ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನಲ್ಲಿ ಕುಡಿಯುವ ನೀರು, ಶಿಕ್ಷಣ, ಆರೋಗ್ಯ, ನೀರಾವರಿ, ರಸ್ತೆ ಸೇರಿದಂತೆ ಇತರೆ ಯೋಜನೆಗಳಿಗೆ ಸರ್ಕಾರದಿಂದ ಸಾವಿರಾರು ಕೋಟಿ ಅನುದಾನ ಬಿಡುಗಡೆಗೊಳಿಸಿ ಕ್ಷೇತ್ರವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸಲಾಗಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.ತಾಲೂಕಿನ ಬಂಡೂರು ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಸಿಸಿ ಚರಂಡಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಿದ ನಂತರ ಮಾತನಾಡಿದ ಅವರು, ಪಟ್ಟಣದ ಆಸ್ಪತ್ರೆ, ಪಟ್ಟಣ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆ ಸಿದ್ಧಗೊಳಿಸಿ ಸರ್ಕಾರದಿಂದ ಅನುಮೋದನೆ ಪಡೆದು ಜನರ ಬಾವನೆಗೆ ತಕ್ಕಂತೆ ಬದುಕನ್ನು ಬದಲಾಯಿಸಲು ಕಾಮಗಾರಿಗಳು ಸಹಕಾರಿಯಾಗಿವೆ ಎಂದರು.
ಗ್ರಾಮೀಣ ಮತ್ತು ಪ್ರಮುಖ ಮುಖ್ಯ ರಸ್ತೆಗಳನ್ನು ಸಂಪೂರ್ಣವಾಗಿ ದುರಸ್ತಿಗೊಳಿಸಲಾಗಿದೆ. ಸುಮಾರು ಒಂದು ಸಾವಿರ ಕೋಟಿ ಅನುದಾನದಲ್ಲಿ ನಾಲಾ ಆಧುನೀಕರಣ ಕಾಮಗಾರಿ ಈಗಾಗಲೇ ನಡೆಯುತ್ತಿದೆ. ಕುಡಿಯುವ ನೀರಿನ ಸಮಸ್ಯೆಗಳನ್ನು ಸಂಪೂರ್ಣ ಬಗೆಹರಿಸಲಾಗಿದೆ. ಕಿರುಗಾವಲು ಬಹುಹಳ್ಳಿಗಳ ಕುಡಿಯುವ ನೀರಿನ ಯೋಜನೆಯೂ ಶೀಘ್ರದಲ್ಲಿಯೇ ಅಂತಿಮಗೊಳಿಸಿ ಸಾರ್ವಜನಿಕರಿಗೆ ಶುದ್ಧಕುಡಿಯುವ ನೀರು ಪೂರೈಕೆ ಮಾಡಲಾಗುವುದು ಎಂದರು.ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ನೂರಾರು ಕೋಟಿ ಸಿಎಸ್ಆರ್ ಅನುದಾನವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ವಿನಿಯೋಗಿಸಲಾಗಿದೆ. ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಹಾಗೂ ಮಲ್ಟಿಮೀಡಿಯಾ ಸೆಂಟರ್ಗಳನ್ನು ಸ್ಥಾಪಿಸಿದ ಹಿನ್ನೆಲೆಯಲ್ಲಿ ಕಳೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದ್ದು, ಪ್ರಸ್ತುತದಲ್ಲಿ ಶೇ.46ರಷ್ಟು ಸರ್ಕಾರಿ ಶಾಲೆಗಳಲ್ಲಿ ಪ್ರವೇಶಾತಿ ಹೆಚ್ಚಿದೆ ಎಂದರು.
ಹಿಂದುಳಿದ ಪ್ರದೇಶ ಎಂದು ಹಣೆಪಟ್ಟೆ ಕಟ್ಟಿದ್ದ ಮಳವಳ್ಳಿಯಲ್ಲಿ ಶಿಕ್ಷಣ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲಕ ಮೂಲ ಸೌಲಭ್ಯಕ್ಕೆ ಒತ್ತು ನೀಡಲಾಗಿದೆ ಎಂದು ವಿವರಿಸಿದರು.
ಮತದಾನ ಪಡೆಯುವುದು ಪ್ರತಿಯೊಬ್ಬರ ಹಕ್ಕಾಗಿದೆ. ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕಣೆಯಲ್ಲಿ ಎಲ್ಲರೂ ಭಾಗವಹಿಸುವ ಮೂಲಕ ಮತದಾನದ ಹಕ್ಕುನ್ನು ಪಡೆಯಬೇಕು. ಬಿಎಲ್ಓಗಳು ಅರ್ಜಿ ನೀಡಿದ್ದಾಗ ಮಾಹಿತಿ ಹಾಕಿ ವಾಪಸ್ ನೀಡಿದರೇ ಮಾತ್ರ ಮತದಾನಕ್ಕೆ ಅರ್ಹರಾಗುತ್ತೀರಿ. ಸರ್ಕಾರದ ಸೌಲಭ್ಯ ಪಡೆಯಲು ಮತದಾನ ಚೀಟಿ ಅತ್ಯವಶ್ಯಕವಾಗಿದೆ ಎಂದರು.
ತಾಲೂಕಿನ ನಂಜೇಗೌಡನದೊಡ್ಡಿ, ಹೂವಿನಕೊಪ್ಪಲು, ದೊಡ್ಡೇಗೌಡನಕೊಪ್ಪಲು, ಕಲ್ಕುಣಿ, ಹೊನಗನಹಳ್ಳಿ, ಕಿರುಗಾವಲು, ಅಣಸಾಲೆ, ಹಿಟ್ಟನಹಳ್ಳಿ ಕೊಪ್ಪಲು, ಬಂಡೂರು, ಕಲ್ಲಾರೇಪುರ ಟಿ.ಕಾಗೇಪುರ ಗ್ರಾಮಗಳಲ್ಲಿ ಸುಮಾರು 12 ಕೋಟಿಗೂ ಹೆಚ್ಚು ಅನುದಾನದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಬೀದಿಗಳ ರಸ್ತೆ ಚರಂಡಿ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರೆವೇರಿಸಿದರು.ಇದೇ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ಮನ್ಮುಲ್ ನಿರ್ದೇಶಕ ಆರ್.ಎನ್. ವಿಶ್ವಾಸ್, ಟಿಎಪಿಸಿಎಂಎಸ್ ಅಧ್ಯಕ್ಷ ಲಿಂಗರಾಜು, ನಿರ್ದೇಶಕ ಕೆ.ಜೆ.ದೇವರಾಜು, ಜಿಪಂ ಮಾಜಿ ಅಧ್ಯಕ್ಷ ರಾಮಚಂದ್ರ, ಮುಖಂಡರಾದ ಮಹೇಶ್, ಮಹದೇವು, ವಿಶ್ವ, ಶಾಂತರಾಜು, ಅಂಬರೀಷ್, ಶ್ರೀನಿವಾಸ್, ದೇವರಾಜು, ಸಂತೋಷ್ ಅಧಿಕಾರಿಗಳಾದ ಸೋಮಶೇಖರ್, ಅಪ್ಪಣ್ಣಬೋವಿ, ಅಭಿಷೇಕ್ ಸೇರಿದಂತೆ ಇತರರು ಇದ್ದರು.