-ವಸತಿ ನಿಲಯಗಳ ಸುಧಾರಣೆಗೆ ಜಿಲ್ಲಾ ಮಟ್ಟದ ಟಾಸ್ಕ್‌ ಫೋರ್ಸ್‌ ಸಮಿತಿ ರಚನೆಗೆ ಒತ್ತಾಯ

--

ಕನ್ನಡಪ್ರಭ ವಾರ್ತೆ ಚಿತ್ತಾಪುರ

ತಾಲೂಕಿನ ದಂಡೋತಿ ಗ್ರಾಮದ ಹೊರವಲಯದ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಲು ಅವರಿಗೆ ನೀಡುತ್ತಿರುವ ಕಳಪೆ ಗುಣಮಟ್ಟದ ಊಟ, ಆಶುದ್ಧ ನೀರು ಕಾರಣ, ಮೆನು ಪ್ರಕಾರ ಗುಣಮಟ್ಟದ ಊಟ, ಶುದ್ಧ ಕುಡಿವ ನೀರು ವಸತಿ ಸೇರಿದಂತೆ ಮೂಲ ಸೌಲಭ್ಯ ಒದಗಿಸಬೇಕೆಂದು ಶಾಸಕ ಬಿ.ಜಿ ಪಾಟೀಲ್, ಅವಿನಾಶ ಜಾಧವ ಒತ್ತಾಯಿಸಿದರು.

ವಸತಿ ನಿಲಯಕ್ಕೆ ಬಿಜೆಪಿ ನಿಯೋಗದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವಸತಿ ನಿಲಯದ ವಾರ್ಡನ್, ಮಕ್ಕಳು ಹಾಗೂ ಪಾಲಕರೊಂದಿಗೆ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಸತಿ ನಿಲಯಕ್ಕೆ ಕಳಪೆ ಆಹಾರ ಧಾನ್ಯ ಪೂರೈಕೆಯಾಗುತ್ತಿವೆ.


ಮಕ್ಕಳಿಗೆ ಶುದ್ದ ಕುಡಿವ ನೀರಿಲ್ಲದೇ ಅನಾರೋಗ್ಯಕ್ಕೆ ಮತ್ತು ಅಪೌಷ್ಟಿಕತೆಗೆ ಮುಖ್ಯ ಕಾರಣ. ಇಷ್ಟೆಲ್ಲಾ ಅನಾಹುತಕ್ಕೆ ತಾಲೂಕು ಅಧಿಕಾರಿಗಳು ಹಾಗೂ ಕಳಪೆ ಗುಣಮಟ್ಟದ ಕಲಬೆರಕೆ ಆಹಾರ ಪೂರೈಸುವ ಏಜೆನ್ಸಿ ಕಾರಣರಾಗಿದ್ದು, ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳದೇ ವಾರ್ಡನ್, ಪ್ರಾಚಾರ್ಯರ ಅಮಾನತು ಮಾಡಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಉಪಯೊಗಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಮಾತನಾಡಿ, ಶಾಸಕ ಪ್ರಿಯಾಂಕ್ ಖರ್ಗೆರವರು ಒಮ್ಮೆಯಾದರೂ ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಹೀಗಾಗಿ ಇಂತಹ ಅನಾಹುತಗಳು ಜಿಲ್ಲೆಯಲ್ಲಿ ಹೆಚ್ಚಾಗಿವೆ. ದಂಡೋತಿ ವಸತಿ ನಿಲಯದಲ್ಲಿರುವ ಶುದ್ಧ ನೀರಿನ ಘಟಕ ಬಂದ್ ಆಗಿದೆ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ. ಈ ನೀರು ಶುದ್ಧವಾಗಿಲ್ಲ. ನಿಲಯದಲ್ಲಿ ಮಕ್ಕಳು ಇರುವ ಕೋಣೆಗಳಿಗೆ ಬಾಗಿಲುಗಳಿಲ್ಲ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗೆ ಶಿಕ್ಷಕರಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಮಟ್ಟದಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರು ಹಾಗೂ ಮುಖಂಡರನೊಳಗೊಂಡ ಒಂದು ಟಾಸ್ಕ್‌ ಫೋರ್ಸ್‌ ಸಮಿತಿ ರಚಿಸಿ ವಸತಿ ನಿಲಯದ ಕುಂದು ಕೊರತೆಗಳ ಕುರಿತು ಅಧ್ಯಯನ ನಡೆಸಿ ವರದಿ ನೀಡಿದಲ್ಲಿ ಸ್ವಲ್ಪ ಮಟ್ಟಿಗಾದರೂ ತೊಂದರೆ ನಿವಾರಿಸಬಹುದು ಎಂದರು.

ಶಾಸಕರಾದ ಬಸವರಾಜ ಮತ್ತಿಮೂಡ, ಮಾಜಿ ಸಚಿವರಾದ ಬಾಬುರಾವ ಚವ್ವಾಣ, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಮುಖಂಡರಾದ ಧರ್ಮಣ್ಣ ಇಟಗಾ, ಶರಣಪ್ಪ ತಳವಾರ ಬಸವರಾಜ ಬೆಣ್ಣೂರಕರ್, ಮಲ್ಲಿಕಾರ್ಜುನ ಎಮ್ಮೆನೊರ, ಆನಂದ ಪಾಟೀಲ್, ವೀರಣ್ಣ ಯಾರಿ ವಾರ್ಡನ್ ವಿಜಯಲಕ್ಷ್ಮೀ ಬಿರಾದಾರ್‌ ಇದ್ದರು.

ಪೋಟೊ: ೧೫-೭ ಸಿಟಿಪಿಅರ್ ೧

ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದ ಹೊರವಲಯದಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ನಿಲಯಕ್ಕೆ ಬಿಜೆಪಿ ಶಾಸಕರು ಹಾಗೂ ಮುಖಂಡರ ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಿದರು.