ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಕೆರೆ-ಕಟ್ಟೆಗಳು ಭತ್ತಿ ಹೋಗಿ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ. ಜಿಲ್ಲಾಡಳಿತ, ರಾಜ್ಯ ಸರ್ಕಾರಕ್ಕೆ ಸೂಕ್ತ ವರದಿ ಸಲ್ಲಿಸಿ ಕೆ.ಆರ್.ಪೇಟೆ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸುವಂತೆ ರೈತ ಮುಖಂಡ ಎಂ.ವಿ.ರಾಜೇಗೌಡ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಸಕ್ತ ಸಾಲಿನಲ್ಲಿ ತಾಲೂಕಿನ ರೈತರು ಬಿರು ಬೇಸಿಗೆಯ ದಿನಗಳನ್ನು ಎದುರಿಸುತ್ತಿದ್ದಾರೆ. ಇಲ್ಲಿನ ನೂರಾರು ಕೆರೆ ಕಟ್ಟೆಗಳು ನೀರಿಲ್ಲದೆ ಬಣಗುಡುತ್ತಿವೆ. ಕೆರೆ ಮತ್ತು ಕಾಲುವೆ ಬಯಲಿನಲ್ಲಿ ರೈತರ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದು ನಿಂತಿರುವ ಬೆಳೆಯನ್ನು ಸಂರಕ್ಷಿಸಿಕೊಳ್ಳಲಾರದ ಸ್ಥಿತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕೆರೆಗಳು ಭತ್ತಿದ ಪರಿಣಾಮ ಅಂರ್ತಜಲ ಮಟ್ಟ ಕುಸಿದು ರೈತರ ಪಂಪ್‌ಸೆಟ್ಟುಗಳು ಸ್ಥಗಿತಗೊಳ್ಳುತ್ತಿವೆ. ಭತ್ತಿ ಹೋದ ಕೊಳವೆ ಬಾವಿಗಳನ್ನು ಮತ್ತಷ್ಟು ಆಳಕ್ಕೆ ಕೊರೆಸಿದರೂ ರೈತರು ಮತ್ತಷ್ಟು ಸಾಲಗಾರರಾಗುತ್ತಿದ್ದಾರೆಯೇ ವಿನಹಃ ಭತ್ತಿದ ಬಾವಿಗಳಲ್ಲಿ ನೀರು ಬರುತ್ತಿಲ್ಲ. ತಾಲೂಕಿನ ಬರ ಪರಿಸ್ಥಿತಿ ನೈಜ ಚಿತ್ರಣವನ್ನು ರಾಜ್ಯ ಸರ್ಕಾರದ ಮುಂದಿಟ್ಟು ಮುಂಜಾಗ್ರತಾ ಕ್ರಮವಹಿಸಿ ಜಿಲ್ಲಾಧಿಕಾರಿಗಳು ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ ಬರ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ತಾಲೂಕಿನಾದ್ಯಂತ ಭತ್ತಿ ಹೋಗುತ್ತಿರುವ ಕೆರೆಗಳು ಮರು ಜೀವ ಪಡೆಯಬೇಕಾದರೆ ಹೇಮಾವತಿ ಜಲಾಶಯದಿಂದ ಕಾಲುವೆಗಳ ಮೂಲಕ ಒಂದು ಕಟ್ಟು ನೀರಿ ಹರಿಸಿ ಕೆರೆಗಳನ್ನು ತುಂಬಿಸುವ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಮಾತಿಗೆ ತಪ್ಪಿದ್ದಾರೆ. ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕೂಡ ಹೇಮೆಯ ನೀರಿನ ತಾರತಮ್ಯದ ಬಗ್ಗೆ ಗಟ್ಟಿ ಧ್ವನಿ ಎತ್ತುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


ಹೇಮಾವತಿ ರೈತರ ಹಿತಾಸಕ್ತಿಗಾಗಿ ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಹೋರಾಟಕ್ಕಿಳಿಯಬೇಕು. ಶಾಸಕರ ನೀರಿನ ಹೋರಾಟಕ್ಕೆ ರೈತಸಂಘ ಕೈಜೋಡಿಸಲಿದೆ ಎಂದು ತಿಳಿಸಿದ್ದಾರೆ.ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ ಪ್ರಗತಿ ಶಾಲೆ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಕೆ.ಆರ್.ಪೇಟೆ:ಪಟ್ಟಣದ ಪ್ರಗತಿ ಶಾಲೆ ವಿದ್ಯಾರ್ಥಿಗಳು ತಮಿಳುನಾಡಿನ ಕೊಡೈಕೆನಾಲ್‌ನಲ್ಲಿ ಲಿಯೋ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ ರಾಷ್ಟ್ರ ಮಟ್ಟದ 12ನೇ ಕೊಡೈ ಕಪ್ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾಗಿ ಪ್ರಶಸ್ತಿ ಪಡೆದಿದ್ದಾರೆ.ಲಿಯೋ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ ಕರಾಟೆ ಸ್ಪರ್ಧೆಯಲ್ಲಿ 11 ವರ್ಷದ ಕಟಾ ವಿಭಾಗದಲ್ಲಿ ಶಾಲೆ 6ನೇ ತರಗತಿಯ ಧನ್ಯ ಪ್ರಥಮ, 14 ವರ್ಷದ ಕಟಾ ವಿಭಾಗದಲ್ಲಿ 8ನೇ ತರಗತಿ ಮಂಗಳಗೌರಿ ಪ್ರಥಮ ಬಹುಮಾನ, 12 ವರ್ಷದ ಕಟಾ ವಿಭಾಗದಲ್ಲಿ 7ನೇ ತರಗತಿ ತೇಜಸ್ ಪ್ರಥಮ ಸ್ಥಾನ ಪಡೆಸಿದ್ದು ವಿದ್ಯಾರ್ಥಿಗಳನ್ನು ಕರಾಟೆ ಶಿಕ್ಷಕ ಹೇಮಂತ್ ತರಬೇತಿ ನೀಡಿ ಸ್ಪರ್ಧೆಗೆ ಅಣಿಗೊಳಿಸಿದ್ದರು.

ಪ್ರಥಮ ಪ್ರಶಸ್ತಿ ಪಡೆದ ಹಾಗೂ ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಶಾಲೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಎಂ.ಕೆ.ಮೋನಿಕಾ ಹಾಗೂ ಸಂಸ್ಥೆಯ ಅಧ್ಯಕ್ಷೆ ಶೈಲಜಾ ವಿದ್ಯಾರ್ಥಿಗಳನ್ನು ಹಾಗೂ ತರಬೇತುದಾರರನ್ನು ಅಭಿನಂದಿಸಿದ್ದಾರೆ.