ಸಮಾಜದ ಡೊಂಕು ತಿದ್ದಲು ದಾಸರ ಪದಗಳು ಪರಿಣಾಮಕಾರಿ: ಎಚ್‌.ಎಂ.ರೇವಣ್ಣ

| Published : Dec 31 2023, 01:30 AM IST

ಸಮಾಜದ ಡೊಂಕು ತಿದ್ದಲು ದಾಸರ ಪದಗಳು ಪರಿಣಾಮಕಾರಿ: ಎಚ್‌.ಎಂ.ರೇವಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ದಾಸರ ಕೀರ್ತನೆಗಳು ದೇವರನ್ನು ಹೊಗಳುವದಕ್ಕೆ ಮಾತ್ರವಲ್ಲ. ಸಮಾಜದ ಡೊಂಕುಗಳನ್ನು ತಿದ್ದಲೂ ಪರಿಣಾಮಕಾರಿಯಾಗಿವೆ ಎಂದು ಮಾಜಿ ಸಚಿವ ಎಚ್‌.ಎಂ.ರೇವಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು. ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕವು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಪ್ರಥಮ ದಾಸ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೀದರ್‌

ದಾಸರ ಕೀರ್ತನೆಗಳು ದೇವರನ್ನು ಹೊಗಳುವದಕ್ಕೆ ಮಾತ್ರವಲ್ಲ. ಸಮಾಜದ ಡೊಂಕುಗಳನ್ನು ತಿದ್ದಲೂ ಪರಿಣಾಮಕಾರಿಯಾಗಿವೆ ಎಂದು ಮಾಜಿ ಸಚಿವ ಎಚ್‌.ಎಂ.ರೇವಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕವು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಪ್ರಥಮ ದಾಸ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಆಡು ಭಾಷೆಯಲ್ಲಿ ಬಂದಂಥ ದಾಸ ಸಾಹಿತ್ಯವು ವಚನ ಸಾಹಿತ್ಯದಂತೆ ಸಾರಸತ್ವ ಲೋಕದಲ್ಲಿ ಗಟ್ಟಿ ಆಗಿದೆ. ಜಾತಿ ವೈಮನಸ್ಸು ತೊಡೆದು ಹಾಕುವಂಥ ವ್ಯವಸ್ಥೆಯನ್ನು ತರಲು ದಾಸರ ಪದಗಳು ಪೂರಕವಾಗಿವೆ ಎಂದರು. ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಜಿಲ್ಲೆಯಲ್ಲಿ ಸಾಂಸ್ಕೃತಿಕ ಅಭಿವೃದ್ಧಿ ಹೀಗೆ ಮುಂದುವರಿಯಲು ಕನ್ನಡ ಸಾಹಿತ್ಯ ಪರಿಷತ್‌ ಸಹಕಾರ ಇರಲಿ. ಗಡಿ ಭಾಗದ ಈ ಜಿಲ್ಲೆಯಲ್ಲಿ ಮಾತನಾಡುವ ಭಾಷೆ ಇತರೆ ಭಾಷೆಗಳೊಂದಿಗೆ ಮಿಶ್ರಿತವಾಗಿ ದ್ದರೂ ಕನ್ನಡದ ಮೇಲಿನ ಪ್ರೀತಿಗೆ ಕಡಿಮೆಯೇನಿಲ್ಲ. ಒಟ್ಟಾರೆ ಕನ್ನಡ ನಾಡು,ನುಡಿ ನಮ್ಮ ಉಸಿರಾಗಬೇಕು, ನಾಡು ನುಡಿಗಾಗಿ ಒಗ್ಗಟ್ಟಿನ ಹೋರಾಟ ಆಗಬೇಕು ಎಂದು ತಿಳಿಸಿದರು.ವಿಧಾನ ಪರಿಷತ್‌ ಸದಸ್ಯ ರಘುನಾಥರಾವ್‌ ಮಲ್ಕಾಪೂರೆ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಸುರೇಶ ಚೆನಶೆಟ್ಟಿ ಅವರ ಸತತ ಕಾರ್ಯಕ್ರಮಗಳ ಶ್ರಮ ಅಚ್ಚರಿ ಮೂಡಿಸುವಂಥದ್ದು. ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯವನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಮುಂದಾಗಬೇಕು. ಎಂದರು.ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್‌ ಮಾತನಾಡಿ, ಕನ್ನಡದ ರಾಜಧಾನಿ ಬೆಂಗಳೂರಾಗಿದ್ದರೂ ಅದರ ಸುತ್ತಮುತ್ತಲಿನ ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿಯಲ್ಲಿ ತೆಲುಗು ಭಾಷೆ ಹೆಚ್ಚು ನೆಚ್ಚಿಕೊಂಡಿದೆ. ಆದರೆ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಿಂದ ಸುತ್ತುವರೆದಿರುವ ಬೀದರ್‌ ಇಂದಿಗೂ ಕನ್ನಡತ್ವವನ್ನು ಬಿಟ್ಟಿಲ್ಲ ಎಂದು ತಿಳಿಸಿದರು. ಗಡಿ ಭಾಗದ ಗ್ರಾಮದಲ್ಲಿ ಇಬ್ಬರು ಮಕ್ಕಳು ಇದ್ದರೂ 4 ಜನ ಶಿಕ್ಷಕರನ್ನಿಟ್ಟು ಕನ್ನಡ ಶಾಲೆ ನಡೆಸಲು ನನ್ನ ಅಧಿಕಾರಾವಧಿಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ಇದೀಗ ಅದನ್ನು ಈಶ್ವರ ಖಂಡ್ರೆ ಅವರು ತಮ್ಮ ಸರ್ಕಾರದಲ್ಲಿ ನಡೆಸಿಕೊಡಬೇಕು ಎಂದ ಅವರು ಯಾವುದೇ ಕಾರಣಕ್ಕೂ ಗಡಿಯಲ್ಲಿ ಕನ್ನಡ ಶಾಲೆಗಳು ಮುಚ್ಚಬಾರದು ಎಂದರು.

ಬೀದರ್‌ನ ಕನ್ನಡ ಭಾಷೆ ವಿಶಿಷ್ಟವಾದದ್ದು ಇಲ್ಲಿನ ದಾಪುಸ್ಕೋಟ, ಕಂಡಾಪಟ್ಟೆ, ಬೋನಾ ಪದಗಳು ಹೊರಗಿನವರಿಗೆ ಅಚ್ಚರಿ ಮೂಡಿಸುತ್ತವೆ. ನಮ್ಮಲ್ಲಿ ಅನ್ನ , ರೈಸ್‌ ತಿಂದು ಬಂದೇನಿ ಅಂತ ಹೇಳಲ್ಲ ಬೋನಾ ತಿಂದೇವಿ ಅಂತಾರೆ. ಹೀಗೆಯೇ ನಮ್ಮದು ವಿಶಿಷ್ಟ ಕನ್ನಡ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪ್ರಥಮ ದಾಸ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಬಿ.ಎಂ.ಅಮರವಾಡಿ ಅವರನ್ನು ಸನ್ಮಾನಿಸಲಾಯಿತು.