- ಬಸ್ಸಲ್ಲಿ ಬಂದ ನಾನು 19 ಸಾವಿರ ಮತ ಪಡೆದಿದ್ದನ್ನು ಕಾಂಗ್ರೆಸ್ಸಿಗೆ ಸಹಿಸಲಾಗುತ್ತಿಲ್ಲ: ಅಫ್ಸರ್ ಕೊಡ್ಲಿಪೇಟೆ ಟೀಕೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಸ್ಸಿನಲ್ಲಿ ಪ್ರಯಾಣಿಸಿ ಬಂದರೂ, 19 ಸಾವಿರಕ್ಕೂ ಅಧಿಕ ಮತ ಪಡೆದ ಎಸ್‌ಡಿಪಿಐ ಅಭ್ಯರ್ಥಿ ಜನರ ಪ್ರೀತಿಗೆ ಪಾತ್ರವಾಗಿರುವುದು ಕಾಂಗ್ರೆಸ್ ನಾಯಕರಿಗೆ ಅಸಹನೀಯವಾಗಿದೆ ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ, ಪರಾಜಿತ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ತಿರುಗೇಟು ನೀಡಿದ್ದಾರೆ.

ಹಣ ಇಲ್ಲದವನಿಗೆ ಇಷ್ಟು ಮತ ಹೇಗೆ ಬಂದವು, ಎಸ್‌ಡಿಪಿಐ ಇಲ್ಲಿ ಬಿಜೆಪಿಗೆ ಸಹಕರಿಸಲು ಸ್ಪರ್ಧಿಸಿದೆಯೆಂಬ ಕಾಂಗ್ರೆಸ್ಸಿನ ನಾಯಕರ ಹೇಳಿಕೆಗಳು ಕ್ಷೇತ್ರದ ಜನರ ತೀರ್ಪನ್ನೇ ಅವಮಾನಿಸಿವೆ. ಎಸ್‌ಡಿಪಿಐ ವಿರುದ್ಧ ಕಾಂಗ್ರೆಸ್ಸಿನ ಅಧಿಕಾರಸ್ಥರು, ಮುಖಂಡರ ಇಂತಹ ಅಪಪ್ರಚಾರಗಳನ್ನು ನಾವು ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.


ರಾಜಕೀಯವನ್ನು ಹಣದಿಂದಲೇ ಅಳೆಯುವ ಮನೋಭಾವವೇ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ನಮ್ಮ ಬಳಿ ಹಣ ಬಲ ಇರಲಿಲ್ಲ. ಆದರೆ, ಜನರ ವಿಶ್ವಾಸ ಮತ್ತು ಸ್ವಾಭಿಮಾನವೇ ನಮ್ಮ ಶಕ್ತಿಯಾಗಿದೆ. 19 ಸಾವಿರ ಮತಗಳನ್ನು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ತಾವು ಪಡೆದಿದ್ದು, ಅವು ಖರೀದಿಸಿದ ಮತಗಳಲ್ಲ. ಜನರು ನೀಡಿದ ಸ್ವಾಭಿಮಾನದ ಮತಗಳು ಎಂದು ಅವರು ಹೇಳಿದ್ದಾರೆ.

ಎಸ್‌ಡಿಪಿಐ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಗೆ ಸಹಕರಿಸಿದೆಯೆಂಬ ಆರೋಪವು ಸಂಪೂರ್ಣ ಆಧಾರರಹಿತ ಹಾಗೂ ಹಾಸ್ಯಾಸ್ಪದ. ಎಸ್‌ಡಿಪಿಐ ಪ್ರತಿನಿತ್ಯವೂ ಬಿಜೆಪಿ ಹಾಗೂ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಯಾವುದೇ ರಾಜಿ ಇಲ್ಲದೇ, ಹೋರಾಟ ಮಾಡುವಂತಹ ರಾಜಕೀಯ ಪಕ್ಷವೆಂದು ಇಡೀ ದೇಶದಲ್ಲೇ ಗುರುತಿಸಿಕೊಂಡಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆಗೆ ಮೈತ್ರಿ ಮಾಡಿಕೊಂಡುವ ಕಾಂಗ್ರೆಸ್ ಪಕ್ಷ ನಮ್ಮ ಮೇಲೆ ಆರೋಪ ಮಾಡಲು ಯಾವ ನೈತಿಕತೆ ಉಳಿಸಿಕೊಂಡಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ನಾವು ಸಂವಿಧಾನ, ಸಾಮಾಜಿಕ ನ್ಯಾಯ ಮತ್ತು ಅಹಿಂದ ವರ್ಗಗಳ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದೇವೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಫಲಿತಾಂಶವು ಪರಂಪರಾಗತ ಪಕ್ಷಗಳ ವಿರುದ್ಧ ಜನರ ಅಸಮಾಧಾನವನ್ನು ತೋರಿಸಿದೆ. ಕಾಂಗ್ರೆಸ್ ನಾಯಕರು ನಮ್ಮ ವಿರುದ್ಧ ಸುಳ್ಳು ಆರೋಪ ಮಾಡುವ ಬದಲು ತಮ್ಮ ಆತ್ಮ ಪರಿಶೀಲನೆ ಮಾಡಿಕೊಳ್ಳಬೇಕು. ದಾವಣಗೆರೆ ದಕ್ಷಿಣ ಕ್ಷೇತ್ರದ ಸ್ವಾಭಿಮಾನಿ ಮತದಾರರಿಗೆ ಅಭಿನಂದಿಸುತ್ತೇವೆ ಎಂದು ತಿಳಿಸಿದ್ದಾರೆ.

ದಕ್ಷಿಣ ಕ್ಷೇತ್ರದ ಜನರ ಬೆಂಬಲವೇ ನಮ್ಮ ಶಕ್ತಿ. ನಿಮ್ಮ ಹಕ್ಕುಗಳಿಗಾಗಿ ನಮ್ಮ ಹೋರಾಟ ನಡೆಯುತ್ತದೆ. ನಮ್ಮ ವಿರುದ್ಧ ಕಾಂಗ್ರೆಸ್ಸಿನ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಸೇರಿದಂತೆ ಕೆಲವು ಮುಖಂಡರು ಮಾಡಿರುವ ಆರೋಪ ಕಾಂಗ್ರೆಸ್ಸಿಗರ ಮನಸ್ಥಿತಿಯನ್ನು ತೋರಿಸುತ್ತದೆ. ಇಲ್ಲಿ 19 ಸಾವಿರಕ್ಕೂ ಅಧಿಕ ಮತ ಪಡೆದ ಎಸ್‌ಡಿಪಿಐ ಅಭ್ಯರ್ಥಿ ಜನರ ಪ್ರೀತಿಗೆ ಪಾತ್ರವಾಗಿರುವುದು ಕಾಂಗ್ರೆಸ್ಸಿಗರಿಗೆ ಸಹಿಸಲಾಗುತ್ತಿಲ್ಲ ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ, ಪರಾಜಿತ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಹೇಳಿಕೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

- - -

-3ಕೆಡಿವಿಜಿ1, 2, 3: ಅಫ್ಸರ್ ಕೊಡ್ಲಿಪೇಟೆ.