ಧೀಮಂತ ಪ್ರಶಸ್ತಿ ಸಂಖ್ಯೆ ಕಡಿತಗೊಳಿಸಿ

| Published : Oct 08 2024, 01:10 AM IST

ಸಾರಾಂಶ

2023ರಲ್ಲಿ 68 ಜನ ಸಾಧಕರಿಗೆ ಧೀಮಂತ ಪ್ರಶಸ್ತಿ ನೀಡಲಾಗಿತ್ತು. ಈ ಬಾರಿ ಇದರಲ್ಲಿ ಸಂಖ್ಯೆ ಕಡಿಮೆ ಮಾಡಲು ಒತ್ತಾಯಿಸಲಾಯಿತು. ಸಂಖ್ಯೆ ಕಡಿಮೆಯಾದರೂ ಪರವಾಗಿದ್ದ ಅರ್ಹರನ್ನು ಆಯ್ಕೆಗೊಳಿಸಬೇಕು.

ಹುಬ್ಬಳ್ಳಿ:

ಪ್ರತಿ ವರ್ಷ ರಾಜ್ಯೋತ್ಸವದ ಅಂಗವಾಗಿ ಮಹಾನಗರ ಪಾಲಿಕೆ ವತಿಯಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡಲಾಗುವ ಧೀಮಂತ ಪ್ರಶಸ್ತಿಗೆ ಆಯ್ಕೆಗೊಳಿಸುವವರ ಸಂಖ್ಯೆ ಕಡಿಮೆ ಮಾಡಬೇಕೆಂಬ ಸಲಹೆ ಕೇಳಿಬಂದಿತು.

ನ. 1ರ ಕರ್ನಾಟಕ ರಾಜ್ಯೋತ್ಸವ ಆಚರಣೆ ಕುರಿತು ಸೋಮವಾರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತು.

2023ರಲ್ಲಿ 68 ಜನ ಸಾಧಕರಿಗೆ ಧೀಮಂತ ಪ್ರಶಸ್ತಿ ನೀಡಲಾಗಿತ್ತು. ಈ ಬಾರಿ ಇದರಲ್ಲಿ ಸಂಖ್ಯೆ ಕಡಿಮೆ ಮಾಡಲು ಒತ್ತಾಯಿಸಲಾಯಿತು. ಸಂಖ್ಯೆ ಕಡಿಮೆಯಾದರೂ ಪರವಾಗಿದ್ದ ಅರ್ಹರನ್ನು ಆಯ್ಕೆಗೊಳಿಸಬೇಕು. ಪ್ರಶಸ್ತಿಗೆ ಅರ್ಜಿ ಆಹ್ವಾನಿಸುವ ಬಗ್ಗೆ ಪರ-ವಿರೋಧ ಅಭಿಪ್ರಾಯ ಕೇಳಿಬಂದವು. ಈ ಬಾರಿ ಅರ್ಜಿ ಆಹ್ವಾನಿಸದೆ ಆಯಾ ಇಲಾಖೆ ಅಥವಾ ಕ್ಷೇತ್ರಗಳ ಪ್ರಮುಖರ ಶಿಫಾರಸಿನ ಮೇರೆಗೆ ಆಯ್ಕೆ ಮಾಡಲು ಸಲಹೆ ನೀಡಲಾಯಿತು. ಮತ್ತೊಬ್ಬ ಸದಸ್ಯರು, ಅರ್ಜಿ ಆಹ್ವಾನಿಸಿದರೆ ಎಲ್ಲ ಕ್ಷೇತ್ರಗಳ ಸಾಧಕರಿಗೆ ನ್ಯಾಯ ಒದಗಿಸಿದಂತಾಗುತ್ತದೆ ಎಂದರು.

ಈ ವೇಳೆ ಪಾಲಿಕೆ ಸದಸ್ಯ ಸಂತೋಷ ಚವ್ಹಾಣ ಮಾತನಾಡಿ, ಕಳೆದ ವರ್ಷದಂತೆ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಪ್ರತ್ಯೇಕವಾಗಿ ತಾಯಿ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು. ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಬೇಕು. ಮನೆ ಮನೆಯಿಂದ ಕಸ ಸಂಗ್ರಹಿಸುವ ಆಟೋ ಟಿಪ್ಪರ್‌ಗಳ ಧ್ವನಿವರ್ಧಕಗಳ ಮೂಲಕ ಜಿಂಗಲ್ಸ್ ಹಾಕಿ ಪ್ರಚಾರ ನಡೆಸಬೇಕು ಎಂದರು.

ರಾಜ್ಯೋತ್ಯವ ಆಚರಣೆ ಕುರಿತು ಪಾಲಿಕೆ ಸದಸ್ಯರ ಸಲಹೆ ಪಡೆಯಲು ಈ ಪೂರ್ವಭಾವಿ ಸಭೆ ನಡೆಸಿದ್ದೇವೆ. ಅ. 10ರಂದು ಕನ್ನಡ ಪರ ಸಂಘಟನೆಗಳ ಸಭೆ ಕರೆಯಲಾಗಿದೆ. ಅ. 12ರಂದು ಪಾಲಿಕೆ ಸದಸ್ಯರನ್ನೊಳಗೊಂಡ ಮೆರವಣಿಗೆ, ಧೀಮಂತ ಸನ್ಮಾನ, ಅಲ್ಪೋಪಹಾರ, ಪ್ರಚಾರ, ಸಾಂಸ್ಕೃತಿಕ ಮತ್ತು ವೇದಿಕೆ ನಿರ್ಮಾಣ ಹಾಗೂ ಮೇಲ್ವಿಚಾರಣೆ ಮತ್ತು ಉಸ್ತುವಾರಿ ಕೇಂದ್ರ ಸಮಿತಿ ರಚಿಸಲಾಗುವುದು ಎಂದು ಮೇಯರ್‌ ರಾಮಣ್ಣ ಬಡಿಗೇರ ತಿಳಿಸಿದರು.

ಈ ವೇಳೆ ಉಪ ಮೇಯ‌ರ್ ದುರ್ಗಮ್ಮ ಬಿಜವಾಡ, ಪಾಲಿಕೆ ಸದಸ್ಯರಾದ ಬೀರಪ್ಪ ಖಂಡೇಕಾರ, ಶ್ರೀನಿವಾಸ ಬೆಳದಡಿ, ರೂಪಾ ಶೆಟ್ಟಿ, ಜ್ಯೋತಿ ಪಾಟೀಲ, ಚಂದ್ರಿಕಾ ಮೇಸ್ತ್ರಿ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಉಪ ಆಯುಕ್ತ ಆನಂದ ಕಲ್ಲೊಳಿಕರ, ಅಧೀಕ್ಷಕ ಎಂಜಿನಿಯರ್ ಇ. ತಿಮ್ಮಪ್ಪ, ಡಾ. ಶ್ರೀಧರ ದಂಡಪ್ಪನವರ ಸೇರಿದಂತೆ ಹಲವರಿದ್ದರು.