ರಾಮನಗರ: ರಾಜ್ಯ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಡಿ.ಕೆ.ಶಿವಕುಮಾರ್ ರವರ ಸ್ವಗ್ರಾಮ ಮತ್ತು ಕ್ಷೇತ್ರ ಸೇರಿ ಜಿಲ್ಲಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರು.
ಡಿ.ಕೆ.ಶಿವಕುಮಾರ್ ಹುಟ್ಟೂರಾದ ದೊಡ್ಡಾಲಹಳ್ಳಿ ಗ್ರಾಮ ಹಾಗೂ ಸ್ವ ಕ್ಷೇತ್ರ ಕನಕಪುರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಉಳಿದಂತೆ ರಾಮನಗರ, ಚನ್ನಪಟ್ಟಣ, ಮಾಗಡಿ ಹಾಗೂ ಹಾರೋಹಳ್ಳಿ ತಾಲೂಕುಗಳ ನಗರ ಹಾಗೂ ಗ್ರಾಮಗಳ ರಸ್ತೆಗಳ ಬದಿಯಲ್ಲಿ ಡಿಕೆಶಿ ಅವರಿಗೆ ಶುಭ ಕೋರುವ ಬ್ಯಾನರ್ ಗಳು ರಾರಾಜಿಸುತ್ತಿದ್ದವು.ಡಿಕೆಶಿ ಆಪ್ತ ಇಕ್ಬಾಲ್ ರಿಂದ ಬಿರಿಯಾನಿ ವ್ಯವಸ್ಥೆ:
ಪದಗ್ರಹಣ ಸಮಾರಂಭಕ್ಕೆ ತೆರಳುತ್ತಿದ್ದ ಜನರಿಗೆ ಬಿರಿಯಾನಿ ಪೂರೈಕೆರಾಮನಗರ: ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಪದಗ್ರಹಣ ಸಮಾರಂಭವನ್ನು ಕಣ್ತುಂಬಿಕೊಳ್ಳಲು ತೆರಳುತ್ತಿದ್ದ ಜನಸಾಮಾನ್ಯರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಡಿಕೆಶಿ ಆಪ್ತರಾದ ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ರವರು ಬಿರಿಯಾನಿ ವ್ಯವಸ್ಥೆ ಮಾಡಿದ್ದರು.
ಹಳೇ ಮೈಸೂರು ಭಾಗದ ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಗಳ ಜನರು ಪದಗ್ರಹಣ ಸಮಾರಂಭಕ್ಕಾಗಿ ಚಲ್ಲಘಟ್ಟ, ಕೆಂಗೇರಿ, ನಾಯಂಡಹಳ್ಳಿ ಮೆಟ್ರೋ ಜಂಕ್ಷನ್ ನಿಂದ ವಿಧಾನಸೌಧ ಜಂಕ್ಷನ್ ಗೆ ಮೆಟ್ರೋದಲ್ಲಿ ತೆರಳುತ್ತಿದ್ದರು.
ಈ ಹಿನ್ನೆಲೆಯಲ್ಲಿ ಬೆಂಗಳೂರು- ಮೈಸೂರು ಹೆದ್ದಾರಿಯ ಮಾಯಗಾನಹಳ್ಳಿ ಬಳಿ ಬಿರಿಯಾನಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಬಸ್ಸುಗಳಲ್ಲಿದ್ದ ಜನರಿಗೆ ಬಿರಿಯಾನಿ ಮತ್ತು ನೀರಿನ ಬಾಟಲ್ ನೀಡುತ್ತಿದ್ದ ದೃಶ್ಯ ಕಂಡು ಬಂದಿತು.
ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಅವರು ಯುವ ಕಾಂಗ್ರೆಸ್ ಮುಖಂಡರಾದ ಜಗದೀಶ್ , ರವಿ, ಅನಿಲ್ ಜೋಗೆಂದರ್, ಭೂಷಣ್, ವಸೀಂ, ಇನಾಯತ್ ಸೇರಿದಂತೆ ಹಲವರಿಗೆ ಬೆಂಗಳೂರಿಗೆ ತೆರಳುತ್ತಿದ್ದ ಜನರಿಗೆ ಬಿರಿಯಾನಿ ಒದಗಿಸುವ ಜವಾಬ್ದಾರಿ ವಹಿಸಿದ್ದರು.ಅಲ್ಲದೆ, ಮರಳವಾಡಿಯಲ್ಲಿ ಕಾಂಗ್ರೆಸ್ ಮುಖಂಡರು ಪದಗ್ರಹಣ ಸಮಾರಂಭಕ್ಕೆ ತೆರಳಲು ಸಾಧ್ಯವಾಗದ ಕಾರಣ ಎಲ್ ಇಡಿ ಸ್ಕ್ರೀನ್ ಅಳವಡಿಸಿ ನೇರ ಪ್ರಸಾರದ ವ್ಯವಸ್ಥೆ ಮಾಡಿದ್ದರು.
ನೇರ ಪ್ರಸಾರ ವೀಕ್ಷಣೆ ಮಾಡಿದ ಜನರಿಗಾಗಿ 650 ಕೆಜಿ ಚಿಕನ್ ಬಿರಿಯಾನಿ, ಚಿಕನ್ ಚಾಪ್ಸ್ ಹಾಗೂ ಸಿಹಿ ವಿತರಣೆ ಮಾಡಲಾಯಿತು.