ಹಿರಿಯರು ತಮಗೆ ಮತ್ತು ಅವಲಂಬಿತರಿಗೆ ಹೊರೆಯಾಗದಂತೆ ಉತ್ತಮವಾಗಿ ಬದುಕಬೇಕು ಎಂದು ಸಿದ್ದೇಶ್ವರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಸಂತೋಷ್ ಸಲಹೆ ನೀಡಿದರು.

ಕನ್ನಡಪ್ರಭವಾರ್ತೆ ತಿಪಟೂರು

ಖಾಯಿಲೆಗಳು ಬಂದ ನಂತರ ವೈದ್ಯರ ಬಳಿ ಬರುವುದಕ್ಕಿಂತ ಖಾಯಿಲೆಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಬಹು ಮುಖ್ಯ ಅದರಲ್ಲೂ ಅರವತ್ತು ವರ್ಷದ ಮೇಲ್ಪಟ್ಟ ಹಿರಿಯರು ತಮಗೆ ಮತ್ತು ಅವಲಂಬಿತರಿಗೆ ಹೊರೆಯಾಗದಂತೆ ಉತ್ತಮವಾಗಿ ಬದುಕಬೇಕು ಎಂದು ಸಿದ್ದೇಶ್ವರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಸಂತೋಷ್ ಸಲಹೆ ನೀಡಿದರು.

ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ತಾಲೂಕು ಶಾಖೆಯ ಜುಲೈ ಮಾಸಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿವೃತ್ತರಾದವರು ಕಾಲಕಾಲಕ್ಕೆ ಅಗತ್ಯ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು, ಅಗತ್ಯ ಲಸಿಕೆಗಳನ್ನು ಹಾಕಿಸಿಕೊಳ್ಳುವುದು ಉತ್ತಮ. ಆರೋಗ್ಯದ ಬಗ್ಗೆ ಸದಾಕಾಳಜಿ ವಹಿಸುವುದರ ಜೊತೆಗೆ ದೇಹದಲ್ಲಿ ಸ್ವಲ್ಪ ಏರುಪೇರಾದರೂ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಚಿಕಿತ್ಸೆ ಪಡೆಯಬೇಕು. ದಿನನಿತ್ಯದ ಆಹಾರದಲ್ಲೂ ಎಚ್ಚರಿಕೆ ವಹಿಸಿ ಸೇವನೆ ಮಾಡುವುದರಿಂದ ಸಕ್ಕರೆ ಹಾಗೂ ಬಿಪಿಯಂತಹ ಕಾಯಿಲೆಗಳನ್ನು ಹತೋಟಿಯಲ್ಲಿಡಬಹುದು ಎಂದು ತಿಳಿಸಿದರು.

ನಾಡಪ್ರಭು ಕೆಂಪೇಗೌಡರ ಬಗ್ಗೆ ಮಾತನಾಡಿದ ಎಚ್.ಜೆ. ದಿವಾಕರ ಪ್ರಪಂಚದ ಗಮನ ಸೆಳೆದ ಸಿಲಿಕಾನ್ ಸಿಟಿ ಎಂಬ ಹೆಗ್ಗಳಿಕೆ ಪಡೆದ ವ್ವವಸ್ಥಿತ ಬೆಂಗಳೂರು ನಗರ ಕೆಂಪೇಗೌಡರ ದೂರದೃಷ್ಟಿಯ ಫಲವಾಗಿದೆ. ರಾಜ್ಯದ ಆರ್ಥಿಕಾಭಿವೃದ್ಧಿಗೆ ಸಿಂಹಪಾಲು ಕೊಡುಗೆ ಬೆಂಗಳೂರಿನದು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕೆ.ಎಂ. ರಾಜಣ್ಣ ನಮ್ಮ ದೈಹಿಕ, ಮಾನಸಿಕ ಅರೋಗ್ಯ ಕಾಪಾಡಿಕೊಳ್ಳಬೇಕಾದರೆ ಯೋಗವೇ ಜೀವನವಾಗಬೇಕು. ಇದಕ್ಕೆ ವೈದ್ಯರು, ಯೋಗ ಗುರುಗಳ ಮಾರ್ಗದರ್ಶನ ಬೇಕು. ಎಸ್.ಐ.ಆರ್. ನಮೂನೆಗಳನ್ನು ಎಚ್ಚರಿಕೆಯಿಂದ ತುಂಬಿ, ಮತದಾನ ನಮ್ಮ ಹಕ್ಕು ಮತ್ತು ಕರ್ತವ್ಯವಾಗಿದೆ ಎಂದರು. ಅಂಬಿಕಮ್ಮ ರುದ್ರಶೆಟ್ಟಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭೆಗೆ ಪಿ.ಆರ್.ಗುರುಸ್ವಾಮಿ ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿದರು. ಕೆ. ವಿಶ್ವನಾಥಯ್ಯ ಚಿಂತನ ಮಂಡಿಸಿದರು. ನೂತನ ಸದಸ್ಯರಿಗೆ ಸ್ವಾಗತ ಮತ್ತು ಜನ್ಮದಿನದ ಶುಭಾಶಯಗಳನ್ನು ಹೆಚ್.ಎಸ್.ಮಂಜಪ್ಪ ಕೋರಿದರು. ದಾಸೋಹದಾನಿಗಳಿಗೆ ಗೌರವ ಸಮರ್ಪಣೆಯನ್ನು ಹೆಚ್.ಜಿ.ನರಸಿಂಹಮೂರ್ತಿ ನಿರ್ವಹಿಸಿದರು. ಖಜಾಂಚಿ ಕುಮಾರ್ ಸಂಘದ ಮಾಸಿಕ ಲೆಕ್ಕಪತ್ರ , ವಿ.ಎನ್.ಮಹದೇವಯ್ಯ ಸಹಕಾರ ಸಂಘದ ಅಧ್ಯಕ್ಷರು ಮಾಸಿಕ ವರದಿ ಮಂಡಿಸಿದರು. ಡಿ.ಎಸ್. ಮರುಳಪ್ಪ ನಿವೃತ್ತ ಪ್ರಾಂಶುಪಾಲರು ವಂದನೆ ಸಲ್ಲಿಸಿದರು. ಶ್ರೀ ಟಿ.ಎ. ಗಂಗಾಧರ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.