ಕನ್ನಡಪ್ರಭ ವಾರ್ತೆ ನಾಗಮಂಗಲ

ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಉತ್ತಮ ಹೆಸರು ಗಳಿಸುತ್ತಿದ್ದಂತೆ ನನ್ನ ನಾಯಕತ್ವ ಹೋಗುತ್ತಿದೆ ಎಂಬ ಆತಂಕದಿಂದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಹೊಟ್ಟೆ ಕಿಚ್ಚಿನಿಂದ ಡಿಕೆಶಿ ವಿರುದ್ಧ ಬಾಲಿಷ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಟಿ.ಬಿ.ಬಡಾವಣೆಯ ತಮ್ಮ ಗೃಹ ಕಚೇರಿಯಲ್ಲಿ ಶುಕ್ರವಾರ ತಮ್ಮ ಬೆಂಬಲಿತ ಕಾರ್ಯಕರ್ತರು ಮತ್ತು ಸಾರ್ವಜನಿಕರ ಕುಂದು ಕೊರತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಒಕ್ಕಲಿಗ ಸಮುದಾಯದಲ್ಲಿ ತನ್ನನ್ನು ಬಿಟ್ಟರೆ ಬೇರೆ ಯಾರೂ ಗಂಡಸಿಲ್ಲವೆಂಬ ಭ್ರಮೆಯಲ್ಲಿದ್ದಾರೆ ಎಂದು ಕಿಡಿಕಾರಿದರು.

138 ಶಾಸಕರ ಬೆಂಬಲದಿಂದ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಿದ್ದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಎಲ್ಲಿಲ್ಲದ ಸಂಕಟ ಶುರುವಾಗಿದೆ. ಇದುವರೆಗೂ ಒಕ್ಕಲಿಗ ನಾಯಕನಾಗಿ ನನ್ನ ಬಿಟ್ಟರೆ ಯಾರೂ ಇಲ್ಲ ಅಂತ ಅಂದುಕೊಂಡಿದ್ದರು, ಆದರೆ, ಈಗ ಡಿಕೆಶಿ ಅವರು ಒಕ್ಕಲಿಗ ನಾಯಕರಾಗಿ ಬೆಳೆಯುತ್ತಿರುವುದನ್ನು ಸಹಿಸಲಾಗದೆ ಹೊಟ್ಟೆ ಕಿಚ್ಚು ಪಡುತ್ತಿರುವ ಎಚ್ಡಿಕೆ ರಾಜ್ಯದಲ್ಲಿ ಏನೇ ಆದರೂ ಒಂದೊಂದು ಹೇಳಿಕೆ ನೀಡುತ್ತಾ, ನಾನಿನ್ನೂ ಒಕ್ಕಲಿಗ ನಾಯಕನಾಗಿ ಇದ್ದೀನಿ ಎಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಜರಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕೃತವಾಗಿ ವಿರೋಧ ಪಕ್ಷವಾಗಿ ಬಲಷ್ಠವಾಗಿದ್ದರೂ ಕೂಡ ಸರ್ಕಾರದ ವಿರುದ್ದ ಸಲ್ಲದ ಆರೋಪದೊಂದಿಗೆ ಪ್ರತಿನಿತ್ಯ ಪ್ರಚಾರದಲ್ಲಿರಲು ಕುಮಾರಸ್ವಾಮಿ ಅವರು ಯತ್ನಿಸುತ್ತಿದ್ದಾರೆ. ವಿಪಕ್ಷದ ಕೆಲಸ ಮಾಡಲು ರಾಜ್ಯದಲ್ಲಿ ಹಲವು ಬಿಜೆಪಿ ನಾಯಕರಿದ್ದು ಅವರು ನಿಭಾಯಿಸುತ್ತಾರೆ. ಎಚ್ಡಿಕೆ ಕೇಂದ್ರ ಸಚಿವರಾಗಿ ದೇಶದಾದ್ಯಂತ ಪ್ರವಾಸ ಮಾಡಿ ಅಭಿವೃದ್ಧಿ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.


ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಎರಡು ವರ್ಷ ಕಳೆದರೂ ಕೂಡ ರಾಜ್ಯಕ್ಕೆ ಯಾವೊಂದು ಒಳ್ಳೆಯ ಯೋಜನೆ ತರಲಾಗಿಲ್ಲ. ಎಚ್‌ಎಂಟಿ ಕಾರ್ಖಾನೆಯನ್ನು ಪುನಶ್ಚೇತನ ಮಾಡುತ್ತೇನೆ ಎಂದು ಕಥೆ ಹೇಳಿಕೊಂಡು ಪ್ರಚಾರ ಪಡೆದರು. ಆದರೆ, ಇದುವರೆಗೂ ಅದು ಹಾಗೆಯೇ ಉಳಿದಿದೆ. ಅಭಿವೃದ್ಧಿ ಕೆಲಸದ ಕಡೆ ಗಮನ ಕೊಡದೆ ತಮ್ಮ ಅಧಿಕಾರವಧಿಯಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಜರಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಾದರಿಯಲ್ಲಿ ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್ ಸಿಎಂ ಆಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರ ನಡವಳಿಕೆಯಿಂದ ರಾಜ್ಯದಲ್ಲಿ ಜೆಡಿಎಸ್ ಒಂದೊಂದು ಚುನಾವಣೆಯಲ್ಲಿಯೂ ತನ್ನ ಸ್ಥಾನಗಳನ್ನು ಕಳೆದುಕೊಳ್ಳುತ್ತಿದೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಉಳಿಸಿಕೊಂಡರೆ 12 ಸ್ಥಾನ ಪಡೆಯಬಹುದು, ಮೈತ್ರಿ ಇಲ್ಲವಾದರೆ 7 ರಿಂದ 8 ಸ್ಥಾನಕಷ್ಟೆ ಸೀಮಿತವಾಗಲಿದೆ ಎಂದು ವ್ಯಂಗ್ಯವಾಡಿದರು.ಈ ವೇಳೆ ಶಿವರಾಮೇಗೌಡರ ಪುತ್ರ ಎಲ್.ಎಸ್.ಚೇತನ್‌ಗೌಡ, ವಕೀಲ ಟಿ.ಕೆ.ರಾಮೇಗೌಡ, ಅಹಿಂದ ಮುಖಂಡ ಬಿದರಕೆರೆ ಮಂಜೇಗೌಡ, ತಾಪಂ ಮಾಜಿ ಸದಸ್ಯರಾದ ಚಿಣ್ಯ ಕರಿಯಣ್ಣ, ಹೇಮರಾಜು, ಪುರಸಭೆ ಮಾಜಿ ಸದಸ್ಯ ಲಾರಿ ಚನ್ನಪ್ಪ, ಮುಖಂಡರಾದ ಸೋಮಶೇಖರ್, ಸಿ.ಜೆ.ಕುಮಾರ್, ಚೇತನ್, ಗಣೇಶ್ ಸೇರಿದಂತೆ ಹಲವರು ಇದ್ದರು.