ಗದಗ: ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕ್‌ನಲ್ಲಿನ ರೈತರ ಕೃಷಿ ಸಾಲಮನ್ನಾ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆ ನಡೆಸಿದ ರೈತರು ಬಳಿಕ ಡಿಸಿಯವರಿಗೆ ಮನವಿ ಸಲ್ಲಿಸಿದರು. ಈ ವೇಳೆ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾಧ್ಯಕ್ಷ ಶಂಕರಗೌಡ ಎಂ. ಜಾಯನಗೌಡರ ಮಾತನಾಡಿ, ಜಿಲ್ಲೆಯಲ್ಲಿ ಮಳೆಗಾಲ ಕೊರತೆಯಿಂದ ರೈತರು ಕಂಗಾಲಾಗಿದ್ದು, ಬೆಳೆಗಳು ಬಾರದೇ ಇದ್ದ ಕಾರಣ ಅಂತರ್ಜಾಲ ಕುಸಿದಿದ್ದರಿಂದ ದನ, ಕರುಗಳಿಗೆ ಹಾಗೂ ಸಾರ್ವಜನಿಕರಿಗೆ ನೀರಿನ ತೊಂದರೆಯಾಗಿದ್ದರಿಂದ ಕೂಡಲೇ ಹಸಿರು ಬರಗಾಲವೆಂದು ಘೋಷಣೆ ಮಾಡಬೇಕು. ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕಿನಲ್ಲಿರುವ ರೈತರ ಕೃಷಿ ಸಾಲಮನ್ನಾ ಮಾಡಬೇಕು. ಗೋಶಾಲೆಗಳನ್ನು ತೆರೆಯಬೇಕು. ತುರ್ತಾಗಿ ಪ್ರತಿ ಎಕರೆಗೆ ₹50,000 ಬೆಳೆ ಪರಿಹಾರ ನೀಡಬೇಕು.

ದನ, ಕರುಗಳಿಗೆ ಮೇವು ಬ್ಯಾಂಕ್‌, ಜಿಂಕೆವನ ಮಾಡಲು, 2025- 26ನೇ ಸಾಲಿನ ಬೆಳೆವಿಮೆ ತಂತ್ರಾಂಶದಿಂದ ಕೆಲವು ರೈತರ ಬೆಳೆವಿಮಾ ತುಂಬಿದ ರೈತರಿಗೆ ಜಿಲ್ಲೆಯಿಂದ ಸರಿಯಾಗಿ ಬೆಳೆವಿಮೆ ಬಂದಿಲ್ಲ. ಸಂಪೂರ್ಣ ಬೆಳೆವಿಮೆ ಕಂತು ತುಂಬಿದ ರೈತರಿಗೆ ಬೆಳೆವಿಮೆ ಪರಿಹಾರ ಮಂಜೂರು ಮಾಡಬೇಕು. ಕೃಷಿಯೇತರ ಸಾಲವನ್ನು ತೆಗೆದುಕೊಂಡ ರೈತರಿಗೆ ನೋಟಿಸ್ ನೀಡುತ್ತಿದ್ದು, ಆಸ್ತಿಗಳನ್ನು ಹರಾಜು, ಜಪ್ತಿ ಮಾಡುತ್ತೇವೆ ಎಂದು ಬೆದರಿಕೆ ಒಡ್ಡುತ್ತಿದ್ದಾರೆ.

ಜೀವಭಯದಿಂದ ರೈತರು ಮನೆಬಿಟ್ಟು ಗುಳೆ ಹೋಗುತ್ತಿದ್ದಾರೆ. ಕೆಲವು ಫೈನಾನ್ಸ್‌ಗಳು ಟ್ರ್ಯಾಕ್ಟರ್‌ಗಳ ಸಾಲವನ್ನು ನೀಡಿ ಕಟುಬಾಕಿದಾರರ ರೈತರ ಮನೆ ಮುಂದೆ ಗೂಂಡಾಗಿರಿ ಮಾಡುತ್ತಾರೆ. ಅಲ್ಲದೇ ಮನೆಮುಂದೆ ನಿಲ್ಲಿಸಿದ ಟ್ರ್ಯಾಕ್ಟರ್‌ಗಳನ್ನು ಜಪ್ತಿ ಮಾಡಿ ತೆಗೆದುಕೊಂಡು ಹೋಗುತ್ತಾರೆ. ಕೂಡಲೇ ಫೈನಾನ್ಸ್‌ನವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಜಿಲ್ಲೆಗೆ ಮಹದಾಯಿ ಹಾಗೂ ಘಟಪ್ರಭಾ, ಮಲಪ್ರಭಾ, ತುಂಗಾಭದ್ರಾ ನದಿಗಳಿಂದ ಕೃಷಿ ಭೂಮಿಗಳಿಗೆ ನೀರನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ರಾಮಣ್ಣ ಕಮ್ಮಾರ, ರವಿ ವಗ್ಗನವರ, ಗಿರೀಶ ಹೊಸಮನಿ, ಮೀರಾಬಾಯಿ ಗುತ್ತೇದಾರ, ಉಮೇಶ ಪಾಟೀಲ, ಮಹಾದೇವ ವೇರ್ಣೇಕರ, ಪ್ರವೀಣ ಕರ್ಣೆ, ಅಂದಪ್ಪ ಅಂಗಡಿ, ಮಂಜು ವಡ್ಡರ, ಮಂಜುನಾಥಗೌಡ ಪಾಟೀಲ, ಈರಪ್ಪ ಶಿದ್ನೇಕೊಪ್ಪ, ಮೈಲಪ್ಪ ಹಿರೇವಡ್ಡಟ್ಟಿ, ಸಂಜೀವ ಹುಡೇದ, ನಾಗರಾಜ ಜೈನರ್, ನಾಗರಾಜ ಕಳ್ಳಲ್ಲಿ, ಶಂಕರಗೌಡ ಪಾಟೀಲ, ಈಶ್ವರ ಗದಗಿನ, ಶರಣಪ್ಪ ಕಮ್ಮಾರ, ಹನುಮಂತಪ್ಪ ಆಸಂಗಿ, ಬಸವರಡ್ಡಿ ಬಾಲೇಹೊಸೂರ, ರಂಗಪ್ಪ ಜೋಂಡಿ ಮುಂತಾದ ರೈತರು ಹಾಗೂ ಪದಾಧಿಕಾರಿಗಳು ಇದ್ದರು.