ಡೀಸಿ ಆದೇಶ ಮಾಡಿದ್ರೂ ತಪ್ಪುತ್ತಿಲ್ಲ ವಾಹನ ನಿಲುಗಡೆ

| Published : Aug 07 2025, 12:46 AM IST

ಸಾರಾಂಶ

ಪಟ್ಟಣದ ಹೃದಯ ಭಾಗದಲ್ಲಿ ಹಾದು ಹೋಗುವ ಮೈಸೂರು-ಊಟಿ ಹೆದ್ದಾರಿಯಲ್ಲಿ ಬೈಕ್‌ಗಳನ್ನು ನಿಲುಗಡೆಯಿಂದ ಟ್ರಾಫಿಕ್‌ ಸಮಸ್ಯೆ ಕಡಿಮೆ ಮಾಡಲು ಪೊಲೀಸರು ನೋ ಪಾರ್ಕಿಂಗ್‌ ಬೋರ್ಡ್‌ ಹಾಕಿದರೂ ಈ ಸಮಸ್ಯೆ ತಪ್ಪಿಸಲು ಆಗಿಲ್ಲ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪಟ್ಟಣದ ಹೃದಯ ಭಾಗದಲ್ಲಿ ಹಾದು ಹೋಗುವ ಮೈಸೂರು-ಊಟಿ ಹೆದ್ದಾರಿಯಲ್ಲಿ ಬೈಕ್‌ಗಳನ್ನು ನಿಲುಗಡೆಯಿಂದ ಟ್ರಾಫಿಕ್‌ ಸಮಸ್ಯೆ ಕಡಿಮೆ ಮಾಡಲು ಪೊಲೀಸರು ನೋ ಪಾರ್ಕಿಂಗ್‌ ಬೋರ್ಡ್‌ ಹಾಕಿದರೂ ಈ ಸಮಸ್ಯೆ ತಪ್ಪಿಸಲು ಆಗಿಲ್ಲ.

ಇನ್ನೂ ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಮುಂಭಾಗದಿಂದ ಹಳೇ ಬಸ್‌ ನಿಲ್ದಾಣದ ತನಕದ ರಸ್ತೆಯಲ್ಲಿ ಪ್ರತಿ ದಿನ ಒಂದು ಬದಿ ಬೈಕ್‌ಗಳನ್ನು ನಿಲುಗಡೆಗೆ ಬೋರ್ಡ್‌ನ್ನು ಪೊಲೀಸರು ಕಷ್ಟ ಪಟ್ಟು ಹಾಕಿಸಿದರೂ ಸವಾರರು ಬೈಕ್‌ ನಿಲ್ಲಿಸುತ್ತಿದ್ದಾರೆ.

ಡೀಸಿ ಆದೇಶಕ್ಕಿಲ್ಲ ಬೆಲೆ:

ರಾಷ್ಟ್ರೀಯ ಹೆದ್ದಾರಿ ಊಟಿ ಸರ್ಕಲ್‌ ನಿಂದ ಸುರಬಿ ಹೋಟೆಲ್‌ ಬಸ್‌ ಸ್ಟಾಪ್‌ ತನಕ ಹೆದ್ದಾರಿಯ ಇಕ್ಕೆಲಗಳಲ್ಲಿ ಎಲ್ಲಾ ರೀತಿಯ ವಾಹನಗಳ ನಿಲುಗಡೆ ನಿಷೇಧ ಹೇರಿ ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಕಳೆದ ತಿಂಗಳ ಆದೇಶ ಹೊರಡಿಸಿದ್ದಾರೆ. ಆದರೆ ಹೆದ್ದಾರಿ ಎರಡು ಬದಿಯಲ್ಲಿ ಪ್ರತಿ ನಿತ್ಯ ಬಸ್‌, ಟೆಂಪೋ, ಕಾರು, ಆಟೋಗಳು ನಿಲ್ಲುತ್ತಿವೆ. ಆದರೆ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ ಹೆದ್ದಾರಿ ಬದಿಯಲ್ಲಿ ವಾಹನಗಳ ನಿಲ್ಲಿಸಬೇಡಿ ಎಂದು ಆದೇಶ ಬಿದ್ದ ಹೊಸತದರಲ್ಲಿ ಪೊಲೀಸರು ಪ್ರಚಾರ ನಡೆಸಿದ್ದರು.

ಆದರೆ ಜಿಲ್ಲಾಧಿಕಾರಿಗಳ ಆದೇಶಕ್ಕೆ ಪೊಲೀಸರು ಬೆಲೆ ಕೊಟ್ಟಿಲ್ಲ ಎಂಬುದು ಹೆದ್ದಾರಿ ಬದಿ ನಿಂತ ವಾಹನಗಳ ನೋಡಿದರೆ ಅರ್ಥವಾಗಲಿದೆ ಎಂದು ಪಟ್ಟಣದ ನಿವಾಸಿ ಮಹೇಶ್‌ ಹೇಳಿದ್ದಾರೆ. ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯಲ್ಲಿ ಸದಾ ಜನ ಜಂಗುಳಿ ಇರುವ ತಾಣ. ಆದರೆ ಇಲ್ಲಿಯೂ ಟ್ರಾಫಿಕ್‌ ಸಮಸ್ಯೆ ಜನರು, ಅಂಗಡಿ ವರ್ತಕರು ಎದುರಿಸುತ್ತಿದ್ದಾರೆ ಇಲ್ಲಿಯೂ ಓರ್ವ ಪೇದೆ ನಿಲ್ಲುತ್ತಿಲ್ಲ. ಅಲ್ಲದೆ ನೆಹರು ಪಾರ್ಕ್‌(ಹಳೇ ಬಸ್‌ ನಿಲ್ದಾಣ)ನಲ್ಲಿ ವಾಹನಗಳ ನಿಲುಗಡೆಗೆ ಪೊಲೀಸರು ನಿರ್ಬಂಧ ಹೇರಿದರು. ಆದರೆ ಕಾಲ ಕಳೆದಂತೆ ಮತ್ತೆ ವಾಹನಗಳು ನೆಹರು ಪಾರ್ಕ್‌ನಲ್ಲಿ ಪಾರ್ಕಿಂಗ್‌ ಮಾಡುತ್ತಿದ್ದಾರೆ. ಸ್ಥಳೀಯ ಪೊಲೀಸರು ಸುಗಮ ಸಂಚಾರ ಪಟ್ಟಣ ಹಾಗೂ ಪ್ರವಾಸಿಗರಿಗೆ ಸಿಗಬೇಕು ಎಂಬ ತವಕದಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಎನ್.ಜಯಕುಮಾರ್‌ ಬಂದ ಹೊಸತದರಲ್ಲಿ ಪ್ರಚಾರ ಪಡೆದರು. ಆದರೆ ದಿನ ಕಳೆದಂತೆ ನೋ ಪಾರ್ಕಿಂಗ್‌, ಹಳೇ ಬಸ್‌ ನಿಲ್ದಾಣದ ಖಾಸಗಿ ವಾಹನಗಳಿಗೆ ನಿರ್ಬಂಧ, ಹೆದ್ದಾರಿ ಬದಿ ವಾಹನಗಳ ನಿಲುಗಡೆ ಹೆಚ್ಚಾಗಿ ಆಗುತ್ತಿವೆ.

ವಾಹನಗಳ ತಪಾಸಣೆ ಮಾಡುತ್ತಿಲ್ಲ:

ಪಟ್ಟಣದಲ್ಲಿ ಕುಡಿತ ವಾಹನ ಚಾಲನೆ ಮಾಡುವವ ಸಂಖ್ಯೆ ಹೆಚ್ಚುತಲಿದೆ. ಜೊತೆಗೆ ತ್ರಿಬಲ್‌ ರೈಡಿಂಗ್‌, ಹೆಲ್ಮೆಟ್‌ ಇಲ್ಲದೆ ಸಂಚರಿಸುವ ಸವಾರರನ್ನು ತಡೆದು ತಪಾಸಣೆ ಮಾಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಪೊಲೀಸರು ಸುಗಮ ಸಂಚಾರಕ್ಕೆ ಆದ್ಯತೆ ನೀಡಬೇಕು. ಟ್ರಾಫಿಕ್‌ ಕಿರಿಕಿರಿ ತಪ್ಪಬೇಕು ಎಂಬುದು ನಾಗರಿಕರು ಆಗ್ರಹವಾಗಿದೆ.