್ಮರಿಸಿಕೊಂಡರು.
ಈ ವೇಳೆ ಹಿರಿಯ ವಿದ್ವಾಂಸ ನಾಡೋಜ ಪ್ರೊ. ಕೆ.ಪಿ. ರಾವ್, ಕಾರ್ಕಳ ಯಕ್ಷ ರಂಗಾಯಣದ ನಿರ್ದೇಶಕ ಬಿ.ಆರ್. ವೆಂಕಟರಮಣ ಐತಾಳ್, ಕನ್ನಡಪ್ರಭದ ಪುರವಣಿ ಸಂಪಾದಕ ಗಿರೀಶ್ ರಾವ್ (ಜೋಗಿ), ಪ್ರಶಸ್ತಿ ಪ್ರಾಯೋಜಕರಾದ ಪಂಚಮಿ ಟ್ರಸ್ಟ್ ಸಂಸ್ಥಾಪಕ ಡಾ. ಎಂ. ಹರಿಶ್ಚಂದ್ರ, ಸಾಹಿತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು, ಮಣಿಪಾಲ ಶಂಕರ್ ರೂಫಿಂಗ್ ಸಿಸ್ಟಮ್ ವ್ಯವಸ್ಥಾಪಕಿ ಸುಗುಣಾ ಸುವರ್ಣ, ಕಲಾಪೋಷಕ ಭುವನ ಪ್ರಸಾದ್ ಹೆಗ್ಡೆ, ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ. ಶಂಕರ್ ಉಪಸ್ಥಿತರಿದ್ದರು. ವಿದ್ಯಾ ಶ್ಯಾಂಸುಂದರ್ ಸಮ್ಮಾನ ಪತ್ರ ವಾಚಿಸಿದರು. ರವಿರಾಜ್ ಎಚ್.ಪಿ. ಪ್ರಸ್ತಾವನೆಗೈದರು. ಪತ್ರಕರ್ತರಾದ ಆಸ್ಟ್ರೋ ಮೋಹನ್ ಸ್ವಾಗತಿಸಿದರು. ಜನಾರ್ದನ ಕೊಡವೂರು ವಂದಿಸಿದರು. ಪೂರ್ಣಿಮಾ ಜನಾರ್ದನ ನಿರೂಪಿಸಿದರು.