ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಆದಾಯ ಮತ್ತು ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವ ಅರ್ಹ ಅರ್ಜಿದಾರರಿಗೆ ತಕ್ಷಣ ಜಾತಿ ಮತ್ತು ಆದಾಯ ದೃಢೀಕರಣ ಪತ್ರ ನೀಡುವಂತೆ ಆಗ್ರಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಕೆ.ದೇವೆಂದ್ರಪ್ಪ ನೇತೃತ್ವದಲ್ಲಿ ತಹಸೀಲ್ದಾರ್‌ಗಳಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯ ಸರ್ಕಾರದ ಆಹಾರ ಇಲಾಖೆ ಪಡಿತರ ಚೀಟಿ ಹೊಂದಿರುವವರಿಗೆ ಕಡ್ಡಾಯವಾಗಿ ಜಾತಿ ಮತ್ತು ಆದಾಯ ದೃಢೀಕರಣಪತ್ರ ಕೇಳುತ್ತಿದ್ದು, ಇದರ ಉದ್ದೇಶ ನಕಲಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವವರನ್ನು ಪತ್ತೆಹಚ್ಚಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಇದರಿಂದ ರಾಜ್ಯಾದ್ಯಂತ ಅದರಲ್ಲೂ ಶಿವಮೊಗ್ಗ ಜಿಲ್ಲೆಯ ಪಡಿತರ ಚೀಟಿ ಹೊಂದಿರುವವರು ಪ್ರತಿನಿತ್ಯ ತಾಲೂಕು ಕಚೇರಿಗಳಲ್ಲಿ ಅರ್ಜಿ ಸಲ್ಲಿಸಲು ಸಾಲು ಸಾಲಾಗಿ ನಿಲ್ಲುತ್ತಿದ್ದು, ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡುವುದು ಕಷ್ಟವಾಗಿದೆ.

ಇನ್ನೊಂದೆಡೆ ಅರ್ಜಿ ಸಲ್ಲಿಸಲು ಜನಸಾಮಾನ್ಯರು ಕೂಲಿ ಕೆಲಸ ಬಿಟ್ಟು ವಾರಗಟ್ಟಲೇ ಪರದಾಡುತ್ತಿದ್ದಾರೆ. ಸಾಮಾನ್ಯವಾಗಿ ನಿಜವಾದ ಫಲಾನುಭವಿಗಳೇ ಕ್ಯೂನಿಲ್ಲುತ್ತಿರುವುದು ಕಂಡು ಬಂದಿದೆ. ನಕಲಿ ಕಾರ್ಡ್ ಹೊಂದಿದವರು ಮತ್ತು ಆರ್ಥಿಕವಾಗಿ ಬಲಾಢ್ಯರಿದ್ದವರು ಮಧ್ಯವರ್ತಿಗಳ ಸಹಾಯದಿಂದ ಅಧಿಕಾರಿಗಳ ಮೂಲಕ ಜಾತಿ ಮತ್ತು ಆದಾಯ ದೃಢೀಕರಣ ಪತ್ರಕ್ಕೆ ಹಣ ಕೊಟ್ಟು ಪಡೆಯಬಹುದು ಎಂದು ನಿರ್ಧಾರ ಮಾಡಿಕೊಂಡಿದ್ದಾರೆ. ಆದ್ದರಿಂದ ಅರ್ಹ ಫಲಾನುಭವಿಗಳಿಗೆ ರೆವಿನ್ಯೂ ಅಧಿಕಾರಿ ಗಳು ಮತ್ತು ಗ್ರಾಮ ಲೆಕ್ಕಿಗರು ಗುರುತಿಸಿ, ಅರ್ಜಿದಾರರಿಗೆ ಶೀಘ್ರವಾಗಿ ದೃಢೀಕರಣ ಪತ್ರಕೊಡಲು ಮನವಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಎಲ್ಲಾ ತಾಲೂಕು ಕಚೇರಿ ಅಧಿಕಾರಿಗಳಿಗೆ ಸುಮಾರು 15 ದಿನಗಳ ಕಾಲ ಏಕ ಗವಾಕ್ಷಿ ಮೂಲಕ ಅರ್ಜಿ ಸ್ವೀಕೃತಿಗೆ ನಿಗಧಿ ಮಾಡಿಕೊಂಡು ಇಲಾಖೆಗೆ ಸಂಬಂಧಪಟ್ಟಂತೆ ಸಾರ್ವಜನಿಕರ ಬೇರೆ ಕೆಲಸ ಬದಿಗೊತ್ತಿ ತಕ್ಷಣವೇ ಪಡಿತರ ಚೀಟಿಗೆ ಬೇಕಾಗುವ ಜಾತಿ ಮತ್ತು ಆದಾಯ ದೃಢೀಕರಣ ಪತ್ರ ಕೊಡಲು ಆದೇಶಿಸಬೇಕು ಎಂದು ಆಗ್ರಹಿಸಿದರು.


ಈಗಾಗಲೇ ಕೆಲವರು ಮಧ್ಯವರ್ತಿಗಳ ಮೂಲಕ ಭ್ರಷ್ಟ ಅಧಿಕಾರಿಗಳಿಗೆ ಹಣಕೊಟ್ಟು ದೃಢೀಕರಣ ಪತ್ರ ಪಡೆದ ಪ್ರಕರಣಗಳು ಕಂಡು ಬಂದಿದೆ. ಭ್ರಷ್ಟ ಅಽಕಾರಿಗಳನ್ನು ಮತ್ತು ಮಧ್ಯವರ್ತಿಗಳನ್ನು ಕಡಿವಾಣಹಾಕಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳ ಬೇಕು. ಭ್ರಷ್ಟಾಚಾರ ಕಂಡು ಬಂದರೆ ತಕ್ಷಣ ಅಂತಹ ಅಧಿಕಾರಿಗಳನ್ನು ಅಮಾನತು ಮಾಡಬೇಕಾಗುತ್ತದೆ ಎಂದು ಸುತ್ತೋಲೆ ಹೊರಡಿಸಬೇಕು. ಅರ್ಜಿ ಸಲ್ಲಿಸಿದ ನಿಜವಾದ ಫಲಾನುಭವಿಗಳಿಗೆ ಜಾತಿ ಮತ್ತು ಆದಾಯ ದೃಢೀಕರಣ ಪತ್ರ 15 ದಿನಗಳೊಳಗೆ ನೀಡಲು ಆದೇಶ ನೀಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಒಬಿಸಿ ಘಟಕದ ಕಾರ್ಯದರ್ಶಿ ಬಿ.ಎಂ.ಹರ್ಷ, ಇಂಟಕ್ ಮಹಿಳಾ ಜಿಲ್ಲಾಧ್ಯಕ್ಷ ಕವಿತಾ ರಾಘವೇಂದ್ರ, ರಾಜೀವ್, ನಾಗರಾಜ್ ಮತ್ತಿತರರಿದ್ದರು.

---------------

ಪೊಟೋ: 19ಎಸ್‌ಎಂಜಿಕೆಪಿ03