ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿಯ ಕೋಟೆ ಆವರಣದ ಐತಿಹಾಸಿಕ ಕಮಲ ಬಸದಿಯಲ್ಲಿ ಐದು ದಿನಗಳ ಧರ್ಮಚಕ್ರ ಆರಾಧನಾ ಮಹೋತ್ಸವಕ್ಕೆ ಶುಕ್ರವಾರ ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ್ ರೋಷನ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಜೈನ ಸಮಾಜ ಶಾಂತಿಪ್ರೀಯ ಸಮಾಜವಾಗಿದ್ದು, ಎಲ್ಲ ಸಮಾಜದವರೊಂದಿಗೆ ಒಂದಾಗಿ ಹಾಗೂ ಎಲ್ಲರೊಂದಿಗೆ ಹೊಂದಿಕೊಂಡು ಹೋಗುವ ಸಮಾಜವಾಗಿದೆ. ಇಂದು ಐತಿಹಾಸಿಕ ಕೋಟೆ ಆವರಣದಲ್ಲಿ ಒಂದು ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ಈಗಾಗಲೆ ಕೋಟೆ ಆವರಣವನ್ನು ಅಭಿವೃದ್ಧಿಗೊಳಿಸಲಾಗಿದ್ದು, ಇದನ್ನು ಇದೇ ರೀತಿ ಕಾಪಾಡಿಕೊಂಡು ಹೋಗುವುದು ಎಲ್ಲರ ಜವಾಬ್ದಾರಿಯಾಗಿದೆ.‌ ಇಂದಿನ ಕಾರ್ಯಕ್ರಮದಲ್ಲಿ ಅನೇಕ‌ ಯುವಕ- ಯುವತಿಯರು ಭಾಗವಹಿಸಿದ್ದು ಮೆಚ್ಚುಗೆಯ ಸಂಗತಿ. ‌ಇಂತಹ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಸಂಸ್ಕಾರ ಬೆಳೆಯಲು ಕಾರಣವಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಹೋತ್ಸವ ಸಮಿತಿ ವತಿಯಿಂದ ಹಾಗೂ ಜೈನ ಸಮಾಜದ ವತಿಯಿಂದ ಗೌರವಿಸಲಾಯಿತು. ಸಮಾರಂಭದಲ್ಲಿ ಮಹೋತ್ಸವ ಸಮಿತಿಯ ಖಜಾಂಚಿ ಹಾಗೂ ಭರತೇಶ ಶಿಕ್ಷಣ ಸಂಸ್ಥೆ ಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ ಸ್ವಾಗತಿಸಿದರು. ಮೊದಲು ಬೆಳಿಗ್ಗೆ ಮಾಜಿ ಶಾಸಕರಾದ ವೀರಕುಮಾರ ಪಾಟೀಲ, ಸಂಜಯ ಪಾಟೀಲ, ವಕೀಲ ರವಿರಾಜ ಪಾಟೀಲ, ಉದ್ಯಮಿ‌ ಭರತ ಪಾಟೀಲ ಇನ್ನಿತರ ಗಣ್ಯರಿಂದ ಧ್ವಜಾರೋಹಣ ಮತ್ತು ಮಂಟಪ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಇಂದ್ರಜಿತ್ ‌ದೊಡ್ಡಣ್ಣವರ ಮತ್ತು ಭರತೇಶ ಬುಡವಿ ವಿಧಿ- ವಿಧಾನ ಮಾಡಿದರು. ಪಂಡಿತ ಅಮೋಲ ಉಪಾಧ್ಯೆ ಮತ್ತು ಮಹಾವೀರ ಉಪಾಧ್ಯೆ ಅವರು ಪೂಜಾ ವಿಧಿಗಳನ್ನು ನಡೆಸಿಕೊಟ್ಟರು. ‌

ಈ ಸಂದರ್ಭದಲ್ಲಿ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸುನಿಲ ಹನಮಣ್ಣವರ, ಕಾರ್ಯದರ್ಶಿ ಹೀರಾಚಂದ ಕಲಮನಿ, ಸನ್ಮತಿ ಕಸ್ತೂರಿ, ಅಭಿನಂದನ ಜಾಬನ್ನವರ, ರಾಜೇಂದ್ರ ಜಕ್ಕನ್ನವರ, ಅಭಯ ಅವಲಕ್ಕಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಪದ್ಮರಾಜ ವೈಜನ್ನವರ ನಿರೂಪಿಸಿದರು.